ಲಾಲ್ಬಾಗ್ 'ಅಪ್ಪು' ಫಲಪುಷ್ಪ ಪ್ರದರ್ಶನಕ್ಕೆ 8.34ಲಕ್ಷಕ್ಕೂ ಹೆಚ್ಚು ಜನ!
ಬೆಂಗಳೂರು ಆಗಸ್ಟ್ 16: ಕನ್ನಡದ ಕಣ್ಮಣಿ ಡಾ.ರಾಜ್ಕುಮಾರ್ ಹಾಗೂ ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್ಕುಮಾರ್ ಕುರಿತಾದ ಲಾಲ್ಬಾಗ್ ಉದ್ಯಾನದಲ್ಲಿನ 212ನೇ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬಿದ್ದಿದ್ದು, ಲಕ್ಷಾಂತರ ಜನ ಸಾಕ್ಷಿಯಾದರು. ಸೋಮವಾರ ಒಂದೇ ದಿನ ಉದ್ಯಾನಕ್ಕೆ 2.60ಲಕ್ಷಕ್ಕೂ ಅಧಿಕ ಮಂದಿ ಭೇಟಿ ಕೊಟ್ಟಿದ್ದಾರೆ.
ಕರ್ನಾಟಕ ತೋಟಗಾರಿಕೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದಿಂದ ಆಗಸ್ಟ್ 15ರವರೆಗೆ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಆಗಸ್ಟ್ 5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಅಂದಿನಿಂದ ಕೊನೆ ದಿನ ಸೋಮವಾರದವರೆಗೆ ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಸುಮಾರು 8.34ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದು, ಇದರಿಂದ ಒಟ್ಟು 3.31ಕೋಟಿ ರೂ.ಹಣ ಸಂಗ್ರಹವಾಗಿದೆ.
ಬೆಂಗಳೂರು; ಕೆಐಎನಲ್ಲಿ 20 ಮೀಟರ್ ಉದ್ದದ ಸ್ಮಾರಕ ಶಿಲ್ಪ ನಿರ್ಮಾಣ
ರಜಾ ದಿನವಾದ್ದರಿಂದ ಭಾನುವಾರ ಒಂದೇ ದಿನ ವಯಸ್ಕರು, ವಿದ್ಯಾರ್ಥಿಗಳು, ಮಕ್ಕಳ ಸೇರಿ ಸುಮಾರು 1.40ಲಕ್ಷ ಮಂದಿ ಆಗಮಿಸಿದ್ದರು. ಕೊನೆ ದಿನವಾದ ಸೋಮವಾರ (ಆ.15) ಒಟ್ಟು 2.99 ಲಕ್ಷ ಮಂದಿ ಆಗಮಿಸಿದ್ದರು, ಅವರಿಂದ ಟಿಕೆಟ್ ರೂಪದಲ್ಲಿ ಒಟ್ಟು 90.50ಲಕ್ಷ ರೂ.ಹಣ ಬಂದಿದೆ.
ಕುಂದದ ಅಪ್ಪು ಮೇಲಿನ ಪ್ರೀತಿ, ಅಭಿಮಾನ
ನಟ ದಿ.ಡಾ.ಪುನೀತ್ ರಾಜ್ ಕುಮಾರ್ ನಿಧನರಾಗಿ (ಅ.29) ಒಂದು ವರ್ಷ ಸಮೀಪಿಸುತ್ತಿದ್ದರು ಅವರ ಮೇಲಿಟ್ಟ ಜನರ ಪ್ರೀತಿ, ಅಭಿಮಾನ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಕಳೆದ ಹತ್ತು ದಿನ ಕಂಡು ಬಂದ ಜನಸಾಗರವೇ ಸಾಕ್ಷಿಯಾಗಿದೆ.
ಭಾರಿ ಮಳೆ ಕಾರಣಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ಆರಂಭದಲ್ಲಿ ಅಷ್ಟಾಗಿ ಜನ ಬಾರದಿದ್ದರೂ ನಂತರ ಹಂತ ಹಂತವಾಗಿ ಉದ್ಯಾನಕ್ಕೆ ಬರುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು.
ವಾರಾಂತ್ಯಕ್ಕೆ ಹರಿದು ಬಂದ ಜನಸಾಗರ
ಕಳೆದ ಶನಿವಾರ, ಭಾನುವಾರ ಹಾಗೂ ಸೋಮವಾರ ಕಚೇರಿ, ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಸಸ್ಯಕಾಶಿಯಲ್ಲಿ ಕಿಕ್ಕಿರಿದು ಜನರು ಸೇರಿದರು. ಸ್ಥಳೀಯ ಸೇರಿದಂತೆ ವಿದೇಶದಿಂದ ತರಿಸಿದ್ದ ಬಣ್ಣ ಬಣ್ಣದ ಹೂಗಳಲ್ಲಿ ಉದ್ಯಾನದ ಗಾಜಿನ ಮನೆಯಲ್ಲಿ ಅರಳಿದ್ದ 'ಶಕ್ತಿಸೌಧ, ಡಾ.ರಾಜ್ರ ಗಾಜನೂರಿನ ಮನೆ, ಪನೀತ್, ಪಾರ್ವತಮ್ಮ ಮತ್ತು ಡಾ.ರಾಜ್ರ ಮೂರ್ತಿಗಳನ್ನು ಜನ ಕಣ್ತುಂಬಿಕೊಂಡರು. ಕೊನೆ ಎರಡು ದಿನ ಪುಷ್ಪಗಳಲ್ಲಿ ಸಿದ್ದಗೊಂಡ ನೆಚ್ಚಿನ ನಟನನ್ನು ನೋಡಲು ಗಾಜಿನ ಮನೆ ಮುಂದೆ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರು. ನೂಕು ನುಗ್ಗಲಿನಲ್ಲೇ ಪ್ರದರ್ಶನ ಕಣ್ತುಂಬಿಕೊಂಡರು. ಅಪ್ಪುವಿನ ಭಾವಚಿತ್ರ, ಮೂರ್ತಿಗಳ ಮುಂದೆ ನಿಂತಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಸಾಮಾನ್ಯವಾಗಿತ್ತು.
ಇನ್ನು ಉದ್ಯಾನದ ಒಳಗೆ ಹೊರಗೆ ತಿಂಡಿ ತಿನಿಸಿನ ಮಳಿಗೆಗಳ ಕಾರುಬಾರು ಹೆಚ್ಚಿತ್ತು. ಬಣ್ಣ ಬಣ್ಣದ ಬಲೂನ್ ಆಟಿಕೆಗಳು ಮಕ್ಕಳನ್ನು ಸೆಳೆದರೆ, ಬಗೆ ಬಗೆಯ ರುಚಿಯಾದ ತಿನಿಸುಗಳು ಎಲ್ಲರ ಬಾಯಲ್ಲಿ ನೀರು ತರಿಸಿದವು. ಉದ್ಯಾನ ಒಳಗೆ ಎಲ್ಲೆಂದರಲ್ಲಿ ನೀರಿನ ಬಾಟಲಿಗಳು, ಕಸ, ಪೇಪರ್, ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬಂತು.
ನಿರೀಕ್ಷೆ ಮೀರಿ ಸ್ಪಂದನೆ
ಪ್ರತಿ ವರ್ಷದಂತೆ ಈ ವರ್ಷವು ಸ್ವಾತಂತ್ರೋತ್ಸವ ಅಂಗವಾಗಿ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಆಯೋಜಿಸಿತ್ತು. ಆದರೆ ಕಳೆದ ಎರಡು ವರ್ಷ ಕೋವಿಡ್ ಕಾರಣಕ್ಕೆ ಲಾಲ್ಬಗ್ನಲ್ಲಿ ಫಲಪುಷ್ಪ ಪ್ರದರ್ಶನ ಆಗಿರಲಿಲ್ಲ. ಇದು ಸಾರ್ವಜನಿಕರಲ್ಲಿ ನಿರಾಸೆ ಉಂಟು ಮಾಡಿತ್ತು. ಇನ್ನು ವಿಶೇಷವಾಗಿ ಇದು 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಾಗೂ ಇಡಿ ನಾಡು ಹೆಮ್ಮೆ ಪಡುವ ನಟ ಅಗಲಿ ವರ್ಷ ಸಮೀಪಸುತ್ತಿರುವ ಗಳಿಗೆ ಆಗಿದ್ದರಿಂದ ನಿರೀಕ್ಷೆಗೂ ಮೀರಿ ಜನರಿಂದ ಬರಪೂರ ಸ್ಪಂದನೆ ದೊರೆತಿದೆ. ಸರಾಸರಿ ಸುಮಾರು ಒಂಭತ್ತು ಲಕ್ಷದಷ್ಟು ಜನರು ಫಲಪುಷ್ಪ ಕಂಡು ಸಂಭ್ರಮಿಸಿದ್ದು ಇದೇ ಮೊದಲು ಎಂದು ತೋಟಗಾರಿಕೆ ಮೂಲಗಳು ತಿಳಿಸಿವೆ.
ತುಂಬಿ ತುಳುಕಿದ ಮೆಟ್ರೋ, ಬಸ್ಗಳು
ಸೋಮವಾರ ಲಾಲ್ಬಾಗ್ ಒಳಗೆ ಗಾಜಿನ ಮನೆ ಸುತ್ತಮುತ್ತ, ಕೆರೆ, ಕಲ್ಲು ಬಂಡೆ ಹಾಗೂ ಹೊರಗೆ ನಾಲ್ಕುದ್ವಾರಗಳ ಬಳಿ ಎಲ್ಲಿ ನೋಡಿದರೂ ಅಲ್ಲಿ ಜನರೇ ತುಂಬಿ ಕೊಂಡಿದ್ದರು. ಹೆಚ್ಚು ಮಂದಿ ನಿರೀಕ್ಷೆ ಹಿನ್ನೆಲೆ ನಾಲ್ಕು ಪ್ರವೇಶ ದ್ವಾರಗಳಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್ ತೆರೆಯಲಾಗಿತ್ತು. ಲಾಲ್ಬಾಗ್ ಮೆಟ್ರೋ ನಿಲ್ದಾಣಕ್ಕೂ ಮತ್ತು ಉದ್ಯಾನದ ಗೇಟ್ವರೆಗೆ ರಸ್ತೆ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ಸಾಗಿದರು. ಉದ್ಯಾನ ಸುತ್ತಮುತ್ತ ವಾಹನ ಸಂಚಾರ ದಟ್ಟಣೆ ಕಂಡು ಬಂತು. ಉದ್ಯಾನ ಭಾಗದಿಂದ ಹೊರಡುವ ಬಿಎಂಟಿಸಿ ಬಸ್ಗಳು ತುಂಬಿತುಳುಕುತ್ತಿದ್ದವು.
ಈ ಕಾರಣಕ್ಕೆ ಜನರಿಗೆ ಅನುಕೂಲವಾಗಲೆಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಟಿಕೆಟ್ ಕಾಯಿನ್ಗೆ ಬದಲಾಗಿ ಮೂರು ದಿನ ಪೇಪರ್ ಟಿಕೆಟ್ ವಿತರಣೆ ವ್ಯವಸ್ಥೆ ಮಾಡಿತ್ತು. ಹೀಗಿದ್ದರೂ ಹೆಚ್ಚು ಜನ ಆಗಮಿಸಿದ್ದರಿಂದ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ಗಾಗಿ ಜನರ ಪರದಾಡಿದ್ದು ಕಂಡು ಬಂತು.
Recommended Video