ಮಲಬಾರ್ ಟೀ ಮಧುಮೇಹಕ್ಕೆ ಉತ್ತಮ ಔಷಧ: ಸಚಿವ ನಾರಾಯಣಗೌಡ
ಬೆಂಗಳೂರು, ಫೆ. 26: ಮಲಬಾರ್ ಚಹಾ ಮದುಮೇಹಕ್ಕೆ ಉತ್ತಮ ಔಷಧಿಯಾಗಿದ್ದು, ಉತ್ಪಾದನೆ ಹೆಚ್ಚಿಸಬೇಕು ಎಂದು ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಇಲಾಖೆ ಸಚಿವ ನಾರಾಯಣಗೌಡ ಅಧಿಖಾರಿಗಳಿಗೆ ಸೂಚಿಸಿದ್ದಾರೆ. ಬೆಂಗಳೂರಿನ ಐಎಎಸ್ ಅಸೋಸಿಯೇಶನ್ನಲ್ಲಿ ತಮ್ಮ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ್ದಾರೆ. ಮಲಬಾರ್ ಚಹಾಕ್ಕೆ ಹೆಚ್ಚಿನ ಪ್ರಚಾರ ಕೊಟ್ಟು, ಮಾರುಕಟ್ಟೆ ಸೃಷ್ಟಿಸಬೇಕು ಎಂದು ನಾರಾಯಣಗೌಡ ಅಧಿಕಾರಿಗಳಿಗೆ ಹೇಳಿದ್ದಾರೆ. ಜೊತೆಗೆ ಮಲಬಾರ್ ಚಹಾಕ್ಕೆ ಪ್ರಚಾರ ಕೊಡುವುದೂ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದ್ದಾರೆ.
ಪೌರಾಡಳಿತ ಇಲಾಖೆ ಪ್ರಗತಿ ಪರಿಶೀಲನೆಯನ್ನು ಸಚಿವ ನಾರಾಯಣಗೌಡ ನಡೆಸಿದ್ದಾರೆ. ಮುನ್ಸಿಪಲ್ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ತುಂಬಾ ನಿಧಾನಗತಿಯಲ್ಲಿದೆ. ಸಾಕಷ್ಟು ವರ್ಷಗಳಿಂದ ತೆರಿಗೆ ಕಟ್ಟುವುದನ್ನು ಅಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ತೆರಿಗೆ ಸಂಗ್ರಹಕ್ಕೆ ಸಮಯದ ಟಾರ್ಗೆಟ್ ನೀಡಿ ತೆರಿಗೆ ಸಂಗ್ರಹದ ಕಾರ್ಯ ಆಗಬೇಕು. ತೆರಿಗೆ ವಸೂಲಿ ಕಳಪೆ ಸಾಧನೆಗೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ದಾವೋಸ್ ನಿಂದ ಕರ್ನಾಟಕದ ಮಧುಮೇಹಿಗಳಿಗೆ ಸಿಹಿ ಸುದ್ದಿ
ಪೌರಾಡಳಿತ ಇಲಾಖೆಯಲ್ಲಿ ಬಾಕಿ ಇರುವ ಕೆಲಸ ತಕ್ಷಣ ಮುಗಿಸಬೇಕು. ತೆರಿಗೆ ಸಂಗ್ರಹದಲ್ಲಿ ತುಂಬಾ ನಿಧಾನಗತಿ ಇದೆ. ಪ್ಲಾಸ್ಟಿಕ್ ಸಮಸ್ಯೆ ಕೂಡ ಹೆಚ್ಚಾಗಿದೆ. ಈ ಬಗ್ಗೆ ತಕ್ಷಣವೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯುಜಿಡಿಗೆ ಪ್ಲಾಸ್ಟಿಕ್ ನಿಂದ ಹೆಚ್ಚಿನ ತೊಂದರೆ ಆಗುತ್ತಿದೆ. ಪ್ಲಾಸ್ಟಿಕ್ ನಿಷೇಧ ಆದರೂ ಮಾರಾಟವಾಗ್ತಿದೆ. ಹೀಗಾಗಿ ಪ್ಲಾಸ್ಟಿಕ್ ಉತ್ಪಾದನೆ ಮಾಡುವುದನ್ನೇ ತಡೆಗಟ್ಟಬೇಕು. ದಾಳಿ ನಡೆಸಿ ಸೀಜ್ ಮಾಡಬೇಕು. ಅದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ಕೈಗಾರಿಕಾ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯ ಜಂಟಿ ಮೀಟಿಂಗ್ ಕರೆಯಲು ಸಚಿವರು ತಿಳಿಸಿದ್ದಾರೆ. ಅಲ್ಲದೆ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದಲ್ಲಿ, ದಾಳಿ ನಡೆಸಿ ಸೀಜ್ ಮಾಡುವಂತೆಯೂ ಸೂಚನೆ ನೀಡಿದ್ದಾರೆ.
ಮೈಸೂರು ರೇಷ್ಮೆ ಸೀರೆ ಬೇಡಿಕೆ ಈಡೇರಿಸಲು ನಾರಾಯಣಗೌಡ ಸೂಚನೆ:
ಮೈಸೂರು ಸಿಲ್ಕ್ ಹೆಚ್ಚಿನ ಬೇಡಿಕೆ ಇದೆ, ಪ್ರತಿವರ್ಷ ಸುಮಾರು ಎರಡು ಲಕ್ಷ ರೇಷ್ಮೆ ಸೀರೆ ಬೇಡಿಕೆ ಇದೆ. ಆದ್ರೆ ಒಂದು ಲಕ್ಷ ಸೀರೆ ಮಾತ್ರ ಉತ್ಪಾದನೆ ಆಗುತ್ತಿದೆ. ಉತ್ಪಾದನೆ ಹೆಚ್ಚಿಸಲು ಬೇಕಾದ ವ್ಯವಸ್ಥೆ ಬಗ್ಗೆಯು ತಕ್ಷಣ ವರದಿ ನೀಡುವಂತೆ ನಾರಾಯಣಗೌಡ ಸಲಹೆ ಕೊಟ್ಟಿದ್ದಾರೆ. ಅಲ್ಲದೆ ರೇಷ್ಮೆಗೆ ಹೈಟೆಕ್ ಮಾರುಕಟ್ಟೆ ಸಿದ್ದಪಡಿಸಬೇಕು ಮತ್ತು ರೇಷ್ಮೇ ಮೇಳ ಮಾಡಬೇಕು. ಈ ಬಗ್ಗೆ ಯೋಜನೆ ಮಾಡಿ ಎಂದು ಸಚಿವ ಡಾ. ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತೋಟಗಾರಿಕೆ ಇಲಾಖೆಯಲ್ಲಿ ಕೆಲವೆಡೆ ಕೆಲಸಗಾರರಲ್ಲಿ ಶಿಸ್ತು ಇಲ್ಲ. ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಬೇಕು. ಡ್ರಿಪ್ ಇರಿಗೇಷನ್ ಅಥವಾ ಯಾವುದೆ ಉಪಕರಣಗಳು ಗುಣಮಟ್ಟದ್ದಾಗಿರಬೇಕು. ಸರ್ಕಾರದ ಯಾವುದೇ ಯೋಜನೆ ನೇರವಾಗಿ ರೈತರಿಗೆ ತಲುಪಬೇಕು. ಯಾವುದೇ ಅವ್ಯವಹಾರ ನಡದಲ್ಲಿ ನೇರವಾಗಿ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು. ಅಲ್ಲದೆ ಅಧಿಕಾರಿಗಳು ಫೀಲ್ಡ್ ವಿಸಿಟ್ ಮಾಡಿ ವರದಿ ನೀಡಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ. ಐಎಎಸ್ ಅಸೋಸಿಯೇಶನ್ ನಲ್ಲಿ ನಡೆದ ಸಭೆಯಲ್ಲಿ ಪೌರಾಡಳಿತ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ ಅಂಜುಂ ಫರವೇಜ್, ತೋಟಗಾರಿಕಾ ಇಲಾಖೆ ಪ್ರಿನ್ಸಿಪಲ್ ಸೆಕ್ರೇಟರಿ ರಾಜಕುಮಾರ್ ಕಟಾರಿಯಾ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.