ತೇಜಸ್ವಿ ಕೃತಿಗಳಲ್ಲಿ ಪ್ರಕೃತಿಯ ಮಹತ್ವದ ಅನಾವರಣ: ಡಾ.ಕೆ.ಸುಧಾಕರ್
ಬೆಂಗಳೂರು, ಸೆಪ್ಟೆಂಬರ್ 8: ''ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ಕವಿ ಕುವೆಂಪುರವರ ಮಗನಾದರೂ, ಸ್ವತಂತ್ರವಾಗಿ ಸಾಹಿತ್ಯ ರಚನೆ ಮಾಡಿದರು. ಪ್ರಕೃತಿಯ ಮಹತ್ವದ ಅನಾವರಣ ಅವರ ಕೃತಿಗಳಲ್ಲಿ ಕಾಣುತ್ತದೆ,'' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸಾಹಿತಿ ಪೂರ್ಣಚಂದ್ರ ತೇಜಸ್ವಿರವರ ಜನ್ಮದಿನದ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.
ಪೂರ್ಣಚಂದ್ರ ತೇಜಸ್ವಿಯವರ ಜಯಂತಿ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನವನ್ನು ಡಾ.ಕೆ.ಸುಧಾಕರ್ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ 2, 4, 7, 12 ಹಾಗೂ 16 ವರ್ಷಗಳಿಗೊಮ್ಮೆ ಪಶ್ಚಿಮಘಟ್ಟಗಳ ಗಿರಿಕಂದರಗಳಲ್ಲಿ ಅರಳುವ ಕುರಿಂಜಿ ಹೂಗಳ ಕುರಿತ ಛಾಯಾಚಿತ್ರ-ಸಾಕ್ಷ್ಯಚಿತ್ರಗಳ ಪ್ರದರ್ಶನ ಸೆಪ್ಟೆಂಬರ್ 8 ರಿಂದ 19ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗುತ್ತಿದೆ.
ತೇಜಸ್ವಿಯವರು ಪರಿಸರದ ಬಗ್ಗೆ ಬರೆದರು
''ತೇಜಸ್ವಿಯವರು ಪರಿಸರದ ಬಗ್ಗೆ ಬರೆದರು. ಆದರೆ ಭಾರತದಲ್ಲಿ ಪ್ರಕೃತಿಯನ್ನು ಮರೆಯಲಾಗುತ್ತಿದೆ. ನೈಸರ್ಗಿಕ ವಿಕೋಪಗಳು ಹೆಚ್ಚಿದ ಬಳಿಕ ಪ್ರಕೃತಿಯ ಮಹತ್ವದ ಅರಿವಾಗುತ್ತಿದೆ. ವಿದೇಶಗಳ ಕೆಲ ನಗರಗಳಲ್ಲಿ ಬಹುಮಹಡಿ ಕಟ್ಟಡ ಇರುವುದಿಲ್ಲ. ಬದಲಾಗಿ ವಿಶಾಲ ಉದ್ಯಾನಗಳಿರುತ್ತವೆ. ಆದರೆ ನಮ್ಮ ನಗರಗಳಲ್ಲಿ ಹೆಚ್ಚು ಕಾಂಕ್ರಿಟ್ ಬೆಳೆಸುತ್ತಿದ್ದೇವೆ. ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇಂದಿನ ಅಗತ್ಯ'' ಎಂದರು.
ಪರಿಸರ ಸಂರಕ್ಷಣೆ ಮಾಡಿ
ಪ್ರಕೃತಿಯಲ್ಲಿರುವ ಜಲ, ಮಣ್ಣು ಎಲ್ಲವನ್ನೂ ತಾಯಿ ಎಂದು ಕರೆಯುತ್ತೇವೆ. ಪರಿಸರದಲ್ಲಿ ಅವಶ್ಯಕತೆ ಇರುವಷ್ಟನ್ನು ಮಾತ್ರ ಬಳಸಿಕೊಂಡರೆ ಪರಿಸರ ಸಂರಕ್ಷಣೆ ಮಾಡಿ, ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತದೆ. ಪ್ರಕೃತಿ ಮಾನವನಿಗೆ ಮಾತ್ರ ಸೀಮಿತ ಎಂದುಕೊಂಡರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಪೂರ್ವಜರು ನಮಗಾಗಿ ಪ್ರಕೃತಿಯನ್ನು ಬಿಟ್ಟು ಹೋದಂತೆ ನಾವು ಕೂಡ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಎಂದರು.
ನಿಸರ್ಗದೊಂದಿಗೆ ಹೇಗೆ ಸೂಕ್ಷ್ಮವಾಗಿ ವರ್ತಿಸಬೇಕು
ನಿಸರ್ಗದೊಂದಿಗೆ ಹೇಗೆ ಸೂಕ್ಷ್ಮವಾಗಿ ವರ್ತಿಸಬೇಕು ಎಂಬ ಬಗ್ಗೆ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯವಿದೆ. ಅನೇಕರು ಪರಿಸರದ ಉಳಿವಿಗೆ ದುಡಿಯುತ್ತಿದ್ದಾರೆ. ಅದೇ ರೀತಿ ತೇಜಸ್ವಿಯವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಅವರ ಮಾಡಿದ ಸಾಹಿತ್ಯ ಕಾರ್ಯ ಉಳಿದಿವೆ ಎಂದರು.
ಕಾರ್ಯಯೋಜನೆ: ಪರಿಸರದ ಉಳಿವಿಗೆ ವಿಶೇಷವಾದ ಕಾರ್ಯಯೋಜನೆ, ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ಸಚಿವರು ಹೇಳಿದರು.
ತೇಜಸ್ವಿ ಜೀವಲೋಕ ಛಾಯಾಚಿತ್ರ-ಸಾಕ್ಷ್ಯಚಿತ್ರ ಪ್ರದರ್ಶನ
ಪರಿಸರ -ನಿಸರ್ಗ ಸಂರಕ್ಷಣಾ ಸಂಸ್ಥೆ, ಕರ್ನಾಟಕ ಚಿತ್ರಕಲಾ ಪರಿಷತ್, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸಹಯೋಗದೊಂದಿಗೆ ಸೆ.8ರಂದು ತೇಜಸ್ವಿ ಜೀವಲೋಕ ಹೆಸರಿನ ಛಾಯಾಚಿತ್ರ-ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು 2013ರಿಂದ ನಡೆಸಲಾಗುತ್ತಿದೆ. ಈ ಹಿಂದೆ ಹಕ್ಕಿ ಲೋಕ, ಕೀಟ ಲೋಕ, ಪುಷ್ಪ ಲೋಕ, ಪರಾಗಸ್ಪರ್ಶಿಗಳು, ಜೇಡ ಲೋಕ, ಬಾವಲಿಗಳ ನಿಗೂಢಲೋಕ, ಗೂಬೆಗಳ ಮುಗ್ಧಲೋಕ ಹಾಗೂ 2020ರಲ್ಲಿ ಹದ್ದುಗಳ ಅದ್ಭುತ ಲೋಕಗಳನ್ನು ಆಯೋಜಿಸಲಾಗಿತ್ತು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದು, ಸರ್ಕಾರವು ಇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಸ್ಥಾಪಿಸಲಾಗಿದೆ. ಈ ಮುಖಾಂತರ ತೇಜಸ್ವಿಯವರ ಸಾಹಿತ್ಯ, ಪರಿಸರ, ಫೋಟೋಗ್ರಫಿ, ಚಿತ್ರಕಲೆ, ಕೃಷಿ ಮುಂತಾದ ಹಲವಾರು ವಿಚಾರಧಾರೆಗಳನ್ನು ಯುವಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೇಂದ್ರ ಆಶಯ. ವ್ಯಕ್ತಿ ವಿಶಿಷ್ಟ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತ ಬೆಳೆಯುತ್ತದೆ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ಉಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ತೇಜಸ್ವಿ.
Recommended Video