ನಲಪಾಡ್ಗೆ ತಪ್ಪದ ಸಂಕಷ್ಟ, ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ
ಬೆಂಗಳೂರು, ಏಪ್ರಿಲ್ 28: ವಿದ್ವತ್ ಮೇಲೆ ತೀವ್ರ ಹಲ್ಲೆ ನಡೆಸಿರುವ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ಗೆ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಮೇ 11ರವರೆಗೆ ವಿಸ್ತರಿಸಿದೆ.
ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ನಲಪಾಡ್ ಪ್ರಕರಣದ ವಿಚಾರಣೆ ನಡೆಯಿತು. ಪ್ರಕರಣ ನಡೆದು 60 ದಿನಗಳಾದರೂ ಇನ್ನೂ ಪೊಲೀಸರು (ಜಾರ್ಜ್ ಶೀಟ್) ದೋಷಾರೋಪ ಪಟ್ಟಿ ಸಲ್ಲಿಸದಿರುವ ಕಾರಣ ನಲಪಾಡ್ಗೆ 167 (2) ಕಲಂ ಅಡಿಯಲ್ಲಿ ಕಡ್ಡಾಯವಾಗಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ನಲಪಾಡ್ ಪ್ರಕರಣ: ಸಚಿವ ಎಚ್.ಸಿ.ಮಹದೇವಪ್ಪ ಪುತ್ರನ ವಿಚಾರಣೆ
ಇದಕ್ಕೆ ಪ್ರತಿವಾದಿಸಿದ ವಕೀಲರು ದೋಷಾರೋಪ ಪಟ್ಟಿ ಸಲ್ಲಿಸಲು 90 ದಿನಗಳ ವರೆಗೆ ಕಾಲಾವಕಾಶ ಇದೆ. ಅಲ್ಲದೆ ಇದೊಂದು ಗಂಭೀರ ಪ್ರಕರಣವಾಗಿದ್ದು ತನಿಖಾಧಿಕಾರಿಗಳಿಗೆ ಇನ್ನಷ್ಟು ಕಾಲಾವಕಾಶದ ಅವಶ್ಯಕತೆ ಇರುವ ಕಾರಣ ದೋಷಾರೋಪ ಪಟ್ಟಿ ಸಲ್ಲಿಸಲಾಗಿಲ್ಲ ಎಂದು ವಾದಿಸಿದರು.
ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರು ವಿದ್ವತ್ ಮೇಲೆ ಫರ್ಜಿ ಕೆಫೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಎರಡು ತಿಂಗಳಿನಿಂದಲೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾರೆ. ಇಲ್ಲಿಯವರೆಗೆ ಸುಮಾರು 10 ಬಾರಿ ಅವರ ಜಾಮೀನು ಅರ್ಜಿ ನಿರಾಕರಿಸಲ್ಪಟ್ಟಿದೆ.