ಕಂಪ್ಯೂಟರ್ ಇದ್ದು ಬಳಕೆ ಮಾಡದ ಶಿಕ್ಷಕರ ವಿರುದ್ದ ಹರಿಹಾಯ್ದು ಸಚಿವ ವಿ. ಸೋಮಣ್ಣ
ಬೆಂಗಳೂರು, ಆಗಸ್ಟ್ 06: ಗೋವಿಂದರಾಜನಗರ ವಿಧಾನಸಭಾ ಕೇತ್ರದ ಕಾವೇರಿಪುರ ವಾರ್ಡ್ ವ್ಯಾಪ್ತಿಯಲ್ಲಿ ಬಾಳಯ್ಯನ ಕೆರೆ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕ(STP), ಬಿಬಿಎಂಪಿ ಪದವಿ ಪೂರ್ವ ಕಾಲೇಜಿನ ಎರಡನೇ ಅಂತಸ್ತಿನ ಕಟ್ಟಡ, ಗಣಕಯಂತ್ರ ಕೊಠಡಿ, ವಿಜ್ಞಾನ ಪ್ರಯೋಗಾಲಯವನ್ನು ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ.ಸೋಮಣ್ಣ ಉದ್ಘಾಟಿಸಿದರು.
ಬಾಳಯ್ಯನ ಕೆರೆಗೂ ನನಗೂ ಅವಿನಾಭಾವ ಸಂಬಂಧ, ಬಾಲಗಂಗಾಧರ ಸ್ವಾಮೀಜಿ ಅವರ ಕೃಪಾಶೀರ್ವಾದದಿಂದ ಎಲ್ಲವೂ ಒಳಿತಾಗಿದೆ, ಬಿಬಿಎಂಪಿ ಪದವಿ ಪೂರ್ವ ಕಾಲೇಜಿಗೆ ಸುಸಜ್ಜಿತವಾದ ಆಡಿಟೋರಿಯಂ, 15 ಗಣಕಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. ಮೊದಲು ಈ ಕಾಲೇಜಿನಲ್ಲಿ 29 ವಿದ್ಯಾರ್ಥಿಗಳಿದ್ದರು, ಈಗ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇನ್ನು ಸುಸರ್ಜಿತದವಾದ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಸಚಿವ ವಿ. ಸೋಮಣ್ಣರವರು ಶಿಕ್ಷಕರ ಮೇಲೂ ಹರಿಯಾಯ್ದರು. ಸರ್ಕಾರ ಕಂಪ್ಯೂಟರ್ ಗಳನ್ನು ನೀಡುವುದು ಪೂಜೆ ಮಾಡುವುದಕ್ಕಲ್ಲ. ಅವುಗಳನ್ನು ಉಪಯೋಗಿಸಿಕೊಂಡು ಮಕ್ಕಳಿಗೆ ಹೇಳಿಕೊಡು ಎಂದು ಖಾರವಾಗಿ ಹೇಳಿದ್ದಾರೆ.
ಸರ್ಕಾರಿ ಶಾಲೆ, ಬಿಬಿಎಂಪಿ ಶಾಲೆ ಅಂದರೆ ಅಸಡ್ಡೆ
ಮಕ್ಕಳು ಈ ದೇಶದ ಸಂಪತ್ತು, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವಂತಹವರು ಶಿಕ್ಷಕರು. ಖಾಸಗಿ ಶಾಲೆ ಅಂದರೆ ಪ್ರಚಾರ ಮಾಡ್ತಿರಾ, ಸರ್ಕಾರಿ ಶಾಲೆ ಅಂದರೆ ಅಸಡ್ಡೆ ತೋರುತ್ತೀರಿ ಎಂದು ಅಸಮಾಧಾನವನ್ನು ಹೊರಹಾಕಿದರು. ಸರ್ಕಾರಿ ಶಾಲೆ, ಕಾರ್ಪೋರೇಷನ್ ಶಾಲೆ ಅಂದರೆ ಬೇಡ ಅಂತಾರೆ, ನಾವೆಲ್ಲ ಓದಿರೋದು ಸರ್ಕಾರಿ ಶಾಲೆಯಲ್ಲಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಕರೆ ನೀಡಿದರು. ಸರ್ಕಾರ ಶಾಲೆಗಳಿಗಾಗಿ ಸಕಲ ಸವಲತ್ತುಗಳನ್ನು ಮಾಡಿಕೊಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಸಚಿವರು
ಎಲ್ಲ ನ್ಯೂನತೆಗಳ ಮಧ್ಯೆ ಹಗಲಿರುಳೆನ್ನದೆ ಸಾಕಷ್ಟು ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ನಾನು ಮೊದಲಿಗನಾಗಿರುತ್ತೇನೆ ಎಂದರು. ತದನಂತರ ಎರಡನೇ ಅಂತಸ್ತಿನ ಕಟ್ಟಡ, ಗಣಕಯಂತ್ರ ಕೊಠಡಿ ವಿಜ್ಞಾನ ಪ್ರಯೋಗಾಲಯ, ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ವೀಕ್ಷಿಸಿದರು. ಇದೇ ವೇಳೆಯಲ್ಲಿ ಗಣಕಯಂತ್ರವನ್ನು ಆನ್ ಮಾಡದಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಶಿಕ್ಷಕರನ್ನು ಸಹ ಸೋಮಣ್ಣನವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಐ.ಎ.ಎಸ್.ಮತ್ತು ಐ.ಪಿ.ಎಸ್.ಪರೀಕ್ಷಾ ತರಬೇತಿ ಕೇಂದ್ರ ಪ್ರಾರಂಭ
ಶಿಕ್ಷಣಕ್ಕೆ ಆದ್ಯತೆ ನೀಡಿ,ತಂತ್ರಜ್ಞಾನ ಆಳವಡಿಕೆ ಮೂಲಕ ಶಿಕ್ಷಣಕ್ಕೆ ಪ್ರಾಧ್ಯನತೆ ಕೊಡಲಾಗಿದೆ. ಸಾಮಾನ್ಯ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶಿಕ್ಷಣ ನೀಡಲು ಸಾಧ್ಯವಿಲ್ಲ ಅದ್ದರಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಿಕ್ಷಣ ಸಂಸ್ಥೆಯಾಗಿ ನಿರ್ಮಿಸಲಾಗಿದೆ. ಬಿ.ಪಿ.ಎಲ್.ಕಾರ್ಡ್ ದಾರರಿಗೆ ಉಚಿತವಾಗಿ ಮಾರುತಿನಗರ, ಕನಕಭವನದಲ್ಲಿ ಡಯಾಲಿಸಿಸ್ ಸೆಂಟರ್ ತೆರೆಯಲಾಗಿದೆ. ಕನಕಭವನ 13ಕೋಟಿ ವೆಚ್ಚದಲ್ಲಿ ಐ.ಎ.ಎಸ್.ಮತ್ತು ಐ.ಪಿ.ಎಸ್.ಪರೀಕ್ಷಾ ತರಭೇತಿ ಕೇಂದ್ರ ಆರಂಭಿಸಲಾಗುವುದು ಕನಕ ಭವನ ಕಟ್ಟಡವನ್ನು ಕಾಗಿನೆಲೆ ಗುರುಪೀಠಕ್ಕೆ ಹಸ್ತಾಂತರ ಮಾಡಲಾಗುವುದು.ಭಯಪಡುವ ಅವಶ್ಯಕತೆ ಇಲ್ಲ,ಸರ್ಕಾರದ ಸೌವಲತ್ತುಗಳನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ.
61ದೇವಸ್ಥಾನ, 79ಶುದ್ದ ಕುಡಿಯುವ ನೀರು 50ಪಾರ್ಕ್ ಗಳನ್ನು ಲೋಕರ್ಪಣೆ ಮತ್ತು ನವೀಕರಣ ಮಾಡಲಾಗಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ವಿದ್ಯಾಸಿರಿ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನುಕೂಲ
ನಾಯಂಡಹಳ್ಳಿಯಲ್ಲಿ 3800ಕೋಟಿ ವೆಚ್ಚದಲ್ಲಿ ಮೆಟ್ರೋ ಕಾಮಗಾರಿ ಮಾಡಲಾಗುತ್ತಿದೆ. ಮಾಳಗಾಳ ರಸ್ತೆ ಆಧುನೀಕರಣ ಮಾಡಲಾಗುವುದು. ಪಂತರಪಾಳ್ಯ ಮತ್ತು ದಾಸರಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ದಾಸರಹಳ್ಳಿಯಲ್ಲಿರುವ ಆಸ್ಪತ್ರೆ ಎರಡು ತಿಂಗಳ ಒಳಗೆ ಲೋಕರ್ಪಣೆ ಮಾಡಲಾಗುವುದು.ವಿದ್ಯಾವಂತ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಪ್ರಧಾನಿ ನರೇಂದ್ರಮೋದಿರವರು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ನೇತೃತ್ವದಲ್ಲಿ ವಿದ್ಯಾಸಿರಿ ಯೋಜನೆಯ ಮೂಲಕ 40ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ. ರಾಜಕಾರಣ ನಿಂತ ನೀರಲ್ಲ,ಹರಿಯುವ ನೀರು ನಾವು ಮಾಡುವ ಸಾಧನೆ ಮುಖ್ಯ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಅ.ದೇವೇಗೌಡ ರವರು, ಸಹಾಯಕ ಆಯುಕ್ತರಾದ ಉಮೇಶ್ ರವರು, ಸಹಾಯಕ ಶಿಕ್ಷಣಾಧಿಕಾರಿ ಹನುಮಂತಯ್ಯ, ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಪಲ್ಲವಿ ಚೆನ್ನಪ್ಪ, ಉಮೇಶ್ ಶೆಟ್ಟಿ, ದಾಸೇಗೌಡರು, ರೂಪ ಲಿಂಗೇಶ್, ವಾಗೀಶ್ ಉಪಸ್ಥಿತರಿದ್ದರು.