ಎಂಇಪಿ ಅಧ್ಯಕ್ಷೆ ಸೇರಿ ಹಲವರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆಗೆ ಯತ್ನ
ಬೆಂಗಳೂರು, ಮೇ 4: ಮಹಿಳಾ ಎಂಪವರ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್ ಗುರುವಾರ ಸಂಜೆ ನಡೆದ ಗಲಭೆಯಲ್ಲಿ ಸ್ವಲ್ಪದರಲ್ಲೇ ಹಲ್ಲೆಯಿಂದ ಪಾರಾಗಿದ್ದಾರೆ.
ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಎಂಇಪಿ ಪರ ರೋಡ್ ಶೋ ನಡೆಸುತ್ತಿದ್ದಾಗ ಸುಮಾರು 100 ಜನರ ಗುಂಪೊಂದು ಸ್ಥಳಕ್ಕೆ ಧಾವಿಸಿ ಗಲಾಟೆ ನಡೆಸಿತು. ಸಿವಿ ರಾಮನ್ ನಗರ ಹಾಗೂ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಘಟನೆ ಇದಾಗಿದೆ.
ನಾಮಪತ್ರ ತಿರಸ್ಕಾರ: ಕಾನೂನು ಹೋರಾಟ ಎಂದ ನೌಹೀರಾ ಶೇಖ್
ಪ್ರಚಾರ ವಾಹನದ ಮೇಲೆ ದುಷ್ಕರ್ಮಿಗಳ ಗುಂಪು ಕಲ್ಲು ತೂರಿ ದಾಂಧಲೆ ನಡೆಸಿದೆ. ಅಲದ್ಲದೆ, ಎಂಇಪಿ ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನೌಹೇರಾ ಶೇಖ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕೆಜೆ ಹಳ್ಳಿಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಏಕಾಏಕಿ ಸ್ಥಳಕ್ಕೆ ಬಂದ ನೂರಾರು ಪುಂಡರು ಎಂಇಪಿ ಪಕ್ಷದ ವಿರುದ್ಧ ಘೋಷಣೆ ಕೂಗಿ ದಾಂಧಲೆ ನಡೆಸಿದ್ದಾರೆ. ಈ ವೇಳೆ ಪ್ರಚಾರ ವರದಿ ಮಾಡಲು ತೆರಳಿದ್ದ ಮಾಧ್ಯಮಗಳ ವಾಹನಗಳನ್ನೂ ಜಖಂ ಮಾಡಿ ಪತ್ರಕರ್ತರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಪುಂಡರ ದಾಂಧಲೆ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ.
ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಂಇಪಿ ಅಭ್ಯರ್ಥಿ ನರ್ಸ್ ಜಯಲಕ್ಷ್ಮಿ, ಮುಸ್ಲಿಂರಲ್ಲಿ ಮಹಿಳೆಯರು ಹೊರಗೆ ಬರುವುದೇ ಕಡಿಮೆ. ಇಂತಹ ಸಂದರ್ಭದಲ್ಲಿ ನೌಹೇರಾ ಶೇಖ್ ಅವರು ಬದಲಾವಣೆ ಪ್ರತೀಕವಾಗಿ ಬಂದಿದ್ದಾರೆ.
ಕೆಲ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಎಂಇಪಿ ಪಕ್ಷದ ಮೇಲೆ ದಾಳಿ ಆಗಲು ಕಾರಣ ನಮ್ಮ ಬೆಳವಣಿಗೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಮ್ಮ ಏಳಿಗೆಯನ್ನು ಸಹಿಸುತ್ತಿಲ್ಲ.
ಮಹಿಳಾ ಸಂಘಟನೆಗಳು ಕೂಡ ನಮಗೆ ಸಾಥ್ ಕೊಟ್ಟಿದ್ದಾರೆ. ಕೆಜಿ ಹಳ್ಳಿಯಲ್ಲಿ ನಡೆದ ಈ ಘಟನೆ ತಲೆತಗ್ಗಿಸುವಂತೆ ಮಾಡಿದೆ. ಮಾಧ್ಯಮವರ ಮೇಲೂ ಹಲ್ಲೆ ಆಗಿದೆ ಕ್ಯಾಮರಾ ಮೆನ್, ವರದಿಗಾರರ ಮೇಲೂ ಹಲ್ಲೆ ಆಗಿದೆ. ಎಂಇಪಿ ಅಧ್ಯಕ್ಷೆ ನೌಹೇರಾ ಶೇಖ್ ಹತ್ಯೆಗೆ ಕೆಲವರು ಸಂಚು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.