ಸಿಗಂದೂರು ಸೇತುವೆಗಾಗಿ ಹಠಾತ್ ಹರತಾಳ ನಡೆಸಿದ ಶಾಸಕ ಹರತಾಳು ಹಾಲಪ್ಪ
ಬೆಂಗಳೂರು, ನವೆಂಬರ್ 15: ಸಿಗಂದೂರು ಸೇತುವೆ ನಿರ್ಮಾಣದ ಕುರಿತು ಕರ್ನಾಟಕ ವಿದ್ಯುತ್ ನಿರಪೇಕ್ಷಣಾ ಪತ್ರ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬದ ವಿರುದ್ಧ ಸಾಗರ ಶಾಸಕ ಹರತಾಳು ಹಾಲಪ್ಪ ಬೆಂಗಳೂರಿನ ಶಕ್ತಿಸೌಧದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇತುವೆ ನಿರ್ಮಾಣ ಸಂಬಂಧ ಕರ್ನಾಟಕ ವಿದ್ಯುತ್ ನಿಗಮ ತಕ್ಷಣ ನಿರಪೇಕ್ಷಣಾ ಪತ್ರ ನೀಡದಿದ್ದರೆ ಲಿಂಗನಮಕ್ಕಿ, ಜೋಗ, ಸಾಗರ ಕೆಪಿಸಿಯನ್ನು ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಗಂದೂರು ಸೇತುವೆ ಕಾಮಗಾರಿಗೆ ನಿತೀನ್ ಗಡ್ಕರಿ ಚಾಲನೆ
ಕೆಪಿಸಿಯ ಬಳಿ ಈ ಕುರಿತು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಇದುವರೆಗೂ ನಿರಪೇಕ್ಷಣ ಪತ್ರ ನೀಡಿಲ್ಲ, ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನಸುರಿಸುತ್ತಿದ್ದಾರೆ ಎಂದು ದೂರಿದರು.
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಚಾಲನೆ ನೀಡಿದ್ದರು. ಈ ಸೇತುವೆ ನಿರ್ಮಾಣಕ್ಕೆ 7 ಸಾವಿರ ಕೋಟಿ ವೆಚ್ಚವಾಗುತ್ತದೆ.ಸೇತುವೆ ಹೇಗಿರುತ್ತದೆ, ಪ್ಲಾನಿಂಗ್ ಏನು: ಅಂಬಾರಗೋಡ್ಲು-ಕಳಸವಳ್ಳಿ ಮಧ್ಯೆ 2.16 ಕಿ,ಮೀ ಉದ್ದದ ಸೇತುವೆ ನಿರ್ಮಾಣವಾಗಲಿದೆ.
ಇನ್ನು, ಸೇತುವೆ ನಿರ್ಮಾಣಕ್ಕೆ2 ಮೀಟರ್ ಸುತ್ತಳತೆಯ , 40 ಮೀಟರ್ ಎತ್ತರದ 21 ಪಿಲ್ಲರ್ ಹಾಕಲಾಗುತ್ತಿದೆ. ಇದರ ಮೇಲೆ16 ಮೀಟರ್ ಅಗಲದ ಸೇತುವೆ ನಿರ್ಮಿಸಲಾಗುತ್ತದೆ. ವಿಶೇಷ ಎಂದರೆ ಸೇತುವೆ ಎರಡೂ ಬದಿಯಲ್ಲಿ 1.50 ಮೀಟರ್ ಅಗಲದ ಫುಟ್ ಪಾತ್ ಗಳಿರಲಿವೆ.
ಇದಿಷ್ಟೇ ಅಲ್ಲ, ತೂಗು ಸೇತುವೆ ಮಾದರಿಯಲ್ಲಿ ಪ್ರತಿ ಪಿಲ್ಲರ್ ಗೂ ಕಬ್ಬಿಣದ ರೋಪ್ ಗಳನ್ನು ಕಟ್ಟಲಾಗುತ್ತದೆ. ಇದು ಸಿಗಂದೂರು ಸೇತುವೆಯ ಲುಕ್ ಹೆಚ್ಚಿಸಲಿದೆ. ಅಲ್ಲದೆ, ಸೇತುವೆ ಸಮತೋಲನದಿಂದ ಇರುವಂತೆ ನೋಡಿಕೊಳ್ಳುತ್ತದೆ.