ಕೇಂದ್ರ ಗೃಹ ಸಚಿವರೇ ’ಆತ್ಮನಿರ್ಭರ ಭಾರತ್’ ಉಚ್ಚಾರಣೆ ಮಾಡಲು ತಡಬಡಾಯಿಸುತ್ತಾರೆ, ಇನ್ನು..
ಬೆಂಗಳೂರು ಜೂನ್ 13: "ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿರುವ ಬಗ್ಗೆ ಜನರಿಗೆ ಜಾಗೃತಿ ನುಡಿಸಲು ರಾಜ್ಯಾದ್ಯಂತ ಮಹಿಳಾ ಕಾಂಗ್ರೆಸ್ ವತಿಯಿಂದ 3ಲಕ್ಷ ಕರಪತ್ರ ವಿತರಿಸಲಾಗುವುದು" ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ ಹೇಳಿದರು.
Recommended Video
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುಷ್ಪ, "ಭಾರತದ ಆರ್ಥಿಕತೆ ಕೊರೊನಾಗಿಂತ ಮುನ್ನವೇ ಕುಸಿದು ಹೋಗಿತ್ತು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಮುಂದಾಲೋಚನೆ ಮತ್ತು ಸಮಗ್ರ ಚಿಂತನೆ ಇಲ್ಲದೆ ಲಾಕ್ ಡೌನ್ ಜಾರಿ ಮಾಡಿ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು"ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಡಿ. ಕೆ. ಶಿವಕುಮಾರ್ಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
"ದೇಶದ ನಗರಗಳನ್ನು ಕಟ್ಟಿದ ಕೋಟ್ಯಾಂತರ ಕಾರ್ಮಿಕರು ಮಕ್ಕಳನ್ನು ತಲೆ ಮೇಲೆ ಹೊತ್ತು ಹೆದ್ದಾರಿಗಳಲ್ಲಿ ತಮ್ಮ ಹುಟ್ಟಿದೂರುಗಳನ್ನು ಸೇರುವ ತವಕದಿಂದ ನಡೆದು ಹೊರಟ ಚಿತ್ರಗಳು ಹೃದಯಹೀನ ಸರ್ಕಾರದ ಆತ್ಮಕ್ಕೆ ಕಾಣಲೇ ಇಲ್ಲ" ಎಂದು ಪುಷ್ಪ ಅಮರನಾಥ ಹೇಳಿದರು.
"ಆರ್ಥಿಕ ಚೈತನ್ಯ ತುಂಬುವುದಾಗಿ ಮಾರ್ಕೆಟಿಂಗ್ ಕಂಪನಿಗಳಂತೆ ಸ್ವತಃ ಕೇಂದ್ರ ಗೃಹ ಸಚಿವರೇ ಉಚ್ಚಾರಣೆ ಮಾಡಲು ತಡಬಡಾಯಿಸುವ 'ಆತ್ಮನಿರ್ಭರ ಭಾರತ್' ಎಂಬ ಹೆಸರನ್ನಿಟ್ಟು 20ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದು ಈ ವರೆಗೂ ಯಾರಿಗೂ ತಲುಪಿಲ್ಲ" ಎಂದು ಪುಷ್ಪ ಅಮರನಾಥ, ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದರು.
"ಲಾಕ್ ಡೌನ್ ಘೋಷಣೆಗೂ ಮುನ್ನ ಕೊರೊನಾ ಪ್ರಕರಣಗಳು ಕಡಿಮೆ ಇದ್ದವು, ಈಗ ಮೂರು ಲಕ್ಷದ ತಲುಪಿದಾಗ ಲಾಕ್ ಡೌನ್ ಸಡಿಲಿಸಿ ಕೊರೊನಾದೊಂದಿಗೆ ಜೀವಿಸುವುದನ್ನು ಕಲಿಯಿರಿ ಎಂದು ಕೇಂದ್ರ ಸರ್ಕಾರ ಕೈತೊಳೆದು ಕೊಂಡಿದೆ" ಎಂದು ಪುಷ್ಪ ಆರೋಪಿಸಿದರು.
ಕೇಂದ್ರ ಸರ್ಕಾರ, ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕರಿಗೆ ಹೊರೆಯಾದ ಹನ್ನೆರಡು ಗಂಟೆ ಕೆಲಸದ ಅವಧಿ ವಿಸ್ತರಣೆ, ಶ್ರಮಿಕರಿಗೆ ತಲುಪದ ಪ್ಯಾಕೇಜ್, ಪೆಟ್ರೋಲ್ ಬೆಲೆ ಏರಿಕೆ, ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ಇದ್ದ ಶಕ್ತಿಯನ್ನು ಇಲ್ಲವಾಗಿಸಿ ಸಣ್ಣ ರೈತರ ಜಮೀನು ಹಣವಂತರ ಪಾಲಾಗುವಂತೆ ಮಾಡಿದ್ದು ಹೀಗೆ ಯಾವ ವಲಯದಲ್ಲೂ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿಲ್ಲ" ಎಂದು ಪುಷ್ಪ ಆರೋಪಿಸಿದರು.
ಇಷ್ಟೆಲ್ಲ ವೈಫಲ್ಯಗಳ ನಡುವೆ ಬಿಜೆಪಿ ಯಾವುದೇ ಮುಜುಗರವಿಲ್ಲದೆ ಕೇಂದ್ರ ಸರ್ಕಾರದ ಸಾಧನೆ ಮತ್ತು ಕೊರೊನಾ ತಡೆ ಬಗ್ಗೆ ಮನೆಮನೆಗೆ ತಿಳಿಸುವ ಜನ ಸಂವಾದ ರ್ಯಾಲಿ ಮಾಡಲು ಹೊರಟಿದೆ"ಎಂದು ಪುಷ್ಪ ಅಮರನಾಥ ಲೇವಡಿ ಮಾಡಿದರು.