ನನ್ನ ಮೇಲೆ ಸಿಡಿದಿದ್ದು ಪಟಾಕಿಯಲ್ಲ; ಶಾಸಕ ಹ್ಯಾರಿಸ್
ಬೆಂಗಳೂರು, ಜನವರಿ 24: ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್, ಸ್ಪೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ತನಿಖಾ ವರದಿಯನ್ನು ತಳ್ಳಿ ಹಾಕಿದ್ದಾರೆ.
ಜನವರಿ 22 ರಂದು ಸಂಜೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹ್ಯಾರಿಸ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪಟಾಕಿಯಂತಹ ವಸ್ತುವೊಂದು ಸ್ಪೋಟಗೊಂಡು ಅವರು ಗಾಯಗೊಂಡಿದ್ದರು. ತನಿಖೆ ನಡೆಸಿದ್ದ ಅಶೋಕ ನಗರ ಪೊಲೀಸರು ಸಿಡಿದಿದ್ದು ಪಟಾಕಿಯೇ ಹೊರತು ಯಾವುದೇ ಅನುಮಾನಾಸ್ಪದ ವಸ್ತುಗಳಲ್ಲ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ವರದಿ ನೀಡಿದ್ದರು.
ಹ್ಯಾರಿಸ್ ಇದ್ದ ವೇದಿಕೆಯಲ್ಲಿ ಸ್ಫೋಟ: ಆರ್ ಅಶೋಕ್ ಏನಂದ್ರು?
ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಹ್ಯಾರಿಸ್, ""ನನ್ನ ಮೇಲೆ ಸಿಡಿದು ಬಂದಿದ್ದು ಪಟಾಕಿ ರೀತಿ ಇರಲಿಲ್ಲ. ನನ್ನ ವಿರುದ್ಧ ಯಾವುದೇ ರಾಜಕೀಯ ದ್ವೇಷಗಳಾಗಲೀ, ವೈಯಕ್ತಿಕ ಶತ್ರುಗಳಾಗಲಿ ಇಲ್ಲ. ನನ್ನ ಯಶಸ್ಸಿಗೆ ಕೆಲವರು ಹೊಟ್ಟೆ ಉರಿ ಪಡುತ್ತಿದ್ದಾರೆ. ಘಟನೆ ಸಂಬಂಧ ಉನ್ನತ ತನಿಖೆ ನಡೆಸುವುದು ಉತ್ತಮ'' ಎಂದು ಹೇಳಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿವೇಕನಗರ ಸಮೀಪದ ವನ್ನಾರ್ ಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿಗೂಢವಾಗಿ ವಸ್ತುವೊಂದು ಸ್ಫೋಟಗೊಂಡು ಶಾಸಕ ಹ್ಯಾರಿಕ್ ಹಾಗೂ ಅವರ ಮೂವರು ಬೆಂಬಲಿಗರು ಗಾಯಗೊಂಡಿದ್ದರು. ಗಾಯಗೊಂಡಿದ್ದ ಹ್ಯಾರಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.