ಎಚ್ಡಿ ಕುಮಾರಸ್ವಾಮಿ ಜೊತೆ ಮಲೇಷ್ಯಾ ಪ್ರವಾಸಕ್ಕೆ ಎಂಎಲ್ಸಿಗಳ ನಕಾರ
Recommended Video
ಬೆಂಗಳೂರು, ಅಕ್ಟೋಬರ್ 31: ಎಂಎಲ್ಸಿಗಳು, ಶಾಸಕರ ಅತೃಪ್ತಿ ಶಮನಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಮಲೇಷ್ಯಾ ಆಫರ್ ನೀಡಿದ್ದರು. ಆದರೆ ನೆರೆ ನೆಪವೊಡ್ಡಿ ವಿದೇಶ ಪ್ರವಾಸಕ್ಕೆ ತೆರಳದಿರಲು ಹೊರಟ್ಟಿ ತಂಡ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಚ್ಡಿಕೆ ಮಲೇಷ್ಯಾಗೆ ಮಜಾ ಮಾಡಲು ತೆರಳಿದ್ದರೆ ಅದು ದುರ್ದೈವ
ಪಕ್ಷದಲ್ಲಿ ಮೂಡಿರುವ ಅಸಮಾಧಾನ ಹೋಗಲಾಡಿಸಲು ಕುಮಾರಸ್ವಾಮಿ ಆಯೋಜಸಿರುವ ಮಲೇಷ್ಯಾ ಪ್ರವಾಸಕ್ಕೆ ತೆರಳದಿರಲು ಜೆಡಿಎಸ್ನ ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರು ನಿರ್ಧರಿಸಿದ್ದಾರೆ.
ಎಂಎಲ್ಸಿಗಳ ಸಭೆಯಲ್ಲಿ ಯಾರು ಗೈರಾಗಿದ್ದರು
ಬುಧವಾರ ವಿಧಾನಸೌಧದ ಉಪಸಭಾಪತಿ ಧರ್ಮೇಗೌಡ ಕೊಠಡಿಯಲ್ಲಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಮನೆ ಸದಸ್ಯರಾದ ಮರಿತಿಬ್ಬೇಗೌಡ, ಟಿ.ಎ. ಶರವಣ, ಚೌಡರೆಡ್ಡಿ ತೂಪಲ್ಲಿ, ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಕೆ.ಟಿ. ಶ್ರೀಕಂಠೇಗೌಡ, ಸಿ.ಆರ್. ಮನೋಹರ್, ಭಾಗವಹಿಸಿದ್ದರು. ಪುಟ್ಟಣ್ಣ, ಸಂದೇಶ್ ನಾಗರಾಜ್ , ಕಾಂತರಾಜು , ಭೋಜೇಗೌಡ, ರಮೇಶ್ಗೌಡ, ಧರ್ಮೇಗೌಡ, ಬಿ.ಎಂ. ಫಾರೂಕ್, ಕೆ.ವಿ. ನಾರಾಯಣಸ್ವಾಮಿಸಭೆಗೆ ಗೈರಾಗಿದ್ದರು.
ಎಂಎಲ್ಸಿಗಳು ಪಕ್ಷ ಬಿಡುತ್ತೇವೆ
ಮಾಜಿ ಪ್ರಧಾನಿ ದೇವೇಗೌಡರು ಹಿರಿಯರು . ಅವರ ಬಗ್ಗೆ ನಮಗೂ ಗೌರವವಿದೆ. ಆದರೆ, ಪಕ್ಷದಲ್ಲಿ ನಾವು ಉಳಿದುಕೊಳ್ಳುವ ವಾತಾವರಣ ಇಲ್ಲ. ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರು ಒಟ್ಟಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ ಎಂದಿದ್ದಾರೆ. ಹಾಗಾಗಿ ತಡವಾಗುತ್ತಿದೆ. ಬೇರೆ ಪಕ್ಷಗಳಿಂದಲೂ ಆಹ್ವಾನವಿದೆ. ಮುಂದಿನ ಚುನಾವಣೆ ವೇಳೆಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೆಡಿಎಸ್ ಬಿಡಲು ನಾನು ತೀರ್ಮಾನಿಸಿದ್ದೇನೆ ಎಂದು ಎಂಎಲ್ಸಿ ಪುಟ್ಟಣ್ಣ ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಅವಧಿಯನ್ನು ಸರಿಯಾಗಿ ನಡೆಸಿಕೊಂಡಿಲ್ಲ
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ . ಪಕ್ಷದ ನಾಯಕರಿಗೆ ಉತ್ತಮ-ಸ್ಥಾನ ಮಾನ ನೀಡದಿರುವುದು ಸೇರಿದಂತೆ ಇತರೆ ವಿಚಾರಗಳಿಗೆ ಜೆಡಿಎಸ್ ವರಿಷ್ಠರ ಮೇಲೆ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು. ಕಳೆದ ವಾರ ಅತೃಪ್ತರ ಸಭೆ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿತ್ತು.
ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ದೇವೇಗೌಡರಿಗೆ ಮಾಹಿತಿ
ಸಭೆಯಲ್ಲಿ ನಡೆದ ವಿಚಾರಗಳನ್ನು ತಿಪ್ಪೇಸ್ವಾಮಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ತಲುಪಿಸಿದ್ದಾರೆ. ತರುವಾಯ ದೇವೇಗೌಡ ಅವರ ಅತೃಪ್ತರ ಸಭೆ ಕರೆದರೆ ಆ ವೇದಿಕೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವ ಬಗ್ಗೆ ಚರ್ಚಿಸಲಾಗಿದೆ. ನಂತರದ ತೀರ್ಮಾನ ದೇವೇಗೌಡ ಅವರಿಗೆ ಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಸಮಾಧಾನ ಶಮನಕ್ಕೆ ಮಲೇಷ್ಯಾ ಪ್ರವಾಸ
ಪಕ್ಷದಲ್ಲಿ ಅಸಮಾಧಾನ ಮೂಡಿರುವುದರಿಂದ ಅದನ್ನು ಶಮನ ಮಾಡಲು ಕುಮಾರಸ್ವಾಮಿ ನವೆಂಬರ್ 3ರಿಂದ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಉದ್ದೇಶವನ್ನು ಹೊಂದಿದ್ದರು. ಪಕ್ಷದ ಶಾಸಕರೆಲ್ಲರೂ ಒಟ್ಟಾಗಿ ಮಲೇಷ್ಯಾ ಪ್ರವಾಸದ ಪ್ರಸ್ತಾಪವನ್ನು ಕುಮಾರಸ್ವಾಮಿ ಮುಂದಿಟ್ಟಿದ್ದರು. ಆದರೆ ಅದನ್ನು ಪರಿಷತ್ ಸದಸ್ಯರು ತಳ್ಳಿಹಾಕಿದ್ದಾರೆ. ಇದು ಪಕ್ಷದಲ್ಲಿ ಮತ್ತಷ್ಟು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.