ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾಗೆ ಮೊಹಮದ್ ನಲಪಾಡ್ ಧಮ್ಕಿ
ಬೆಂಗಳೂರು, ಏಪ್ರಿಲ್ 22: ಶಾಸಕ ಎನ್.ಎ. ಹ್ಯಾರೀಶ್ ಅವರ ಪುತ್ರ ಮೊಹಮದ್ ನಲಪಾಡ್ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ. ಕೋವಿಡ್ ವಾರ್ ರೂಂ ರಚನೆ ಮಾಡುವ ವಿಚಾರದಲ್ಲಿ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಭವ್ಯಾ ಅವರಿಗೆ ನಲಪಾಡ್ ಮತ್ತು ಆತನ ಆಪ್ತ ಪಟಾಲಂ ಧಮ್ಕಿ ಹಾಕಿದ್ದಾರೆ. ನಲಪಾಡ್ ಮತ್ತು ಇತರೆ ಹದಿನೈದು ಮಂದಿ ವಿರುದ್ಧ ಭವ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬುಧವಾರ ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರೋ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ನಿರ್ಮಾಣದ ಕೆಲಸದ ವೇಳೆ ಅಡ್ಡಿಪಡಿಸಿ ನಲಪಾಡ್ ಭವ್ಯಗೆ ಧಮ್ಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ನಲಪಾಡ್ ಹಾಗೂ ಬೆಂಬಲಿಗರ ಬೆದರಿಕೆ, ಧಮ್ಕಿ ಹಾಗೂ ಗಲಾಟೆ ಹಿನ್ನಲೆಯಲ್ಲಿ ಭವ್ಯ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿ ಬೆದರಿಕೆ ಬಗ್ಗೆ ಸಂಪೂರ್ಣ ವಿವರವನ್ನು ಉಲ್ಲೇಖಿಸಿದ್ದಾರೆ.
ಶಾಸಕರಾದ ಹಾರಿಸ್ ರವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರ ವಿರುದ್ಧ ಭವ್ಯ ಕಂಪ್ಲೆಂಟ್ ಕೊಟ್ಟಿದ್ದಾರೆ. ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು, ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಆರ್ಧ ಗಂಟೆಯ ನಂತರ ಮತ್ತೆ 5 ಜನರು ಬಂದು ನಮ್ಮ ಬಾಸ್ ನಲಪಾಡ್ರವರ ತಂಟೆಗೆ ಬಂದರೆ ನಾವು ನಿಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ಭವ್ಯ ಆರೋಪ ಮಾಡಿದ್ದಾರೆ.
ಬಸವ ಕಲ್ಯಾಣ ಕ್ಷೇತ್ರದಲ್ಲೂ ಧಮ್ಕಿ: ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ವೇಳೆ ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಿರುವ ಬಗ್ಗೆಯೂ ಭವ್ಯ ದೂರಿದ್ದಾರೆ. ಬಸವ ಕಲ್ಯಾಣದಲ್ಲಿ ನಡೆದ ಚುನಾವಣಾ ಪ್ರಚಾರಕ್ಕೆ ಹೋದಾಗ ಸಹ ತೊಂದರೆ ಕೊಟ್ಟಿದ್ದಾರೆ. ನಲಪಾಡ್ ಹಾಗೂ ಬೆಂಬಲಿಗರು ನನ್ನ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ದೆಹಲಿಯಲ್ಲೂ ಕೂಡ ನಲಪಾಡ್ ನನ್ನ ಮೇಲೆ ಕೂಗಾಡಿ, ಕೆಲ ಶಾಸಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಿಗೆ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಭವ್ಯ ಉಲ್ಲೇಖಿಸಿದ್ದಾರೆ.
ಹೀಗಾಗಿ ನಲಪಾಡ್ ಹಾಗೂ ಬೆದರಿಕೆ ಹಾಕಿದ ಅವರ ಬೆಂಬಲಿಗರೆಲ್ಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತೆ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಭವ್ಯ ಮನವಿ ಮಾಡಿದ್ದಾರೆ.
ನಲಪಾಡ್ ಹಾಗೂ ಬೆಂಬಲಿಗರು ಹಿಂಸಿಸುತ್ತಿದ್ದಾರೆ, ನನಗೆ ಏನು ಮಾಡ್ತಾರೋ ಎಂಬ ಭಯವಿದೆ, ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಎನ್ಸಿಆರ್ನಲ್ಲಿರುವ ಮಾಹಿತಿ: ನಾನು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದು ದಿನಾಂಕ: 21.04.2021 ರಂದು ಮದ್ಯಾಹ್ನ 3-45 ಗಂಟೆ ಸಮಯದಲ್ಲಿ ರಾಜ್ಯಾಧ್ಯಕ್ಷರಾದ ರಕ್ಷ ರಾಮಯ್ಯ ರವರ ನೇತೃತ್ಯದಲ್ಲಿ ಯುವ ಕಾಂಗ್ರೆಸ್ ಕಚೇರಿಯಲ್ಲಿ ಕೋವಿಡ್ನಿಂದ ಬಳಲುತ್ತಿರವವರಿಗೆ ಆಸ್ಮತ್ರೆ, ಔಷಧಿ, ಪ್ಲಾಸ್ಮಾ ಈ ವ್ಯವಸ್ಥೆಯನ್ನು ಮಾಡಲು ನಾನು ಮತ್ತು ಸಹೋದ್ಯೋಗಿಗಳು ವಾರ್ ರೂಮ್ ಮಾಡುತ್ತಿದ್ದಾಗ, ಶಾಸಕರಾದ ಹಾರಿಸ್ ರವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರು ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು ಹೊಡೆಯುವ ಹಾಗೆ ಕೈ ತೋರಿಸಿ ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿ ಅಲ್ಲಿಂದ ಹೊರಟು ಹೋದರು ಆರ್ಧ ಗಂಟೆಯ ನಂತರ ಯಾರೋ 5 ಜನರು ಬಂದು ನಮ್ಮ ಬಾಸ್ ನಲಪಾಡ್ ರವರ ತಂಟೆಗೆ ಬಂದರೆ ನಾವು ನಿಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳಿ ಹೋಗಿರುತ್ತಾರೆ. ಇದೇ ರೀತಿ ಬಸವ ಕಲ್ಯಾಣದಲ್ಲಿ ನಡೆದ ಚುನಾವಣೆ ಪ್ರಚಾರಕ್ಕೆ ಹೋದಾಗ ಸಹ ತೊಂದರೆಯನ್ನು ಕೊಟ್ಟಿರುತ್ತಾರೆ. ಆದ್ದರಿಂದ ಸದರಿಯವರುಗಳನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿ ಸೂಕ್ತ ಬಂದೋಬಸ್ತ್ ಮಾಡಬೇಕೆಂದು ನೀಡಿದ ದೂರು ಇತ್ಯಾದಿ.
Recommended Video
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಮಹಮದ್ ನಲಪಾಡ್ ಗೆ ಆರಂಭದಲ್ಲಿ ಜಾಮೀನು ಕೂಡ ಸಿಕ್ಕಿರಲಿಲ್ಲ. ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ನಲಪಾಡ್ ನಂತರ ಯಾವುದೇ ವಿವಾದದಲ್ಲೂ ಸಿಲುಕಿರಲಿಲ್ಲ. ಇದೀಗ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆಗೆ ಬೆದರಿಕೆ ಹಾಕುವ ಮೂಲಕ ನಲಪಾಡ್ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ.