ನಮ್ಮ ಮೆಟ್ರೋ ಸಮಾರಂಭದಲ್ಲಿ ಕನ್ನಡ ಕಡೆಗಣಿಸಿದ BMRCLಗೆ ನೋಟಿಸ್
ಬೆಂಗಳೂರು, ಸಪ್ಚೆಂಬರ್ 2: ಬೆಂಗಳೂರಿನ ನಾಯಂಡಹಳ್ಳಿ ಮತ್ತು ಕೆಂಗೇರಿ ಮಾರ್ಗದ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಕನ್ನಡ ಭಾಷೆ ಕಡೆಗಣನೆಯನ್ನು ಪ್ರಶ್ನಿಸಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(BMRCL)ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ನೋಟಿಸ್ ನೀಡಿದ್ದಾರೆ.
ಕಳೆದ ಆಗಸ್ಟ್ 29ರಂದು ನಡೆದ ನಾಯಂಡಹಳ್ಳಿ - ಕೆಂಗೇರಿ ನಡುವಿನ ಮೆಟ್ರೋ ಸಂಚಾರ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಯ ಕಡೆಗಣನೆಯನ್ನು ಗಮನಿಸಲಾಗಿದೆ. ಸಮಾರಂಭದ ಮುಖ್ಯ ವೇದಿಕೆ ಫಲಕಗಳಲ್ಲಿ ಹಾಗೂ ಹಿಂಬದಿಯ ಪರದೆಯಲ್ಲಿ ಕನ್ನಡ ಭಾಷೆಯನ್ನು ಬಳಸಿರುವುದಿಲ್ಲ ಎಂಬುದು ನಿಜಕ್ಕೂ ಗಂಭೀರವಾದ ಸಂಗತಿ. ರಾಜ್ಯದ ರಾಜಧಾನಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಕಡೆಗಣಿಸಿರುವುದು ಗಂಭೀರ ಲೋಪವಾಗಿರುತ್ತದೆ.
Breaking news; ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಉದ್ಘಾಟನೆ
ಈಗಾಗಲೇ ಆಡಳಿತ ಭಾಷೆಯಾಗಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಇಂತಹ ಕರ್ತವ್ಯಲೋಪವಾಗಿರುವುದು ನಿಜಕ್ಕೂ ದುರಾದೃಷ್ಟಕರ. ಈ ಬಗ್ಗೆ ಗಮನ ಹರಿಸಬೇಕಾಗಿದ್ದು ನಿಮ್ಮ ಹಾಗೂ ನಿಮ್ಮ ಅಧೀನ ಅಧಿಕಾರಿಗಳ ಕರ್ತವ್ಯವಾಗಿದೆ.
ಕನ್ನಡ ಕಡೆಗಣನೆಗೆ ವಿವರಣೆ ಕೊಡಿ ಎಂದ ಸಚಿವರು:
ಬೆಂಗಳೂರು ಮೆಟ್ರೋಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಕನ್ನಡದ ಕಡೆಗಣನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಭಾಷೆ ಒಂದು ಭಾವನಾತ್ಮಕ ವಿಚಾರ. ಅದರಲ್ಲಿಯೂ ಆಡಳಿತ ಭಾಷೆ ಬಗ್ಗೆ ನಿರ್ಲಕ್ಷ್ಯ ತೋರಿದ್ದೇ ಆದರೆ, ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳಸಬೇಕಾದ ಸರ್ಕಾರದ ಇಲಾಖೆಗಳು ಈ ರೀತಿ ಲೋಪ ಎಸಗುವುದು ಗಂಭೀರ ಕರ್ತವ್ಯಲೋಪವೆಸಗಿದಂತೆ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ತಾವು ಕೂಡಲೇ ಶಿಸ್ತು ಕ್ರಮಕೈಗೊಳ್ಳಬೇಕು ಹಾಗೂ ಸೂಕ್ತ ವಿವರಣೆ ನೀಡಬೇಕೆಂದು ಈ ಮೂಲಕ ಕೋರಲಾಗಿದೆ.
Recommended Video