ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಅಟ್ಟಾಡಿಸಿ ಹಲ್ಲೆ ಮಾಡಿದ ಪುಂಡರು !
ಬೆಂಗಳೂರು, ಡಿಸೆಂಬರ್ 31: ಕುಡಿಯಲು ನೀರು ಬೇಗ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪುಂಡರು ವಿಕೃತ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಜಯನಗರ ಸಮೀಪದ ಮಾಳಗಾಳ ಸಮೀಪದಲ್ಲಿ ಅಟ್ಟಿಕಾ ಬಿರಿಯಾನಿ ಹೋಟೆಲ್ ಇದೆ. ಡಿಸೆಂಬರ್ 29 ರಂದು ಸಂಜೆ 5.30 ಕ್ಕೆ ಎಂಟು ಮಂದಿ ಹೋಟೆಲ್ ಗೆ ಬಂದಿದ್ದಾರೆ. ಕೇಳಿದ ಊಟವನ್ನು ಹೋಟೆಲ್ ಸಿಬ್ಬಂದಿ ಬಡಿಸಿದ್ದು, ನೀರು ಕೊಡುವಂತೆ ಕೇಳಿದ್ದಾರೆ. ನೀರು ಕೊಡಲು ತಡವಾಗಿದ್ದಕ್ಕೆ ಜಗಳ ತೆಗೆದು ದಾಂಧಲೆ ಎಬ್ಬಿಸಿದ್ದಾರೆ. ಹೋಟೆಲ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಸಿಬ್ಬಂದಿ ಮೇಲೆ ದಬ್ಬಾಳಿಕೆ ಮಾಡಿ ಹಲ್ಲೆ ನಡಸಿದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಹರೀಶ್ ಎಂಬುವರು ಅನ್ನಪೂಣೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ನೀಡಿದ ಹಿನ್ನೆಲೆಯಲ್ಲಿ ಬಿಯರ್ ಬಾಟಲಿಗಳಿಂದ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳ ಪೈಕಿ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹವಾ ಎಬ್ಬಿಸುವ ಸಲುವಾಗಿ ಸ್ಥಳೀಯ ಪುಂಡರು ಈ ಕೃತ್ಯ ಎಸಗಿದ್ದಾರೆ.
Recommended Video
ಹಲ್ಲೆ ಮಾಡಿದ ಆರೋಪಿಗಳ ಪೈಕಿ ಆರು ಮಂದಿಯನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಅವರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ವೈರಲ್ ಆಗುತ್ತಿದೆ.