ಎಂಎಲ್ ಸಿ ಶರವಣರಿಂದ ಏಪ್ರಿಲ್ 3ರಂದು ಆಹಾರ ವಿತರಣೆ
ಬೆಂಗಳೂರು, ಏಪ್ರಿಲ್ 2: ಕೊರೊನಾ ವೈರಾಣು ಹರಡದಂತೆ ತಡೆಯೊಡ್ಡಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಲಾಕ್ ಡೌನ್ ಉದ್ದೇಶ ಒಳ್ಳೆಯದೇ ಆದರೂ ಅನೇಕರಿಗೆ ತುತ್ತು ಅನ್ನಕ್ಕೂ ಸಮಸ್ಯೆಯಾಗಿದೆ. ಆ ಕಾರಣಕ್ಕೆ ಹಸಿವಿನಿಂದ ಇರುವವರಿಗೆ ಆಹಾರ ವಿತರಿಸುವ ಉದ್ದೇಶದಿಂದ ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯರೂ ಆದ ಟಿ.ಎ. ಶರವಣ ಏಪ್ರಿಲ್ 3ರ ಶುಕ್ರವಾರ ಆಹಾರ ವಿತರಣೆ ಮಾಡಲಿದ್ದಾರೆ.
'ಅಪ್ಪಾಜಿ ಕ್ಯಾಂಟೀನ್' ವತಿಯಿಂದ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಸ್ವತಃ ಶರವಣ ಅವರೇ ಆಹಾರ ವಿತರಿಸಲಿದ್ದಾರೆ. ಕೆ.ಆರ್. ಮಾರ್ಕೆಟ್, ಕಲಾಸಿಪಾಳ್ಯ, ದೊಡ್ಡಪೇಟೆ, ನಗರ್ತ ಪೇಟೆ ಸುತ್ತಮುತ್ತಲಿನಲ್ಲಿ ಇರುವ ಸಾವಿರಾರು ಮಂದಿಗೆ ಆಹಾರ ವಿತರಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಕೂಡ ತಿಳಿವಳಿಕೆ ಮೂಡಿಸಲಿದ್ದಾರೆ.
ಕೊರೊನಾ ಹೊಡೆದೋಡಿಸಲು ದೇವರ ಮೊರೆಯೂ ದಾರಿ; ಸಚಿವರಿಗೆ ಶರವಣ ಪತ್ರ
"ಯಾರೂ ಹಸಿವಿನಿಂದ ಇರಬಾರದು ಎಂಬುದು ನಾನು ನಂಬಿಕೊಂಡು ಬಂದಿರುವ ಸಿದ್ಧಾಂತ. ಅದೇ ಕಾರಣಕ್ಕೆ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದೆ. ಆ ನಂತರ ಆಸ್ಪತ್ರೆಗಳ ಬಳಿ ಮೊಬೈಲ್ ಕ್ಯಾಂಟೀನ್ ಗಳನ್ನು ಶುರು ಮಾಡಿದೆ. ಆದರೆ ಸದ್ಯಕ್ಕೆ ಜನರ ಸಮಸ್ಯೆ ಮತ್ತೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅಗತ್ಯಗಳನ್ನು ಅರಿತುಕೊಂಡು, ಶುಕ್ರವಾರದಂದು ಸ್ವತಃ ನಾನೇ ಆಹಾರ ವಿತರಿಸಬೇಕು ಅಂತಿದ್ದೇನೆ. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಕೂಡ ತಿಳಿವಳಿಕೆ ಮೂಡಿಸುತ್ತೇವೆ.
"ಈಗಾಗಲೇ ಕೊರೊನಾ ಜಾಗೃತಿಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನು ಮುಂದೆ ಕೂಡ ನನ್ನಿಂದ ಸಾಧ್ಯವಾಗುವ ಎಲ್ಲ ಕೆಲಸ ಮಾಡುತ್ತೇನೆ" ಎಂದು ಅವರು ತಿಳಿಸಿದ್ದಾರೆ.