ಶಾಕಿಂಗ್ ಸುದ್ದಿ: ಸಿಡಿ ಬಗ್ಗೆ ಸಚಿವರಿಗೆ ಮೊದಲೇ ಸುಳಿವು ಸಿಕ್ಕಿತ್ತಾ?
ಬೆಂಗಳೂರು, ಮಾರ್ಚ್.06: ಕರ್ನಾಟಕ ವಿಧಾನಸಭಾ ಅಧಿವೇಶನ ನಡೆಯುವ ಸಂದರ್ಭದಲ್ಲಿ ನಮ್ಮನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವ ಗುಮಾನಿ ಇತ್ತು. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಆರು ಮಂದಿ ಸಚಿವರು ಯಾವುದೇ ಆತಂಕದಲ್ಲಿ ನ್ಯಾಯಾಲಯದ ಮೊರೆ ಹೋಗಿಲ್ಲ. ಸುಳ್ಳು ಸುದ್ದಿಯಿಂದ ತೇಜೋವಧೆ ಮಾಡಬಾರದು ಎಂಬ ಉದ್ದೇಶದಿಂದ ನಾವು ಕೋರ್ಟ್ ಮೊರೆಗೆ ಹೋಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಜಾರಕಿಹೊಳಿ ಸಿಡಿ ಸ್ಪೋಟವಾಗುತ್ತಿದ್ದಂತೆ ಕೋರ್ಟ್ ಮೊರೆ ಹೋದ ಆರು ಸಚಿವರು!
ಸದ್ಯಕ್ಕೆ ಆರು ಜನ ಸಚಿವರು ಸಿಕ್ಕಿದ್ದು, ನಾವು ಆರು ಜನ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ಉಳಿದ ಸಚಿವರು ಸಹ ನಮ್ಮೊಂದಿಗೆ ನ್ಯಾಯಾಲಯಕ್ಕೆ ಶನಿವಾರ ಅಥವಾ ಸೋಮವಾರ ಅರ್ಜಿ ಸಲ್ಲಿಸಲಿದ್ದಾರೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಮೊದಲೇ ಸಚಿವರಿಗೆ ಸಿಕ್ಕಿತ್ತಾ ಸುಳಿವು?
"ಬಾಂಬೆ ಫ್ರೆಂಡ್ಸ್ ಎಂತಲೇ ಕರೆದುಕೊಳ್ಳುವ ಶಾಸಕರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಮೊದಲೇ ನಮಗೆ ಹಳೆಯ ಸ್ನೇಹಿತರ ಸುಳಿವು ನೀಡಿದ್ದರು. ನಮ್ಮ ವಿರುದ್ಧ ಏನೋ ಗೋಲ್ಮಾಲ್ ಮಾಡುತ್ತಿದ್ದಾರೆ ಎಂದು ಹಳೆ ಮಿತ್ರರು ಹೇಳಿದ್ದರು. ಆದರೆ ಸತ್ಯ ಹೊರ ಬರುವಷ್ಟರಲ್ಲೇ ಎಲ್ಲಾ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ" ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಸಚಿವರಿಗೆ ಯಾರಿಂದಲೂ ಬ್ಲ್ಯಾಕ್ ಮೇಲ್ ಸಂದೇಶ ಬಂದಿಲ್ಲ
"ನನಗೆ ಇದುವರೆಗೂ ಯಾರಿಂದಲೂ ಬ್ಲ್ಯಾಕ್ ಮೇಲ್ ಸಂದೇಶಗಳು ಬಂದಿಲ್ಲ. ನಾವು ಇಷ್ಟು ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಒಂದೆರೆಡು ನಿಮಿಷಗಳಲ್ಲಿ ಟಿವಿಯಲ್ಲಿ ಏನೋ ಬಂದರೆ ಹೇಗೆ. ಅದರಿಂದ ನಮ್ಮ ತೇಜೋವಧೆ ಆಗಬಾರದು ಎಂದು ನಾವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ರಾಜ್ಯ ಬಜೆಟ್ ಮಂಡನೆ ನಂತರದಲ್ಲಿ ಮಂಗಳವಾರ ನಾವು ಏಕೆ ಕೋರ್ಟ್ ಮೊರೆ ಹೋಗಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ" ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
"ಇಲಾಖೆ ಬಗ್ಗೆ ಟೀಕೆ-ಟಿಪ್ಪಣಿಗಳನ್ನು ಮಾಡಲಿ"
ನಾವು ನ್ಯಾಯಲಯದ ಮೊರೆ ಹೋಗಿರುವ ಉದ್ದೇಶ ನಮ್ಮ ವಿರುದ್ಧ ಯಾರೂ ಮಾತನಾಡಬಾರದು ಎಂಬುದಲ್ಲ. ನಮ್ಮ ಇಲಾಖೆಗಳಿಗೆ ಮತ್ತು ನಮ್ಮ ಕೆಲಸ ಕಾರ್ಯಗಳ ಬಗ್ಗೆ ಬೇಕಿದ್ದರೆ ಟೀಕೆ ಟಿಪ್ಪಣಿಗಳನ್ನು ಮಾಡಲಿ. ಆದರೆ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಕಿಡಿ ಕಾರಿದ್ದಾರೆ.
Recommended Video
ಶನಿವಾರ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ವಿಚಾರಣೆ
ಕರ್ನಾಟಕ ರಾಜ್ಯ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಯಾವುದೇ ರೀತಿ ಅವಹೇಳನಕಾರಿ ಮತ್ತು ಮಾನಹಾನಿಯ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವ ಡಾ. ಕೆ. ಸುಧಾಕರ್, ಬಿ ಸಿ ಪಾಟೀಲ್, ಶಿವರಾಜ್ ಹೆಬ್ಬಾರ್, ಡಾ. ಕೆ ಸಿ ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಚಿವರು ಸಲ್ಲಿಸಿದ ಅರ್ಜಿ ಶನಿವಾರ ವಿಚಾರಣೆ ನಡೆಸಲಿದೆ.