ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ಸದನದಲ್ಲಿ ಹೋರಾಟ: ಶಾಸಕ ಎನ್ ಎ ಹ್ಯಾರಿಸ್
ಬೆಂಗಳೂರು ಫೆಬ್ರವರಿ 22: ಬೆಂಗಳೂರಿಗೆ ಖ್ಯಾತಿ ತಂದಿರುವ ಹಾಗೂ ಲಾಭದಾಯಕ ಸಾರ್ವಜನಿಕ ಉದ್ಯಮವಾಗಿರುವ ಬಿಇಎಂಎಲ್ ಖಾಸಗೀಕರಣವನ್ನು ವಿರೋಧಿಸಿ ಮುಂದಿನ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಧ್ವನಿ ಎತ್ತುವುದಾಗಿ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಹೇಳಿದ್ದಾರೆ.
ಬೆಂಗಳೂರಿನ ಬಿಇಎಂಎಲ್ ಎದುರು ನಡೆದ ದ್ವಾರ ಸಭೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿ ಮಾತನಾಡಿದ ಶಾಸಕ ಎನ್ ಎ ಹ್ಯಾರಿಸ್, ದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿವೆ. ಇರುವ ಉದ್ಯೋಗಗಳನ್ನು ಉಳಿಸಿಕೊಂಡು ಜೀವನ ನಿರ್ವಹಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಬೆಲೆಗಳು ಜನರ ಜೀವನವನ್ನು ದುಸ್ತರಗೊಳಿಸುತ್ತಿವೆ. ರಾಜ್ಯದ ಸುಮಾರು 10 ಸಾವಿರ ಜನರಿಗೆ ಉದ್ಯೋಗ ನೀಡಿರುವ ಹಾಗೂ ದೇಶದ ಪ್ರಮುಖ ಸಾರ್ವಜನಿಕ ಉದ್ಯಮವಾಗಿರುವ ಬಿಇಎಂಎಲ್ ನ್ನು ಖಾಸಗೀಕರಣಗೊಳಿಸುವ ಹಿಂದೆ ಖಾಸಗಿ ಕಂಪನಿಗಳ ಲಾಬಿ ಎದ್ದು ಕಾಣುತ್ತಿದೆ. ಲಾಭದಲ್ಲಿರುವ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದರ ಮೂಲಕ ದೇಶವನ್ನು ಖಾಸಗಿ ಕಂಪನಿಗಳ ಪಾಲು ಮಾಡಲು ಕೇಂಧ್ರ ಸರಕಾರ ಹೊರಟಿದೆ ಎಂದು ಆರೋಪಿಸಿದರು.
ಕಳೆದ ಹಲವಾರು ವರ್ಷಗಳಿಂದ ಈ ಖಾಸಗೀಕರಣದ ವಿರುದ್ದ ನೌಕರರು ಪ್ರತಿಭಟನೆ ನಡೆಸುತ್ತಾ ಬಂದಿದ್ದೀರಿ. ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ಮುಂಬರುವ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇದರ ವಿರುದ್ದ ಧ್ವನಿ ಎತ್ತುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವ ಭರವಸೆಯನ್ನು ನೀಡಿದರು.
Recommended Video
ಪ್ರತಿಭಟನೆಯಲ್ಲಿ ಬಿ.ಇ.ಎಂ.ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್ ನಾರಾಯಣ ಸೇರಿದಂತೆ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು.