ಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಭೇಟಿ: ಗರಿಗೆದರಿದ ರಾಜ್ಯ ರಾಜಕೀಯ
ಬೆಂಗಳೂರು, ಡಿಸೆಂಬರ್ 11: ಉಪ ಚುನಾವಣೆಯಲ್ಲಿ ಬಿಜೆಪಿ ಬಹುಮತ ದೊರೆಯುತ್ತಿದ್ದಂತೆ, ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತಿದ್ದಾರೆ.
ಕೇವಲ ಸಚಿವ ಸ್ಥಾನ ಮಾತ್ರವಲ್ಲ ತಮಗೆ ಇದೇ ಖಾತೆ ಬೇಕು ಎನ್ನುವ ಒತ್ತಾಯವನ್ನೂ ಕೂಡ ಮಾಡುತ್ತಿದ್ದು, ಯಡಿಯೂರಪ್ಪಗೆ ಇದು ತಲೆನೋವಾಗಿಪರಿಣಮಿಸಿದೆ.
ಬೆಂಗಳೂರು: ಸಭೆ ಸೇರಿದ 'ಅರ್ಹ', ಅನರ್ಹ ಶಾಸಕರು
ಉಪ ಚುನಾವಣೆ ಬಳಿಕ ಸ್ಪಷ್ಟ ಬಹುಮತವನ್ನ ಬಿಜೆಪಿ ಪಡೆದುಕೊಳ್ಳುತ್ತಿದ್ದಂತೆಯೆ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಭೇಟಿ ಮಾಡುತ್ತಿದಾರೆ. ಬೆಂಗಳೂರಿನ ಡಾಲರ್ಸ್ ಕಾಲನಿಯ ಸಿಎಂ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ನೂತನ ಶಾಸಕರು, ಪರಾಜಿತ ಅಭ್ಯರ್ಥಿಗಳು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳು ಸಿಎಂಗೆ ಮನವಿ ಮಾಡಿದ್ದಾರೆ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ನಮ್ಮನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ವತಿಯಿಂದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಂದ ಭೇಟಿ,ಈ ಬಾರಿ ಕಲಬುರಗಿಗೆ ಸಚಿವಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಸಚಿವಾಕಾಂಕ್ಷಿ ದತ್ತಾತ್ರೆಯ ಪಾಟೀಲ್ ರಿಂದ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹರಪ್ಪನಹಳ್ಳಿಯ ನಿಯೋಗದಿಂದಲೂ ಸಿಎಂ ಭೇಟಿ ಮಾಡಿದ್ದಾರೆ. ಸ್ವಾಮೀಜಿ ಮತ್ತು ಕರುಣಾಕರ್ ರಡ್ಡಿ ಬೆಂಬಲಿಗರಿಂದ ಸಿಎಂ ಭೇಟಿಯಾಗಿದ್ದಾರೆ.
ಈ ಬಾರಿ ಕರುಣಾಕರ್ ರಡ್ಡಿಗೆ ಸಚಿವಸ್ಥಾನ ನೀಡುವಂತೆ ಮನವಿ ಮಾಡಿದ್ದು, ಸಿ ಪಿ ಯೋಗೀಶ್ವರ್ ಕೂಡಾ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಗೆದ್ದಿರುವವರಿಂದಲೂ ಸಚಿವ ಸ್ಥಾನಕ್ಕೆ ಬೇಡಿಕೆ
ಬೆಳಗ್ಗೆಯಿಂದ ನೂತನ ಶಾಸಕರು, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿರುವ ಶಾಸಕರು ಭೇಟಿ ಮಾಡಿ ಸಚಿವಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಳೆದ ಬಾರಿ ಇನ್ನೆನೂ ಸಚಿವ ಸ್ಥಾನ ಸಿಕ್ಕಿತು ಎಂಬ ಭರವಸೆಯಲ್ಲಿದ್ದ ಶಾಸಕರಾದ ದತ್ತಾತ್ರೆಯ ಪಾಟೀಲ್ ರೇವೂರ, ಸೋಮಶೇಖರ್ ರೆಡ್ಡಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ.
ಯಡಿಯೂರಪ್ಪಗೆ ಹೆಚ್ಚಿದ ಒತ್ತಡ
ಉಪ ಚುನಾವಣೆ ಸೋಲಿನ ಬಳಿಕ ಮೊದಲ ಬಾರಿ ಹುಣಸೂರು ಮಾಜಿ ಶಾಸಕ ಎಚ್ ವಿಶ್ವನಾಥ್ ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹಾಗೇ ನೂತನ ಶಾಸಕರಾದ ರಮೇಶ್ ಜಾರಕಿಹೊಳಿ, ಡಾ. ಸುಧಾಕರ್, ಎಸ್ ಟಿ ಸೋಮಶೇಖರ್, ಅನರ್ಹ ಗೊಂಡಿದ್ದ ಮಾಜಿ ಶಾಸಕ ಆರ್. ಶಂಕರ್, ಶಾಸಕರಾದ ಬಸವರಾಜ್ ದಡೆಸುಗೂರ, ಸುಭಾಷ್ ಗುತ್ತೆದಾರ್, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಬಿಜೆಪಿ ನೂತನ ಶಾಸಕರ ಸಭೆ
ಉಪಚುನಾವಣೆ ಗೆದ್ದು ಅನರ್ಹ ಹಣೆಪಟ್ಟಿ ಕಳಚಿಕೊಂಡ ಬಿಜೆಪಿ ನೂತನ ಶಾಸಕರು ನಗರದ ಶಾಂಗ್ರಿಲಾ ಹೊಟೆಲ್ ನಲ್ಲಿ ಸಭೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಕೆ.ಸುಧಾಕರ್, ಮಹೇಶ್ ಕುಮಟಳ್ಳಿ, ಸೋಮಶೇಖರ್, ಗೋಪಾಲಯ್ಯ, ಬೈರತಿ ಬಸವರಾಜು, ನಾರಾಯಣಗೌಡ ಅವರುಗಳ ಜೊತೆಗೆ ಅನರ್ಹ ಶಾಸಕರಾದ ಆರ್.ಶಂಕರ್, ಮುನಿರತ್ನ ಹಾಗೂ ಸೋತ ಅಭ್ಯರ್ಥಿ ಎಚ್.ವಿಶ್ವನಾಥ್ ಸಭೆಯಲ್ಲಿದ್ದಾರೆ.
ಸಭೆಯಲ್ಲಿ ಕೊಳ್ಳೆಗಾಲ ಶಾಸಕ ಎನ್.ಮಹೇಶ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಹ ಹಾಜರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಶ್ರೀಮಂತ ಪಾಟೀಲ್ ಸಭೆಗೆ ಗೈರಾಗಿದ್ದಾರೆ. ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್ ಹಾಗೂ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಸಹ ಸಭೆಗೆ ಗೈರಾಗಿದ್ದರು.
ರಮೇಶ್ ಜಾರಕಿಹೊಳಿ ಕಣ್ಣಿಟ್ಟಿರುವ ಖಾತೆ ಯಾವುದು?
'ಜಲ ಸಂಪನ್ಮೂಲ ಖಾತೆ ಬಹಳ ಪ್ರಭಾವಿ ಖಾತೆ ಆ ಖಾತೆ ಸಿಕ್ಕರೆ ನನ್ನ ಅದೃಷ್ಟ' ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೈರತಿ ಬಸವರಾಜ್, ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟರೆ ಚೆನ್ನಾಗಿರುತ್ತೆ ಎಂದು ಮಧ್ಯಾಹ್ನವಷ್ಟೆ ಹೇಳಿದ್ದಾರೆ. ಗೋಪಾಲಯ್ಯ ಸಹ ಇದೇ ಖಾತೆಗೆ ಡಿಮ್ಯಾಂಡ್ ಮಾಡಿದ್ದಾರಂತೆ. ಇನ್ನು ಮೈತ್ರಿ ಸರ್ಕಾರ ಪತನಕ್ಕೆ ಮುನ್ನುಡಿ ಹಾಡಿದ್ದ ರಮೇಶ್ ಜಾರಕಿಹೊಳಿ ಸಹ ಖಾತೆಯೊಂದರ ಉಲ್ಲೇಖ ಮಾಡಿದ್ದಾರೆ.