ವಿಧಾನಸೌಧದಲ್ಲಿ ಸಿಕ್ಕ ಹಣ ಚಿನ್ನ ಗಿರವಿ ಇಟ್ಟು ತಂದಿದ್ದು: ವಾದ ಮಂಡನೆ
ಬೆಂಗಳೂರು, ಜನವರಿ 17: ವಿಧಾನಸೌಧದಲ್ಲಿ ಟೈಪಿಸ್ಟ್ ಒಬ್ಬರ ಬಳಿ ಸಿಕ್ಕ 25.76 ಲಕ್ಷ ಹಣ ಒಡೆವೆ ಗಿರವಿ ಇಟ್ಟು ತಂದಿದ್ದ ಹಣವಂತೆ! ಹೀಗೆಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ.
ಎರಡು ವಾರದ ಹಿಂದೆ ವಿಧಾನಸೌಧದಲ್ಲಿ ಸಚಿವರೊಬ್ಬರ ಕಚೇರಿಯ ಟೈಪಿಸ್ಟ್ ಮೋಹನ್ ಎಂಬುವರ ಬಳಿ ಬರೋಬ್ಬರಿ 25.76 ಲಕ್ಷ ಹಣ ದೊರೆತಿತ್ತು. ಆ ಹಣಕ್ಕೆ ಲೆಕ್ಕವಿಲ್ಲ ಅದು ಲಂಚದ ಹಣ ಎನ್ನಲಾಗಿತ್ತು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು.
ಆದರೆ ಆ ಹಣ ಮೋಹನ್ ಅವರದ್ದೇ, ಅದನ್ನು ಅವರು ಚಿನ್ನ ಗಿರವಿ ಇಟ್ಟು ತಂದಿದ್ದರು ಎಂದು ಇಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ.
ಆರೋಪಿ ಮೊಹನ್ ಪರ ವಾದ ಮಂಡಿಸಿದ ವಕೀಲ ಶಾಮಸುಂದರ್ ಅವರು, ಅಷ್ಟೂ ಹಣವನ್ನು ಚಿನ್ನ ಗಿರವಿ ಇಟ್ಟು ತರಲಾಗಿದೆ ಎಂದು ಸೆಷನ್ಸ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಎಸಿಬಿ ಪರ ವಕೀಲ ರಮೇಶ್ ಬಾಬು ಅವರು ಇದನ್ನು ಪ್ರಶ್ನೆ ಮಾಡಿದ್ದು, ಇಷ್ಟು ಹಣ ಬೇಕೆಂದರೆ ಕನಿಷ್ಟ ಮೂರು ಕೆ.ಜಿ ಚಿನ್ನ ಗಿರವಿ ಇಡಬೇಕಾಗುತ್ತದೆ ಎಂದು ಆಕ್ಷೇಪಣೆ ಎತ್ತಿದರು.
ಇದಕ್ಕೆ ಉತ್ತರಿಸಿದ ಆರೋಪಿ ಪರ ವಕೀಲರು, ಗಿರವಿ ಇಟ್ಟು ಹಣ ತಂದ ಬಗ್ಗೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿ ಕಾಲಾವಕಾಶ ಪಡೆದಿದ್ದಾರೆ.
ಆರೋಪಿ ಮೋಹನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಬ್ಬರೂ ವಕೀಲರ ವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿಯ ತೀರ್ಪನ್ನು ಜನವರಿ 18 ಕ್ಕೆ ಕಾಯ್ದಿರಿಸಿದೆ.