ಸದನದಲ್ಲಿ ತಡವರಿಸಿದ ಕಂಪ್ಲಿ ಗಣೇಶ್: ತಿದ್ದಿದ ಸ್ಪೀಕರ್
ಬೆಂಗಳೂರು, ಜುಲೈ 22: ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಇಂದು ಸದನದಲ್ಲಿ ವಿಶ್ವಾಸಮತ ನಿರ್ಣಯದ ಮೇಲೆ ಮಾತನಾಡಿದರು. ಆದರೆ ಅವರ ಮಾತು ಸದನದಲ್ಲಿ ನಗೆ ಉಕ್ಕಿಸಿತು.
ಕಂಪ್ಲಿ ಗಣೇಶ್ ಅವರು ಮಾತನಾಡುತ್ತಾ, 'ಗಜ್ನಿ ಮೊಹಮ್ಮದ್ ತುಘಲಕ್' ಎಂದು ತಪ್ಪಾಗಿ ಹೆಸರು ಹೇಳಿದರು. ಕೂಡಲೇ ಅವರನ್ನು ತಡೆದ ಸ್ಪೀಕರ್ ಅವರು 'ಯಾರ ಹೆಸರು ಹೇಳಿದಿರಿ?' ಎಂದು ಪ್ರಶ್ನೆ ಮಾಡಿದರು. ಇದರಿಂದ ಗಾಬರಿಗೆ ಒಳಗಾದ ಕಂಪ್ಲಿ ಗಣೇಶ್ ಮೌನವಾಗಿಬಿಟ್ಟರು. ಸದನದ ಸದಸ್ಯರು ನಗಲು ಪ್ರಾರಂಭಿಸಿದರು.
LIVE ಇಂದು ಎಷ್ಟು ಹೊತ್ತಾದರೂ ಕೂರುತ್ತೇನೆ: ಸ್ಪೀಕರ್ ಹೇಳಿಕೆ
ಆದರೆ ಕೂಡಲೇ ಗಣೇಶ್ ಅವರ ಬೆಂಬಲಕ್ಕೆ ನಿಂತ ರಮೇಶ್ ಕುಮಾರ್, ಹಾಗೆ ನಗಬೇಡಿ, ನೀವು ಹೀಗೆ ಮಾಡಿದರೆ ಅವರು ನಾಳೆ ಮಾತನಾಡಲು ಧೈರ್ಯ ಹೇಗೆ ಮಾಡುತ್ತಾರೆ ಎಂದು ಹೇಳಿದರು.
ನಂತರ ಮತ್ತೆ ಮಾತು ಪ್ರಾರಂಭಿಸಿದ ಕಂಪ್ಲಿ ಗಣೇಶ್ ಅವರು, ತಾವು ಬರೆದು ಕೊಂಡಿದ್ದ ಭಾಷಣವನ್ನು ಓದಲು ಪ್ರಾರಂಭಿಸಿದರು. ಆದರೆ ಗಣೇಶ್ ಅವರ ಮಾತಿನಲ್ಲಿ ಬಹುವಾಗಿ ಆತ್ಮವಿಶ್ವಾಸದ ಕೊರತೆ ಕಾಣುತ್ತಿತ್ತು. ಇದನ್ನು ಗುರುತಿಸಿದ ರಮೇಶ್ ಕುಮಾರ್ ಅವರು, ನಡು-ನಡುವೆ 'ಶಹಭಾಸ್, ಗುಡ್' ಎನ್ನುತ್ತಾ ಗಣೇಶ್ ಅವರಿಗೆ ಆತ್ಮವಿಶಸ್ವಾಸ ತುಂಬಿದರು.
ಕಾಂಗ್ರೆಸ್ ಇತಿಹಾಸದ ಬಗ್ಗೆ ಮಾತನಾಡಿ, ಬಿಜೆಪಿಯ ಆಪರೇಷನ್ ಕಮಲವನ್ನು ಟೀಕಿಸಿ, ಬಿಜೆಪಿಯು ಇದೇ ರಾಜಕೀಯ ಮುಂದುವರೆಸಿದರೆ ಮುಂದೆ ಅದಕ್ಕೆ ಕೇಡು ಕಾದಿದೆ ಎಂದು ಹೇಳಿ ಮಾತು ಮುಗಿಸಿದರು.