DSS vs RSS : ಮೀಸಲಾತಿ ಹೇಳಿಕೆ ಸಮರ್ಥನೆ, ಖಂಡನೆ, ವಿವರಣೆ
ನವದೆಹಲಿ, ಆಗಸ್ಟ್ 21: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದ ತುಣುಕೊಂದು ಮೀಸಲಾತಿ ಪರ ವಿರೋಧ ಚರ್ಚೆಗೆ ನಾಂದಿ ಹಾಡಿತು. ಈ ಬಗ್ಗೆ ಅನಗತ್ಯ ವಿವಾದ ಸೃಷ್ಟಿಯಾಗುತ್ತಿದೆ ಎಂಬುದನ್ನು ಅರಿತ ಆರೆಸ್ಸೆಸ್ ಸ್ಪಷ್ಟನೆಯನ್ನು ನೀಡಿದೆ. ಆದರೆ, ಭಾಗವತ್ ಅವರ ಹೇಳಿಕೆ ದಲಿತ ವಿರೋಧಿ ಎಂದು ದಲಿತ ಹಕ್ಕುಗಳ ಸಮಿತಿ ಖಂಡಿಸಿದೆ.
ಮನುವಾದಿ ಗುಂಗಿನಲ್ಲಿ ಮಾತನಾಡುವ ಆರ್.ಎಸ್.ಎಸ್. ಮುಖಂಡರಾದ ಮೋಹನ್ ಭಾಗವತ್ರವರ ದಲಿತ ವಿರೋಧಿ ಹೇಳಿಕೆಯನ್ನು ದಲಿತ ಹಕ್ಕುಗಳ ಸಮಿತಿ(ಡಿ.ಹೆಚ್.ಎಸ್.) ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿ ತೀವ್ರವಾಗಿ ಖಂಡಿಸಿದ್ದಾರೆ.
ಜಾತಿಪದ್ಧತಿ, ಅಸ್ಪೃಶ್ಯತೆ ನಿರ್ಮೂಲನೆ ಜೀವಂತವಾಗಿರುವಾಗ ದಲಿತರಿಗೆ 'ಮೀಸಲಾತಿ' ಸವಲತ್ತು ವಿರೋಧಿಸುವುದು ಅಮಾನವೀಯ ಕೃತ್ಯವಾಗುತ್ತದೆ. ಶತಮಾನಗಳಿಂದಲೂ ಭೂಮಿ, ವಿದ್ಯೆಯಿಂದ ವಂಚಿಸಿ ಊರಾಚೆಯಿಟ್ಟ ದಲಿತರಿಗೆ ಮೀಸಲಾತಿ ನೀಡಿರುವುದು ಮೋಹನ್ ಭಾಗವತರವರಿಗೆ ಅರಗಿಸಿಕೊಳ್ಳಲಾಗದ ಚರ್ಚೆಯ ವಿಷಯವಾಗಿದೆ.
'ಮೀಸಲಾತಿ' ಜಾರಿಯಿಂದ ಎಷ್ಟು ದಲಿತರು ಸೌಲಭ್ಯ ಪಡೆದಿದ್ದಾರೆ, ಎಷ್ಟು ಅಭಿವೃದ್ಧಿ ಹೊಂದಿದ್ದಾರೆ ಎಂಬ ಸತ್ಯ ಮೋಹನ್ ಭಾಗವತ್ ರವರಿಗೆ ಅರ್ಥವಾಗುವುದಿಲ್ಲವೇಕೆ? ಇಲ್ಲಿ ದಲಿತರ ಮೇಲೆ ದೌರ್ಜನ್ಯ, ಕ್ರೂರ ಅಸ್ಪೃಶ್ಯತೆ ಆಚರಣೆ, ಸಾಮಾಜಿಕ ಬಹಿಷ್ಕಾರ ನಡೆಯುತ್ತಿರುವ ಬಗ್ಗೆ ಆರ್.ಎಸ್ಎಸ್. ಮುಖಂಡರು ಮಾತನಾಡುವುದಿಲ್ಲವೇಕೆ. ಇಂದಿಗೂ ಶೇ. 30% ರಷ್ಟು ದಲಿತರು ಕೇವಲ 2 ಎಕರೆ ಗಿಂತ ಕಡಿಮೆ ಭೂಮಿ ಉಳ್ಳವರಾಗಿದ್ದಾರೆ. ಶೇ. 52% ದಲಿತರಿಗೆ ಭೂಮಿಯೇ ಇಲ್ಲ. ಶೇ. 80% ದಲಿತರು ಕೃಷಿ ಕೂಲಿಕಾರರಾಗಿದ್ದಾರೆ. ವಿಧ್ಯೆಯಿಂದ ವಂಚಿತರಾದ ದಲಿತರ ಸಂಖ್ಯೆ ಶೇ. 60%.
ದಿನನಿತ್ಯ ದಲಿತರ ಮೇಲೆ ಜಾತಿ ದೌರ್ಜನ್ಯ ನಡೆಯುತ್ತಿದೆ. ದಲಿತರ ಬದುಕು ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿರುವಾಗ ಖಾಸಗೀಕರಣ ನೀತಿಯಿಂದ ಮೀಸಲಾತಿ ಸಿಗದೇ ಇರುವಾಗ, ನಿರುದ್ಯೋಗದಿಂದ ಬಳಲುತ್ತಿರುವಾಗ ಮಾನವೀಯತೆ ಇಲ್ಲದ ಇಂತಹ ಕ್ರೂರ ಹಿಂದುತ್ವವಾದಿಗಳ 'ಮೀಸಲಾತಿ' ವಿರೋಧಿ ಹೇಳಿಕೆಯನ್ನು ದಲಿತ ಹಕ್ಕುಗಳ ಸಮಿತಿ (ಡಿ.ಹೆಚ್.ಎಸ್.) ಉಗ್ರವಾಗಿ ಖಂಡಿಸುತ್ತದೆ. ಜಾತಿ ಪದ್ಧತಿ, ಅಸ್ಪೃಶ್ಯತೆ ನಿರ್ಮೂಲನೆ ಆಗುವವರೆಗೂ ಮೀಸಲಾತಿ ಇರಬೇಕಾಗುತ್ತದೆ. ಎಲ್ಲಾ ಬ್ಲಾಕ್ ಲಾಗ್ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕೆಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸುತ್ತದೆ.
ಆರೆಸ್ಸೆಸ್ ಸ್ಪಷ್ಟೀಕರಣ
ಸರಸಂಘಚಾಲಕ ಮೋಹನ್ ಭಾಗವತಜೀಯವರ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದ ತುಣುಕೊಂದರ ಮೇಲೆ ಅನಾವಶ್ಯಕ ವಿವಾದವೆದ್ದಿರುವುದರ ಕುರಿತು ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್ ಕುಮಾರ್ ಜೀಯವರ ಸ್ಪಷ್ಟನೆ:
"ಸರಸಂಘಚಾಲಕ ಮೋಹನ್ ಭಾಗವತಜೀಯವರ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದ ತುಣುಕೊಂದರ ಮೇಲೆ ಅನಾವಶ್ಯಕ ವಿವಾದವೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದಲ್ಲಿ ಸದ್ಭಾವನಾಪೂರ್ಣವಾಗಿ ಪರಸ್ಪರರ ಮಧ್ಯೆ ಮಾತುಕತೆಯ ಆಧಾರದಲ್ಲಿ ಎಲ್ಲ ಪ್ರಶ್ನೆಗಳ ಸಮಾಧಾನದ ಮಹತ್ವವನ್ನು ತಿಳಿಯಪಡಿಸುತ್ತ ಅವರು ಆರಕ್ಷಣೆಯಂತಹ ಸಂವೇದನಾಶೀಲ ವಿಷಯದ ಕುರಿತು ವಿಚಾರ ಮಾಡುವಂತೆ ಆಹ್ವಾನ ನೀಡಿದರು. ಆರಕ್ಷಣೆಯ ಕುರಿತಾಗಿ ಸಂಘದ ನಿಲುವಿನ ವಿಷಯದಲ್ಲಿ ಅನೇಕ ಬಾರಿ ನೀಡಲಾಗಿರುವಸ್ಪಷ್ಟನೆಯಂತೆ , ಅನುಸೂಚಿತ ಜಾತಿ ,ಜನಜಾತಿ,ಓಬಿಸಿ ಮತ್ತು ಆರ್ಥಿಕ ಆಧಾರದಲ್ಲಿ ಹಿಂದುಳಿದವರ ಆರಕ್ಷಣೆಗೆ ಸಂಪೂರ್ಣ ಸಮರ್ಥನೆ ಮಾಡುತ್ತದೆ"