'ಬಿಜೆಪಿಯಲ್ಲಿ ಗೌಣವಾದ ಅನಂತಕುಮಾರ್ ಹೆಗಡೆ'
ಬೆಂಗಳೂರು, ಫೆ. 02: ಉತ್ತರ ಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಯಾರಿಗೂ ಬೇಡವಾದ ವಸ್ತುವಾಗಿದ್ದಾರೆ, ಈಗ ಅವರು ಬಿಜೆಪಿಗೂ ಬೇಡವಾಗಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೋರಾಟಗಾರರು ಶಂಡರು ಎಂಬ ಹೇಳಿಕೆಗೆ ಬೆಂಗಳೂರಿನಲ್ಲಿ ಡಿ.ಕೆ. ಸುರೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹೆಗಡೆ ಹೋರಾಟಗಾರರಿಗೆ ಏನೇನೊ ಮಾತನಾಡುತ್ತಿದ್ದಾರೆ. ಬೆಂಗಳೂರಿನ ಜಗತ್ಪ್ರಸಿದ್ಧ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹೆಗಡೆಗೆ ಚೆಕ್ ಮಾಡಿಸುವುದು ಒಳಿತು ಬಿಜೆಪಿ ನಾಯಕರಿಗೆ ಸಲಹೆ ಕೊಟ್ಟಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು ಇರದೇ ಹೋಗಿದ್ದರೆ ಹೆಗಡೆಗೆ ಇಂದು ಮಾತನಾಡುವ ಅವಕಾಶವೇ ಇರುತ್ತಿರಲಿಲ್ಲ. ಬ್ರಿಟಿಷರ ಆಳ್ವಿಕೆಯೇ ಇರುತ್ತಿದ್ದರೆ ಹೆಗಡೆಗೂ ಮಾತನಾಡುವ ವಾಕ್ ಸ್ವಾತಂತ್ರ್ಯ ಕೂಡ ಇರುತ್ತಿರಲಿಲ್ಲ.
ಇಷ್ಟೊಂದು ಧೈರ್ಯವಾಗಿ ಮಾತನಾಡುತ್ತಿದ್ದಾರೆ ಅಂದ್ರೆ ಸ್ವಾತಂತ್ರ್ಯ ಹೋರಾಟಗಾರರೇ ಕಾರಣ. ಹೋರಾಟಗಾರರು ಹೋರಾಟ ಮಾಡದೇ ಇದ್ದರೆ ನಮಗೆ ಸ್ವಾತಂತ್ರ್ಯವೆ ಇರುತ್ತಿರಲಿಲ್ಲ. ಬಿಜೆಪಿಯಲ್ಲಿ ಅನಂತಕುಮಾರ್ ಹೆಗಡೆ ಗೌಣವಾಗಿದ್ದಾರೆ. ಮತ್ತೆ ಅವರನ್ನು ಬಿಜೆಪಿಯವರು ಗುರುತಿಸಿ ಅಧಿಕಾರ ಕೊಡಲಿ ಎಂದು ಅಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು, ಮಾಹಾತ್ಮಾ ಗಾಂಧೀಜಿ ಅವರ ಮೇಲೆ ಬಿಜೆಪಿ ನಾಯಕರಿಗೆ ಸ್ವಲ್ಪವಾದರೂ ಗೌರವ ವಿದ್ದರೆ ತಕ್ಷಣ ಅನಂತ್ ಕುಮಾರ ಹೆಗಡೆಯನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಡಿ.ಕೆ. ಸುರೇಶ್ ಆಗ್ರಹಿಸಿದ್ದಾರೆ.