ಕೇವಲ 16,17 ಜನ ಮಾತ್ರ ಸರ್ಕಾರ ನಡೆಸ್ತಿದ್ದಾರೆ ಎಂದು ಬಿ.ಸಿ. ಪಾಟೀಲ್ ಹೇಳಿದ್ಯಾಕೆ?
ಬೆಂಗಳೂರು, ಜ.24: ಕೇವಲ 16,17 ಜನ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ, ಹಾಗಾಗಿ ಆಡಳಿತ ಚುರುಕಾಗಿಲ್ಲ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದಕ್ಕೆ ಬೇಸರವಾಗಿದೆ ಎಂದು ಬಿ.ಸಿ. ಪಾಟೀಲ್ ನೇರವಾಗಿ ಹೇಳಿದ್ದಾರೆ.
ಉಪ ಸಮರದಲ್ಲಿ ಗೆದ್ದರೂ ಮಂತ್ರಿಯಾಗದ ನಿರಾಸೆ ನೂತನ ಬಿಜೆಪಿ ಶಾಸಕರನ್ನು ಕಾಡುತ್ತಿದೆ. ಇದೇ ವಿಚಾರವಾಗಿ ಇಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ. ಪಾಟೀಲ್ ಮೌನ ಮುರಿದು ಮಾತನಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನೇರವಾಗಿ ಚರ್ಚೆ ಮಾಡೋಕೆ ಆಗಲ್ಲ. ಅದಕ್ಕೆ ಹಂತ ಇರುತ್ತೆ.
ಸಂಪುಟ ವಿಸ್ತರಣೆ; ಶಾಸಕರಿಗೆ ಸಂಕಷ್ಟ ತಂದ ಹೈಕಮಾಂಡ್ ಸೂಚನೆ?
ರಾಜ್ಯ ಬಿಜೆಪಿ ಅಧ್ಯಕ್ಷ, ಸಿಎಂ ಯಡಿಯೂರಪ್ಪ ಚರ್ಚೆ ಮಾಡುತ್ತಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಜೆಪಿ ನಡ್ಡಾ ಅವರಿಗೆ ರಾಜ್ಯದ ಬಗ್ಗೆ ಎಲ್ಲ ಮಾಹಿತಿಯಿದೆ. ಯಡಿಯೂರಪ್ಪ ಅವರು ಬಂದ ತಕ್ಷಣ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಯಡಿಯರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಭರವಸೆಯಿದೆ ಎಂದು ಶಾಸಕ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಸಚಿವ ಸ್ಥಾನ ಸಿಗದ ಬಗ್ಗೆ ನಮಗಿಂತ ಹೆಚ್ಚು ರಾಜ್ಯದ ಜನತೆಗೆ ನೋವಾಗಿದೆ. ಶೀಘ್ರವಾಗಿ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಈ ಬಗ್ಗೆ ಹೈಕಮಾಂಡ್ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಬಿ.ಸಿ. ಪಾಟೀಲ್ ಬಿಜೆಪಿ ಹೈಕಮಾಂಡ್ಗೆ ಒತ್ತಾಯ ಮಾಡಿದ್ದಾರೆ.