ಹೈಕೋರ್ಟ್ಗೆ ಮೊಹಮ್ಮದ್ ನಲಪಾಡ್ ಮಾಡಿರುವ ಮನವಿ ಏನು?
ಬೆಂಗಳೂರು, ಆಗಸ್ಟ್ 24 : ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ನೀಡುವಾಗ ನ್ಯಾಯಾಲಯ ವಿಧಿಸಿದ ಷರತ್ತುಗಳನ್ನು ಸಡಿಸಲಿಬೇಕು ಎಂದು ಮೊಹಮ್ಮದ್ ನಲಪಾಡ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಗುರುವಾರ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ಏಕಸದಸ್ಯ ಪೀಠ ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಪ್ರತಿವಾದಿಗಳ ವಾದವನ್ನು ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಆ.27ಕ್ಕೆ ಮುಂದೂಡಿದೆ.
ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಜಾಗೊಳ್ಳಲು ಕಾರಣಗಳು!
2018ರ ಫೆಬ್ರವರಿ 17ರಂದು ಬೆಂಗಳೂರಿನ ಯು.ಬಿ.ಸಿಟಿಯಲ್ಲಿರುವ ಫರ್ಜಿ ಕೆಫೆಯಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಲಪಾಡ್ 116 ದಿನಗಳ ಜೈಲು ವಾಸದ ಬಳಿಕ ಜಾಮೀನು ಪಡೆದಿದ್ದರು.
116 ದಿನಗಳ ನಂತರ ಜೈಲಿನಿಂದ ಹೊರಬಂದ ಮೊಹಮ್ಮದ್ ನಲಪಾಡ್
ಪ್ರಕರಣದಲ್ಲಿ ಬಂಧಿತನಾಗಿದ್ದ ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 2 ಬಾರಿ ಸೆಷನ್ಸ್ ಕೋರ್ಟ್, ಒಂದು ಬಾರಿ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದವು. ಜೂನ್ 14ರಂದು ಕರ್ನಾಟಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು....
ಹೈಕೋರ್ಟ್ ಮೊರೆ ಹೋಗ ನಲಪಾಡ್
ಮೊಹಮ್ಮದ್ ನಲಪಾಡ್ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ನೀಡುವಾಗ ವಿಧಿಸಿದ ಷರತ್ತುಗಳನ್ನು ಸಡಿಸಲಿಸಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಆ.27ಕ್ಕೆ ಮುಂದೂಡಿದೆ.
ಪ್ರಾಕಿಕ್ಯೂಷನ್ ಪರ ವಕೀಲ ಶ್ಯಾಮಸುಂದರ್ ಅವರು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, 'ಷರತ್ತು ಸಡಿಲಿಕೆ ಮಾಡುವ ವಿಚಾರವನ್ನು ತನಿಖಾಧಿಕಾರಿಗಳಿಗೆ ತಿಳಿಸಬೇಕು. ಆದ್ದರಿಂದ, ಸಮಯಾವಕಾಶ ಬೇಕು' ಎಂದು ಮನವಿ ಮಾಡಿದರು. ಆದ್ದರಿಂದ, ವಿಚಾರಣೆ ಮುಂದೂಡಲಾಗಿದೆ.
ನಲಪಾಡ್ ಮನವಿ ಏನು?
ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮೊಹಮ್ಮದ್ ನಲಪಾಡ್ ವಿದೇಶ ಪ್ರಯಾಣ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜಾಮೀನು ನೀಡುವಾಗ ಕೋರ್ಟ್ ಬೆಂಗಳೂರು ನಗರ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತು ವಿಧಿಸಿದೆ.
'ನನ್ನ ತಮ್ಮ ಬ್ರಿಟನ್ ನಲ್ಲಿದ್ದಾನೆ. ಆತನನ್ನು ಭೇಟಿ ಮಾಡಲು ಆ.25ರಿಂದ 15 ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತೇನೆ. ಆದ್ದರಿಂದ, ಜಾಮೀನು ನೀಡುವಾಗ ವಿಧಿಸಿರುವ ಷರತ್ತು ಸಡಿಲಿಸಬೇಕು' ಎಂದು ಮೊಹಮ್ಮದ್ ನಲಪಾಡ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಗಂಭೀರ ಪ್ರಕರಣ
ಕರ್ನಾಟಕ ಹೈಕೋರ್ಟ್ ಮೊಹಮ್ಮದ್ ನಲಪಾಡ್ಗೆ ಜಾಮೀನು ನೀಡುವಾಗ ಇದು ಗಂಭೀರ ಪ್ರಕರಣ ಎಂದು ಹೇಳಿತ್ತು. ಬೆಂಗಳೂರು ನಗರ ಬಿಟ್ಟು ತೆರಳುವಂತಿಲ್ಲ, ಪಾಸ್ಪೋರ್ಟ್ ಅನ್ನು ತನಿಖಾಧಿಕಾರಿಗಳಿಗೆ ನೀಡಬೇಕು. ತನಿಖೆಗೆ ಸಹಕಾರ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿತ್ತು.
ಮೊಹಮ್ಮದ್ ನಲಪಾಡ್ ಈಗ ವಿದೇಶ ಪ್ರವಾಸ ಮಾಡಲು ಪಾಸ್ಪೋರ್ಟ್ ಅಗತ್ಯವಿದೆ ಮತ್ತು ನಗರ ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತು ಸಡಿಲಿಕೆ ಮಾಡಬೇಕು. ಆದ್ದರಿಂದ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ
ಫರ್ಜಿ ಕೆಫೆಯಲ್ಲಿ ಮೊಹಮ್ಮದ್ ನಲಪಾಡ್ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂರೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಮೊದಲ ಆರೋಪಿಯಾಗಿದ್ದಾರೆ. ಅರುಣ್ ಬಾಬು, ಶ್ರೀ ಕೃಷ್ಣ, ಅಶ್ರಫ್, ಬಾಲಕೃಷ್ಣ, ಅಭಿಷೇಕ್, ನಾಸಿರ್ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.