ಡಿ.ಕೆ. ಶಿವಕುಮಾರ್ ದೂರವಾಣಿ ಕದ್ದಾಲಿಕೆ ಆಗ್ತಿರೋದು ನಿಜ!
ಬೆಂಗಳೂರು, ಆ. 23: ರಾಜಕೀಯ ನಾಯಕರ ಟೆಲಿಫೋನ್ ಕದ್ದಾಲಿಕೆ ವಿಚಾರ ಮತ್ತೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೆಲ ದಿನಗಳ ಹಿಂದೆ ತಮ್ಮ ದೂರವಾಣಿ ಕದ್ದಾಲಿಗೆ ಆಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಇದೀಗ ಅದೇ ಆರೋಪವನ್ನು ಡಿಕೆಶಿ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ಮಾಡಿದ್ದಾರೆ.
Recommended Video
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ಡಿ.ಕೆ. ಸುರೇಶ್ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಫೋನ್ ಟ್ಯಾಪ್ ಆಗಿರೋದು ನಿಜ ಎಂದಿದ್ದಾರೆ. ದೂರವಾಣಿ ಕದ್ದಾಲಿಕೆ ಬರಿ ಆರೋಪವಲ್ಲ, ಅದು ಸತ್ಯ. ಕಳೆದ 15 ದಿನಗಳಿಂದ ಮಾತಾಡಲು ಅಡಚಣೆ ಆಗುತ್ತಿರುವುದು ನಿಜ. ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಬಿಜೆಪಿಯವರು ಇಂತಹ ವಿಚಾರಗಳಲ್ಲಿ ತಜ್ಞರು. ಇದನ್ನು ಲಘುವಾಗಿ ಪರಿಗಣಿಸಲು ಆಗುವುದಿಲ್ಲ. ದೂರನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಗೃಹ ಸಚಿವ ಬೊಮ್ಮಾಯಿ ಅವರು ಲಘುವಾಗಿ ಮಾತನಾಡಬಾರದು ಎಂದಿದ್ದಾರೆ.
ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ರಾಜ್ಯ ಸರ್ಕಾರ ಸ್ಪಂಧಿಸದೇ ಇದ್ದಲ್ಲಿ, ನಾನೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಆದರೆ ಡಿಜೆ ಹಳ್ಳಿ ಪ್ರಕರಣಕ್ಕೂ ಇವರ ಫೋನ್ ಟ್ಯಾಪ್ ಆಗಿರುವುದಕ್ಕೂ ಸಂಬಂಧವಿಲ್ಲ. ಡಿ.ಜೆ. ಹಳ್ಳಿ ಪ್ರಕರಣ ಮುಚ್ಚಿಹಾಕೋಕೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ವಾಸ್ತವಾಂಶವೇ ಬೇರೆ ಇದೆ. ಬಿಬಿಎಂಪಿ ಚುನಾವಣೆ ಮುಂದಿದೆ. ಅದಕ್ಕೆ ಬಿಜೆಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆ ಎಂದು ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಗಲಭೆ ಪ್ರಕರಣದಲ್ಲಿ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡಿದ್ದಾರೆ. ಈಗ ಆ ಪ್ರಕರಣವನ್ನು ಬಿಬಿಎಂಪಿ ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ಡಿಜೆ ಹಳ್ಳಿ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯವಿದೆ. ವೈಫಲ್ಯ ಮುಚ್ಚಿಹಾಕಲು ಇದನ್ನು ಸೃಷ್ಟಿಮಾಡುತ್ತಿದ್ದಾರೆ. ಗುಪ್ತಚರ ವೈಫಲ್ಯವೇ ಇದಕ್ಕೆ ಕಾರಣ. ಅದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.