ಹಲ್ಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡ ಮೊಹಮ್ಮದ್ ನಲಪಾಡ್
ಬೆಂಗಳೂರು, ಫೆಬ್ರವರಿ 20: ತಾವು ಹಲ್ಲೆ ಮಾಡಿರುವುದು ಸತ್ಯ ಎಂದು ಮೊಹಮ್ಮದ್ ನಲಪಾಡ್ ಅವರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ತಪ್ಪೊಪ್ಪಿಗೆ ಬಿಟ್ಟರೆ ಇನ್ನಾವುದೇ ಪ್ರಶ್ನೆಗೆ ಅವರು ಸರಿಯಾಗಿ ಉತ್ತರಿಸಿಲ್ಲ ಎನ್ನಲಾಗಿದೆ.
ಬಂಧಿತ ಮೊಹಮ್ಮದ್ ನಲಪಾಡ್ ಹಾಗೂ ಸಹಚರರನ್ನು ಯುಬಿಸಿಟಿಯ ಫರ್ಜಿ ಹೊಟೇಲ್ಗೆ ಕರೆದು ಕೊಂಡು ಹೋಗಿ ಪೊಲೀಸರು ಮಹಜರು ನಡೆಸಿದರು. ಅಲ್ಲಿನ ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲನೆ ನಡೆಸಿದರು.
ಮಗನ ಅಟ್ಟಹಾಸಕ್ಕೆ ಅಪ್ಪನ ಕ್ಷಮಾಪಣೆ ಪತ್ರ
ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡ ಮೊಹಮ್ಮದ್ ನಲಪಾಡ್ ಅವರು ಪೊಲೀಸರ ಇನ್ನಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿಲ್ಲ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿರುವುದು ತಿಳಿದುಬಂದಿದೆ.
ಮೊಹಮ್ಮದ್ ನಲಪಾಡ್ ಜೊತೆಗೆ ಆತನ ಸಹಚರರಾದ ಅರುಣ್ ಬಾಬು, ಮಂಜುನಾಥ, ಅಶ್ರಪ್, ಬಾಲಕೃಷ್ಣ, ಅಭಿಷೇಕ್, ನಾಸಿರ್ ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ. ಫರ್ಜಿ ಹೊಟೆಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತಮ್ಮ ಸುಪರ್ಧಿಗೆ ಪಡೆದಿದ್ದಾರೆ.
ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ಅವರಿಂದ ಹಲ್ಲೆ ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಗೃಹಮಂತ್ರಿ ರಾಮಲಿಂಗಾ ರೆಡ್ಡಿ ಅವರು ಇಂಥಹಾ ಗೂಂಡಾಗಳನ್ನು ಬಂಧಿಸಿ ಒಳಗೆ ಹಾಕಬೇಕು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹಾ ಗೂಂಡಾಗಳಿಂದ ಪಕ್ಷದ ವರ್ಚಸ್ಸು ಹಾಳಾಗುತ್ತದೆ ಇಂಥಹವರನ್ನು ಜೈಲಿಗೆ ಅಟ್ಟಬೇಕು ಎಂದಿದ್ದಾರೆ.
ಪೊಲೀಸ್ ಉನ್ನತ ಅಧಿಕಾರಿಗಳಿಗೆ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಮಾಡಿ, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಸೂಚಿಸಿರುವುದಾಗಿ ಹೇಳಿದ್ದಾರೆ.
ವಿಧಾನಸಭಾ ಕಲಾಪದಲ್ಲಿಯೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಈ ವಿಷಯ ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದರು. ಇದು ಮಾತ್ರವಲ್ಲದೆ ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಅವರ ಗೂಂಡಾ ಗಿರಿಯ ಬಗ್ಗೆಯೂ ಜಗದೀಶ್ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಮೊಹಮ್ಮದ್ ಹ್ಯಾರಿಸ್ ಮೇಲೆ ಕ್ರಮ ಜರುಗಿಸಲಾಗುತ್ತಿದ್ದು, ನಾರಾಯಣಸ್ವಾಮಿ ಮೇಲೆ ಕೂಡಲೇ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಹೇಳಿದರು.