ಮಗನ ಅಟ್ಟಹಾಸಕ್ಕೆ ಅಪ್ಪನ ಕ್ಷಮಾಪಣೆ ಪತ್ರ
Recommended Video
ಬೆಂಗಳೂರು, ಫೆಬ್ರವರಿ 20: ನಗರದ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ಕುಕೃತ್ಯಕ್ಕೆ ಶಾಸಕ ಹ್ಯಾರಿಸ್ ಬಹಿರಂಗ ಕ್ಷಮಾಪಣಾ ಪತ್ರ ಬರೆದಿದ್ದಾರೆ.
ತಮ್ಮ ಮಗ ಮೊಹಮ್ಮದ್, ಯುಬಿ ಸಿಟಿ ಬಳಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆಯನ್ನು ದುರಾದೃಷ್ಟಕರ ಎಂದು ಪತ್ರದಲ್ಲಿ ಬಣ್ಣಿಸಿರುವ ಅವರು 'ವಿದ್ವತ್ ಹಾಗೂ ಅವರ ಪೋಷಕರಲ್ಲಿ ನಾನು ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ.
ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್
''9.9 ವರ್ಷದಿಂದ ನಾನು ನನ್ನ ಕ್ಷೇತ್ರಕ್ಕೆ ಸೇವೆ ಮಾಡುತ್ತಾ ಬಂದಿದ್ದೇನೆ, ಕಾನೂನು ಎಲ್ಲರಿಗೂ ಒಂದೇ, ನನ್ನ ಮಗನಿಗೆ ಯಾವುದೇ ವಿನಾಯಿತಿ ಇಲ್ಲ' ಎನ್ನುವ ಮೂಲಕ ತಮ್ಮ ಮಗನನ್ನು ವಹಿಸಿಕೊಳ್ಳುವುದರಿಂದ ಹಿಂದೆ ಸರಿದಿದ್ದಾರೆ.
'ಶನಿವಾರ ರಾತ್ರಿ ನಡೆದ ಘಟನೆ ಸಂಪೂರ್ಣ ದುರಾದೃಷ್ಟಕರ ಆ ರೀತಿಯ ಘಟನೆ ನಡೆಯಬಾರದಿತ್ತು, ನಾನು ನನ್ನ ಮಗನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶರಣಾಗುವಂತೆ ಮಾಡಿದ್ದೇನೆ, ಆದರೂ ಕೆಲವು ಮಾಧ್ಯಮಗಳು ಈ ಘಟನೆಯನ್ನು ಇಟ್ಟುಕೊಂಡು ನನ್ನ ಸಾರ್ವಜನಿಕ ಜೀವನವನ್ನು ಮುಕ್ತಾಯ ಮಾಡಲು ಪ್ರಯತ್ನಿಸುತ್ತಿವೆ' ಎಂದು ಮಾಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
'ಕಾನೂನು ಎಲ್ಲರಿಗೂ ಒಂದೇ ಮತ್ತು ನನ್ನ ಪುತ್ರನ ಪ್ರಕರಣದಲ್ಲಿ ನಾನೂ ಸೇರಿದಂತೆ ನನ್ನ ಕುಟುಂಬ ಪ್ರಕರಣದ ತನಿಖೆಗೆ 100% ಸಹಕಾರ ನೀಡುತ್ತೇವೆ' ಎಂದು ಅವರು ಪತ್ರದಲ್ಲಿ ಭರವಸೆ ನೀಡಿದ್ದಾರೆ.
ಮೊಹಮ್ಮದ್ ನಲಪಾಡ್ 2 ದಿನಗಳ ಕಾಲ ಪೊಲೀಸರ ವಶಕ್ಕೆ
'ಈ ಕೆಟ್ಟ ಸಮಯದಲ್ಲಿ ನನ್ನ ಬೆನ್ನಿಗೆ ನಿಂತವರು ಹಾಗೂ ಈಗಲೂ ನನಗೆ ಬೆಂಬಲಿಸುತ್ತಿರುವ ಜನರಿಗೆ ಅಗಣಿತ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ಹ್ಯಾರಿಸ್ ಅವರು ಪತ್ರದಲ್ಲಿ ಬರೆದಿದ್ದಾರೆ.
ಮೊಹಮ್ಮದ್ ಹ್ಯಾರಿಸ್ ನಲಪ್ಪಾಡ್ ಹಾಗೂ ಅವರ ಗೆಳೆಯರನ್ನು ಇಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರ್ ಮಾಡುತ್ತಲಿದ್ದು, ಇಂದಿನಿಂದ ವಿಚಾರಣೆ ಪ್ರಾರಂಭವಾಗಲಿದೆ.