ಕರ್ನಾಟಕದಲ್ಲಿ ಸಚಿವರ ತಂದೆಯಲ್ಲೇ ಕೊರೊನಾವೈರಸ್ ಸೋಂಕಿತ ಲಕ್ಷಣ!
ಬೆಂಗಳೂರು, ಜೂನ್.22: ನೊವೆಲ್ ಕೊರೊನಾವೈರಸ್ ಯಾವಾಗ, ಯಾರಿಗೆ, ಹೇಗೆ, ಯಾವ ರೂಪದಲ್ಲಿ ಅಂಟಿಕೊಳ್ಳುತ್ತದೆ ಎನ್ನುವುದೇ ಅರ್ಥವಾಗುವುದಿಲ್ಲ. ಇದೇ ಭೀತಿ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನೂ ಬಿಟ್ಟಿಲ್ಲ.
Recommended Video
ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಾ.ಕೆ.ಸುಧಾಕರ್ ಅವರ ತಂದೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆತಂಕವನ್ನು ಹುಟ್ಟಿಸಿದೆ. ತೀವ್ರ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ತಮ್ಮ ತಂದೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಕ್ವಾರೆಂಟೈನ್ ನಿಯಮವೇ ಬದಲು; ಕಾರಣ ಇಲ್ಲಿದೆ
82 ವರ್ಷ ವಯಸ್ಸಿನ ತಂದೆಯಲ್ಲಿ ಕೊರೊನಾವೈರಸ್ ಸೋಂಕಿತ ಲಕ್ಷಣ ಕಂಡು ಬಂದಿರುವ ಹಿನ್ನೆಲೆ ಕೊವಿಡ್-19 ತಪಾಸಣೆಯನ್ನೂ ಮಾಡಲಾಗಿದೆ. ರಕ್ತ ಮತ್ತು ಗಂಟಲು ಮಾದರಿಯನ್ನು ಸಂಗ್ರಹಿಸಿದ್ದು, ತಪಾಸಣೆಗೆ ಕಳುಹಿಸಲಾಗಿದೆ. ತಮ್ಮ ತಂದೆ ಆರೋಗ್ಯವಾಗಿರುವಂತೆ ಹಾರೈಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
|
ಮನೆ ಕೆಲಸದವನಿಂದ ಕೊರೊನಾವೈರಸ್ ಆತಂಕ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ 82 ವರ್ಷದ ತಂದೆಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿರುವುದು ಇಡೀ ಕುಟುಂಬದಲ್ಲಿ ಆತಂಕವನ್ನು ಹುಟ್ಟುಹಾಕಿದೆ.
ಸಚಿವರ ಮನೆಯಲ್ಲಿ ಎಲ್ಲರಿಗೂ ಕೊವಿಡ್-19 ತಪಾಸಣೆ
ಕೊರೊನಾವೈರಸ್ ಆರಂಭಿಕ ಹಂತದಲ್ಲಿ ರಾಜ್ಯದಲ್ಲಿ ಸಂಚರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ 14 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿದ್ದರು. ನಂತರದಲ್ಲಿ ಎಂದಿನಂತೆ ಕಾರ್ಯಪ್ರವೃತ್ತರಾದ ಸಚಿವರಿಗೆ ಇದೀಗ ಮತ್ತೊಮ್ಮೆ ಸೋಂಕಿನ ಭೀತಿ ಎದುರಾಗಿದೆ. ಈ ಹಿನ್ನೆಲೆ ಸಚಿವರಷ್ಟೇ ಅಲ್ಲದೇ ಮನೆಯ ಮಂದಿಯೆಲ್ಲ ಕೊರೊನಾವೈರಸ್ ಸೋಂಕು ತಪಾಸಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಿಎಂ ಸಭೆಯಿಂದ ವೈದ್ಯಕೀಯ ಶಿಕ್ಷಣ ಸಚಿವರು ದೂರ
ಬೆಂಗಳೂರಿನಲ್ಲಿ ಕೊರೊನಾವೈರಸ್ ಮಹಾಸ್ಫೋಟ ಸಂಭವಿಸುತ್ತಿದ್ದು, ಅದಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಇಂಥದೊಂದು ಮಹತ್ವದ ಸಭೆಗೆ ವೈದ್ಯಕೀಯ ಶಿಕ್ಷಣ ಸಚಿವರೇ ಗೈರು ಹಾಜರಾಗಿದ್ದು, ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ ಸಚಿವ ಡಾ.ಕೆ.ಸುಧಾಕರ್ ಅದೇಕೆ ಸಭೆಗೆ ಹಾಜರಾಗಲಿಲ್ಲ ಎನ್ನುವುದನ್ನು ತಮ್ಮ ಟ್ವೀಟ್ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ.
|
ಕೊರೊನಾವೈರಸ್ ಬಗ್ಗೆ ಟ್ವೀಟ್ ಮಾಡಿದ್ದ ಸಚಿವರು
ತಮ್ಮ ತಂದೆಯಲ್ಲಿ ಕೊರೊನಾವೈರಸ್ ಸೋಂಕಿತ ಲಕ್ಷಣಗಳು ಕಾಣಿಸಿಕೊಂಡಿವೆ ಎನ್ನುವುದನ್ನು ತಿಳಿಯಪಡಿಸುವ ಮುನ್ನ ಮಹಾಮಾರಿ ಬಗ್ಗೆ ರಾಜ್ಯದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದರು. ರಾಜ್ಯದ ಸೋಂಕಿತರ ಪೈಕಿ 61.39ರಷ್ಟು ಜನರು ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಪ್ರಮಾಣವು 1.49ರಷ್ಟಿದೆ ಎಂದು ಟ್ವೀಟ್ ಮಾಡಿದ್ದರು.