ಇಡೀ ಕರ್ನಾಟಕಕ್ಕೆ ಭೀಕರ ಪ್ರವಾಹ ಎದುರಾದಾಗ ಮೋದಿ ಬರಲಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಜನವರಿ 3: ಜವಾಬ್ದಾರಿಯುತ ವಿಪಕ್ಷವಾಗಿ ಪ್ರಧಾನಿಯವರ ಆಗಮನ ಸ್ವಾಗತಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಬಹಳ ದಿನಗಳ ನಂತರ ಎರಡು ದಿನಗಳ ಪ್ರವಾಸ ಏರ್ಪಾಟು ಮಾಡಿಕೊಂಡು ಕರ್ನಾಟಕಕ್ಕೆ ಬಂದಿದ್ದಾರೆ.
ರಾಜಭವನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಏನಿದರ ರಹಸ್ಯ?
ಪ್ರವಾಹ ಬಂದಾಗ ಅವರು ಕರ್ನಾಟಕಕ್ಕೆ ಬರಲಿಲ್ಲ,ಎಂದೂ ಕಂಡು ಕೇಳರಿಯದಂತ ಭೀಕರ ಪ್ರವಾಹ ಬಂದಿತ್ತು .ಪ್ರಧಾನಿ ಹುದ್ದೆ ಯಾವ ಪಕ್ಷಕ್ಕೂ ಸೇರಿದ್ದಲ್ಲ. 130 ಕೋಟಿ ಭಾರತೀಯರ ಪ್ರಧಾನಿ ಅವರು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಕರ್ನಾಟಕದಲ್ಲಿ ಜನರು ಅನೇಕ ಕಷ್ಟ ನಷ್ಟಗಳಿಗೆ ಈಡಾಗಿದ್ದರು,ಬಹಳ ಜನ ಬೀದಿಪಾಲಾಗಿದ್ದರು, ಆದರೆ ಜನರಿಗೆ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ, ಬೇರೆಲ್ಲಾ ವಿಚಾರಕ್ಕೆ ಮೋದಿ ಟ್ವೀಟ್ ಮಾಡುತ್ತಾರೆ.
2009 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗ ಪ್ರವಾಹ ಬಂದ ಎರಡೇ ದಿನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಏರಿಯಲ್ ಸರ್ವೆ ಮಾಡಿದ್ದರು.
ಹಿಂದಿನ ಪ್ರಧಾನಿಗಳೆಲ್ಲ ಜನರ ಕಷ್ಟ ಕೇಳುವ ಆಲಿಸುವ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷದ ಪ್ರಧಾನಿಯಾಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳ ಮುಂದೆ ಹೋಗಿ ರಾಜಕೀಯ ಭಾಷಣ ಯಾಕೆ?
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ, ಭವಿಷ್ಯದ ಬಗ್ಗೆ ಮಾತಾಡಬೇಕು,ಮಕ್ಕಳ ಮುಂದೆ ಸಿಎಎ ಬಗ್ಗೆ ಮಾತಾಡಿದರೆ ಎಷ್ಟು ಔಚಿತ್ಯ ಅದು, ಅದಕ್ಕೆ ಅದನ್ನು ಕೊಳಕು ರಾಜಕೀಯ ಭಾಷಣ ಅಂದಿದ್ದೆ ಎಂದು ಹೇಳಿದರು.
ದೇಶದ ಅಲ್ಪ ಸಂಖ್ಯಾತರಿಗೆ ಏನು ಮಾಡಿದ್ದೀರಿ?
ಪಾಕಿಸ್ತಾನ ಒಂದು ದುಷ್ಟ ರಾಷ್ಟ್ರ ನಾನೂ ಒಪ್ಪಿಕೊಳ್ತೇನೆ, ಆದರೆ ಇಲ್ಲಿನ ಅಲ್ಪಸಂಖ್ಯಾತ ರ ಬಗ್ಗೆ ಏನು ಮಾಡ್ತೀದ್ದೀರಿ ?, ಇಲ್ಲಿನ ಅಲ್ಪಸಂಖ್ಯಾತರ ಮೇಲೆ ಮೋದಿ ಏನ್ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ರೈತರ ಸಂಕಷ್ಟ ದುಪ್ಪಟ್ಟಾಗಿದೆ ಅದರ ಬಗ್ಗೆ ಗಮನಕೊಡಿ
ಇಲ್ಲಿ ರೈತರ ಸಂಕಷ್ಟ ದುಪ್ಪಟ್ಟಾಗಿದೆ,ರೈತರ ಸಾಲಮನ್ನಾ ಮಾಡಲಿಲ್ಲ, ಮಹದಾಯಿ ವಿವಾದ ಬಗೆಹರಿಸಿ ಅಂದ್ರೆ ಬಗೆಹರಿಸಲಿಲ್ಲ, ಬರೀ ಸುಳ್ಳೇ ಹೇಳೋದು, ಈಗೊಂದು ಸುಳ್ಳು, ಚುನಾವಣೆ ಬಂದಾಗ ಇನ್ನೊಂದು ಸುಳ್ಳು ಹೇಳಿಕೊಂಡು ಓಡಾಡುತ್ತಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ನಿನ್ನೆ ಭಾಷಣ ಮಾಡುತ್ತಾ ಏನೇನೋ ಕೇಳಿದ್ದಾರೆ. ದೇಶದ ಪ್ರಧಾನಿ ಮಂತ್ರಿ ಆದವರು ಈ ಬಗ್ಗೆ ಗಮನ ಹರಿಸ್ತೀನಿ ಅಂತನಾದ್ರೂ ಹೇಳಬೇಕಲ್ಲ, ಕನಿಷ್ಟ ಪರಿಶೀಲನೆ ಮಾಡ್ತೀನಿ ಅಂತನಾದರೂ ಹೇಳಬೇಕಲ್ಲ ಯಾವುದನ್ನೂ ಹೇಳಿಲ್ಲ ಎಂದು ಹೇಳಿದರು.
ಹೇಮಾವತಿ ನದಿ ಜೋಡಣೆ ಕಾರ್ಯ ಏನಾಯ್ತು?
ಹೇಮಾವತಿ ನದಿ ಜೋಡಣೆ ಮಾಡಿ 8 ಜಿಲ್ಲೆಗಳಿಗೆ ನೀರಾವರಿ ಮಾಡ್ತೀವಿ ಅಂದಿದ್ದರು. ಕಳೆದ ಚುನಾವಣೆಯಲ್ಲಿ ಒಂದು ಮಾತು ಹೇಳಿದ್ದರು. ಕೇಂದ್ರದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಹೇಳಿದ್ದರು. ಆದರೆ ಭಾಗ್ಯದ ಬಾಗಿಲು ಇರಲಿ, ಬಿಜೆಪಿ ಲೀಡರ್ ಗಳಿಗೆ ಮೋದಿ ಮನೆಯ ಬಾಗಿಲೇ ತೆರೆಯಲಿಲ್ಲ ಎಂದರು. 25 ಜನ ಸಂಸದರನ್ನು ಗೆಲ್ಲಿಸಿದರೂ ಮೋದಿ ಮನೆಯ ಬಾಗಿಲೇ ತೆಗೆಯಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.