NIA ವಿಚಾರಣೆ ಕುರಿತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ!
ಬೆಂಗಳೂರು, ಅ. 16: ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿಯಲ್ಲಿ ನಡೆದಿದ್ದ ಗಲಭೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಹೆಸರು ಕೇಳಿ ಬಂದಿತ್ತಾದರೂ ಕಾಂಗ್ರೆಸ್ ಪಕ್ಷ ಅದನ್ನು ಅಲ್ಲಗಳೆದಿತ್ತು. ಇದೀಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪ ಕೇಳಿಬಂದಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕೆಂದು ಪುಲಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸಿದ್ದಾರೆ.
ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾರ ಜತೆಯೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ .ಮಾಜಿ ಮೇಯರ್ ಸಂಪತ್ ರಾಜು ವಿರುದ್ಧ ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ಪೊಲೀಸ್ ತನಿಖೆಯಲ್ಲಿ ಎಲ್ಲವೂ ಸ್ಪಷ್ಟವಾಗಿ ಹೇಳಿದ್ದಾರೆ. ಪೊಲೀಸ್ ಮಾಹಿತಿ ಆಧರಿಸಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದರು.
NIA ವಿಚಾರಣೆಗೆ ಹಾಜರಾಗಿದ್ದರ ಬಗ್ಗೆ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ಮಾಹಿತಿ ಕೊಟ್ಟಿದ್ದಾರೆ. ಎನ್ಐಎ ವಿಚಾರಣೆಯಲ್ಲಿ ಏನೇನು ಆಯ್ತು ಎಂಬುದನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ನನಗೆ ಅನ್ಯಾಯವಾಗಿದೆ
ನನಗೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಧ್ಯಮಗಳು ಮಾಡಿವೆ. ಅನ್ಯಾಯ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಶಾಸಕರನ್ನು ಕೊಲೆ ಮಾಡಿದ ಆರೋಪ ಬಂದಿರುವುದರಿಂದ ಕೂಡಲೇ ಪಕ್ಷದಿಂದ ಹೊರಹಾಕಿ. ನನಗೆ ಸಂಪತ್ ರಾಜ್ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ನಾನು ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ಸಂಪತ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದರು. ಘಟನೆ ಬಳಿಕ ನಾನು ಸಂಪತ್ ರಾಜ್ ಅವರಿಗೆ ಕರೆ ಮಾಡಿಲ್ಲ. ಸಂಪತ್ ರಾಜ್ ನನಗೆ ಕರೆ ಮಾಡಿಲ್ಲ. ಚಾರ್ಜ್ ಶೀಟ್ ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನಿಂದ ಸಂಪತ್ ರಾಜ್ ಉಚ್ಛಾಟಿಸಿ
ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಬೇಕು. ಪಕ್ಷದ ಇಮೇಜ್ ಹಾಳು ಮಾಡುವವರನ್ನು ಪಕ್ಷದಲ್ಲಿ ಇಟ್ಟುಕೊಳ್ಳಬಾರದು. ಈ ಸಂಬಂಧ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಛಾಟಿಸಲು ಆಗ್ರಹಿಸುವುದಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ವಿಚಾರಣೆ ಎದುರಿಸಿದ ಶಾಸಕ ರಿಜ್ವಾನ್ ಅರ್ಷದ್
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಡಿಜೆ ಹಳ್ಳಿ ಘಟನೆ ನಡೆದಾಗ ಪೊಲೀಸರ ಮನವಿಯಂತೆ ನಾನು ಮತ್ತು ಶಾಸಕ ಜಮೀರ್ ಅಹಮದ್ ಸ್ಥಳಕ್ಕೆ ಹೋಗಿದ್ದೆವು. ಅಂದು ಪೊಲೀಸ್ ಹಿರಿಯ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ಜಮೀರ್ ಅಹಮದ್ ಖಾನ್ ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕರೆ ಮಾಡಿದ್ದರು. ನಾವುಗಳು ಸ್ಥಳಕ್ಕೆ ಭೇಟಿ ಕೊಟ್ಟ ಹಿನ್ನೆಲೆ ತನಿಖೆಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಎನ್ಐಎ ಅಧಿಕಾರಿಗಳು ವಿಚಾರಣೆಗೆ ನಮ್ಮನ್ನು ಕರೆದಿದ್ದರು. ಹೇಳಿಕೆಯನ್ನು ರೆಕಾರ್ಡ್ಗೆ ತೆಗೆದುಕೊಂಡಿಲ್ಲ. ನಮ್ಮ ಬಳಿ ಇದ್ದ ಮಾಹಿತಿ ಪಡೆದಿದ್ದಾರೆ ಎಂದರು.
Recommended Video
ಜವಾಬ್ದಾರಿಯುತ ನಾಗರಿಕರಾಗಿ ಹೋಗಿದ್ದೆವು
ನಾವು ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದೆವು. ಎನ್ಐಎ ಅಧಿಕಾರಿಗಳು ಕರೆದಾಗ ನಮಗೂ ಅಚ್ಚರಿಯಾಗಿತ್ತು. ನಾವು ಜವಾಬ್ದಾರಿಯಿಂದ ಹೋಗಿ ಹೇಳಿಕೆ ಕೊಟ್ಟು ಬಂದಿದ್ದೇವೆ. ತನಿಖೆಗೆ ಸಹಕಾರ ಕೊಡುತ್ತೇವೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಬೇಕು. ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ಈ ಕೃತ್ಯದ ಹಿಂದೆ ಯಾವುದೇ ಪಕ್ಷದವರು ಇದ್ದರೂ ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕೆಂದರು.