ಶಾಸಕ ಹ್ಯಾರಿಸ್ ಮೇಲೆ ಭೂಕಬಳಿಕೆಯ ಆರೋಪ
ಬೆಂಗಳೂರು, ಜು.8: ನಗರದ ಮಿಲ್ಲರ್ ಟ್ಯಾಂಕ್ ದಂಡು ಪ್ರದೇಶದ ಬಳಿಯ ಪಾಲಿಕೆ ಜಾಗವನ್ನು ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರು ಒತ್ತುವರಿ ಮಾಡಿರುವ ಅಂಶ ಬಿಬಿಎಂಪಿ ಸರ್ವೆಯಿಂದ ಬೆಳಕಿಗೆ ಬಂದಿದೆ.
ಶಾಸಕ ಹ್ಯಾರಿಸ್ ಸೇರಿದಂತೆ 42 ಮಂದಿಯ ವಿರುದ್ಧ ಪಾಲಿಕೆಯ ಜಾಗ ಒತ್ತುವರಿ ಹಾಗೂ ಅನಧಿಕೃತ ಬಳಕೆ ಆರೋಪದ ಮೇಲೆ ಕೆಟಿಪಿಪಿ (ಕರ್ನಾಟಕ ಟ್ರಾನ್ಸ್ಪರೆನ್ಸಿ ಅಂಡ್ ಪಬ್ಲಿಕ್ ಪ್ರಕ್ಯೂರ್ವೆುಂಟ್) ಕಾಯ್ದೆಯಡಿ ನೋಟಿಸ್ ಜಾರಿ ಮಾಡುವಂತೆ ಬಿಬಿಎಂಪಿ ಆಯುಕ್ತರು ಇದೀಗ ಸೂಚನೆ ನೀಡಿದ್ದಾರೆ.[ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸಿಎಂ ಉಗ್ರಾವತಾರ]
ಮಿಲ್ಲರ್ ಟ್ಯಾಂಕ್ ದಂಡು ಪ್ರದೇಶದ ಸರ್ವೇ ನಂ. 16, 18 ಹಾಗೂ 19ರ 3.27 ಎಕರೆ ಪಾಲಿಕೆಯ ಜಮೀನಿನಲ್ಲಿ 43 ಮಂದಿ ಅನಧಿಕೃತವಾಗಿ ವಸತಿ ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಆಧಾರಿಸಿ ಶಿವಾಜಿ ನಗರದ ಕಂದಾಯ ಅಧಿಕಾರಿ ಹಾಗೂ ವಾರ್ಡ್ನ ಕಂದಾಯ ಪರಿವೀಕ್ಷಕರು ಪರಿಶೀಲನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಒತ್ತುವರಿದಾರರು ಮಾಹಿತಿ ನೀಡಲು ನಿರಾಕರಿಸಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿದ್ದರು.
ಜಾಗ ಪಾಲಿಕೆಯ ಸ್ವತ್ತಾಗಿದ್ದರೂ, ಕೆಲವು ಆರೋಪಿಗಳು ಬಿಬಿಎಂಪಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ನಕಲಿ ದಾಖಲೆಗಳ ಮೂಲಕ ಖರೀದಿಸಿ ಅನಧಿಕೃತವಾಗಿ ಸ್ವಂತ ಜಾಗದಂತೆ ಬಳಕೆ ಮಾಡುತ್ತಿರುವ ಅಂಶ ಸಮೀಕ್ಷೆಯಿಂದ ಬೆಳಕಿಗೆ ಬಂದಿತ್ತು.
ಪರಿಶೀಲನೆಗೆ ತೆರಳಿದ ಸ್ಥಳೀಯ ಅಧಿಕಾರಿಗಳು ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥರಿಗೆ ಜಾಗ ಒತ್ತುವರಿ ನಡೆಸಿದವರ ಬಗ್ಗೆ ಮಾಹಿತಿ ನೀಡಿದ್ದರು. ಕಾನೂನು ಕೋಶದ ಮುಖ್ಯಸ್ಥರು ಪಾಲಿಕೆಯ ಜಾಗ ಒತ್ತುವರಿ ಮಾಡಿಕೊಂಡ ಈ ವ್ಯಕ್ತಿಗಳ ವಿರುದ್ಧ ಕೆಟಿಪಿಪಿ ಕಾಯ್ದೆ ಅಡಿ ನೋಟಿಸ್ ಜಾರಿ ಮಾಡಲು ಆದೇಶ ನೀಡಬೇಕು ಎಂದು ಆಯುಕ್ತರಿಗೆ ಪತ್ರದಲ್ಲಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ನೋಟಿಸ್ ಜಾರಿ ಮಾಡುವಂತೆ ಆದೇಶ ನೀಡಿದ್ದಾರೆ.[ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಹ್ಯಾರೀಸ್]
ಎಫ್ಐಆರ್ ದಾಖಲು: ಮಿಲ್ಲರ್ ಟ್ಯಾಂಕ್ ದಂಡು ಪ್ರದೇಶದ ಸರ್ವೆ ಸಂಖ್ಯೆ 18ರ 3.29 ಎಕರೆ ವಿಸ್ತೀರ್ಣದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ಉಲ್ಲಾಖಾನ್ ಮತ್ತು ಆರ್.ಎನ್.ರಾಮಯ್ಯ ಎಂಬವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎನ್.ಆರ್.ರಮೇಶ್ ಆರೋಪ: ಬಿಬಿಎಂಪಿಗೆ ಸೇರಿದ ಜಮೀನನ್ನು ಶಾಂತಿನಗರ ಶಾಸಕ ಎನ್ಎ ಹ್ಯಾರೀಸ್ ನಕಲಿ ದಾಖಲೆಗಳನ್ನು ಸೃಷ್ಠಿಸಿ ಕಬಳಿಸಿದ್ದಾರೆ ಎಂದು ಬಿಬಿಎಂಪಿ ಸದಸ್ಯ ಎನ್ಆರ್ ರಮೇಶ್ ಫೆಬ್ರವರಿಯಲ್ಲಿ ಆರೋಪ ಮಾಡಿದ್ದರು.[ಶಾಸಕ ಹ್ಯಾರೀಸ್ ವಿರುದ್ಧ ಭೂ ಕಬಳಿಕೆ ಆರೋಪ]