ಮಾದಕ ದ್ರವ್ಯ ವ್ಯಸನದಿಂದ ಮಗನ ಹೊರತಂದ ಕಷ್ಟ ಹೇಳಿಕೊಂಡ ಶಾಸಕ
ಬೆಂಗಳೂರು, ಜುಲೈ 13: ನಗರದ ಜೈನ್ ಕಾಲೇಜಿನಲ್ಲಿ ಓದುತ್ತಿದ್ದ ಶಾಸಕ ಕಳಕಪ್ಪ ಬಂಡಿ ಅವರ ಮಗ ಮಾದಕ ದ್ರವ್ಯ ವ್ಯಸನಕ್ಕೆ ಸಿಕ್ಕಿದ್ದ. ಆತನನ್ನು ವ್ಯಸನದಿಂದ ಹೊರತರಲು ತಾವು ತಮ್ಮ ಕುಟುಂಬ ಪಟ್ಟ ಕಷ್ಟಗಳನ್ನು ಅವರು ಸದನದ ಮುಂದೆ ಹೇಳಿಕೊಂಡರು.
ಸದನದಲ್ಲಿ ಇಂದು ಮಾದಕ ದ್ರವ್ಯ ಜಾಲದ ಬಗ್ಗೆ ಗಹನವಾದ ಚರ್ಚೆ ನಡೆಯಿತು. ಬಿಜೆಪಿಯ ಆರ್.ಅಶೋಕ್ ಎತ್ತಿದ ಚರ್ಚೆಗೆ ಪಕ್ಷಾತೀತರಾಗಿ ಶಾಸಕರು ಬೆಂಬಲ ಸೂಚಿಸಿದರು. ಇದೇ ಸಮಯದಲ್ಲಿ ಶಾಸಕ ಕಳಕಪ್ಪ ಸಹ ತಮ್ಮ ಕುಟುಂಬದ್ದೇ ಉದಾಹರಣೆಯನ್ನು ಹಂಚಿಕೊಂಡರು.
ಬಿಜೆಪಿಯ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಕಾಂಗ್ರೆಸ್ನ ಎನ್.ಎ.ಹ್ಯಾರಿಸ್, ಇನ್ನೂ ಹಲವರು ಮಾದಕ ದ್ರವ್ಯ ಜಾಲ ಹರಡುತ್ತಿರುವ ಬಗ್ಗೆ ಹಾಗೂ ಅದರಿಂದಾಗುವ ವ್ಯಾಪಕ ಹಾನಿಯ ಬಗ್ಗೆ ಸದನದ ಗಮನ ಸೆಳೆದರು.
ಡ್ರಗ್ಸ್ ಮಾಫಿಯಾ ಬಗ್ಗೆ ಕಾವೇರಿದ ಚರ್ಚೆ, ಗೂಂಡಾ ಕಾಯ್ದೆಗೆ ಚಿಂತನೆ
ಇವುಗಳಲ್ಲಿ ಅತಿ ಗಮನ ಸೆಳೆದದ್ದು ರೋಣದ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಹೇಳಿದ ಸ್ವಂತ ಅನುಭವ. ಇವರ ಮಗನೇ ಮಾದಕ ದ್ರವ್ಯ ವ್ಯಸನಕ್ಕೆ ಸಿಕ್ಕಿಬಿಟ್ಟಿದ್ದನಂತೆ.
ಮಾದಕ ದ್ರವ್ಯ ವ್ಯಕ್ತಿಗೆ ಮಾತ್ರವಲ್ಲ ಆತನ ಕುಟುಂಬಕ್ಕೂ ಅತೀವ ಹಿಂಸೆ ನೀಡುತ್ತದೆ ಎಂದು ಅವರು, ಮಾದಕ ದ್ರವ್ಯ ಯುವಕರಿಗೆ ಶಾಪ ಅದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದು ಆಕ್ರೋಶಭರಿತರಾಗಿ ನುಡಿದರು.