ಕೆಜೆ ಜಾರ್ಜ್ ರಿಂದ ಸಬ್ ಅರ್ಬನ್ ರೈಲಿಗೆ ಚಾಲನೆ
ಬೆಂಗಳೂರು, ಆಗಸ್ಟ್ 18: ಬೆಂಗಳೂರು ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಸಬ್ ಅರ್ಬನ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭುರವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶುಕ್ರವಾರದಂದು ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸಂಚಾರ
ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ವರೆಗೆ ಸಬ್ ಅರ್ಬನ್ ರೈಲಿನ ಜೊತೆಗೆ ಒಟ್ಟು ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ನವದೆಹಲಿಯ ರೈಲ್ವೆ ಭವನದಿಂದ ಸುರೇಶ್ ಪ್ರಭು ಹಸಿರು ನಿಶಾನೆ ತೋರಿಸಿದರು.
ಉಪನಗರಗಳ ನಡುವೆ ರೈಲು ಮಾರ್ಗ ನಿರ್ಮಾಣ ಮಾಡುವ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು ಕಳೆದ ವರ್ಷ ಗ್ರೀನ್ ಸಿಗ್ನಲ್ ನೀಡಿತ್ತು.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ರಿಂಗ್ ರೈಲು
ಮಂಡ್ಯ-ಕೆಂಗೇರಿ, ತುಮಕೂರು, ಯಶವಂತಪುರ, ವೈಟ್ಫೀಲ್ಡ್ -ಬೈಯಪ್ಪನಹಳ್ಳಿ, ನಡುವೆ ಸಬ್ಅರ್ಬನ್ ರೈಲ್ವೆ ಯೋಜನೆ ಜಾರಿಗೆ ತರುವ ಉದ್ದೇಶವಿದೆ. ಮೊದಲ ಹಂತದಲ್ಲಿ ವೈಟ್ಫೀಲ್ಡ್ -ಬೈಯಪ್ಪನಹಳ್ಳಿ ಜಾರಿಗೆ ಬರುತ್ತಿದೆ.
ಸಬರ್ ಬನ್ ರೈಲು ಸಂಪೂರ್ಣ ಮಾಡಬೇಕಾದರೆ 10 ಸಾವಿರ ಕೋಟಿ ರೂ. ಅಗತ್ಯವಾಗಿದೆ. ಅದಕ್ಕಾಗಿ ಪ್ರತ್ಯೇಕ ಲೇನ್ ಹಾಕಬೇಕಾಗುತ್ತದೆ. ಆದರೆ, ಹಾಲಿ ಲೇನ್ ಗಳನ್ನು ಬಳಸುವಂತೆ ಸದ್ಯಕ್ಕೆ ಸೂಚಿಸಲಾಗಿದೆ.
ಅನಂತ್ ಕುಮಾರ್ ಮನವಿ
ಮುಖ್ಯವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸಬ್ ಅರ್ಬನ್ ರೈಲು ಅಗತ್ಯವಿದ್ದು, ಹೊರವರ್ತುಲ ರಸ್ತೆಗಳಲ್ಲಿರುವ ಪ್ರಮುಖ ಬಡಾವಣೆಗಳಿಗೂ ನಗರದ ಒಳ ವಲಯಕ್ಕೂ ಸಂಪರ್ಕ ಒದಗಿಸಲು ಇದು ಅವಶ್ಯಕ ಎಂದು ಸಂಸದ ಅನಂತ್ ಕುಮಾರ್ ಅವರು ಮನವಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ ಪ್ರಸ್ತುತ ರಾಮನಗರ ಹಾಗೂ ವೈಟ್ ಫೀಲ್ಡ್ ಮಾರ್ಗದ ಯೋಜನೆಗೆ ಶೇ 80ರಷ್ಟು ಯೋಜನಾ ವೆಚ್ಚವನ್ನು ಭರಿಸುತ್ತಿದೆ.
ಸಬ್ ಅರ್ಬನ್ ರೈಲು ಅಗತ್ಯವಿದೆಯೇ?
ಬೆಂಗಳೂರಿನ ನಗರವ್ಯಾಪ್ತಿಯ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಒದಗಿಸಲು ಮೆಟ್ರೋ ರೈಲಿನ ವಿವಿಧ ಹಂತಗಳಿವೆ. ಆದರೆ, ಬೆಂಗಳೂರು ಸುತ್ತಲಿನ 50 ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿರುವ ಉಪ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಅಗತ್ಯವಿದೆ. ಹೀಗಾಗಿ ಸಬ್ ಅರ್ಬನ್ (ಕಮ್ಯೂಟರ್) ರೈಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ, ಪ್ರಸ್ತುತ ಯೋಜನೆಯಂತೆ ಮಂಡ್ಯ, ತುಮಕೂರಿಗೂ ರೈಲು ಸಂಪರ್ಕ ಸಿಗಲಿದೆ.
ನಾಗರಿಕರಿಂದ ಹೆಚ್ಚಿದ ಒತ್ತಡ ಹಾಗೂ ಅಗತ್ಯ
ವಿಜಯನಗರದಿಂದ ವೈಟ್ ಫೀಲ್ಡ್ ನಿಂದ ಬಿಎಂಟಿಸಿ ಮೂಲಕ ಹೋಗುವುದಕ್ಕಿಂತ ರೈಲಿನಲ್ಲಿ 35 ನಿಮಿಷಗಳ ನಗರ ರೈಲ್ವೆ ನಿಲ್ದಾಣದಿಂದ ವೈಟ್ ಫೀಲ್ಡ್ ಗೆ ಕ್ರಮಿಸಬಹುದು. ಸರಿ ಸುಮಾರು 25,000ಕ್ಕೂ ಅಧಿಕ ಮಂದಿ ಲೋಕಲ್ ರೈಲು ಬಳಕೆದಾರರಂತೆ ಗುರುತಿಸಿಕೊಂಡಿದ್ದಾರೆ. ಈ ವ್ಯವಸ್ಥೆಯಲ್ಲಿ ಸಬ್ ಅರ್ಬನ್ ರೈಲು ಪರಿಚಯಿಸಿದರೆ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ನಾಗರಿಕ ಸಮಿತಿಯ ಮಹೇಶ್ ಎಂ ವಿವರಿಸಿದ್ದಾರೆ.
ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ
ಬೆಂಗಳೂರಿನಲ್ಲಿನ ರೈಲು ನಿಲ್ದಾಣಗಳ ಮೂಲಕ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಒಟ್ಟು 204 ಕಿ.ಮೀ. ಉದ್ದದ 15 ಮಾರ್ಗಗಳು ಇದರಲ್ಲಿ ಬರಲಿವೆ. ಯೋಜನೆಯ ವೆಚ್ಚ 8.5 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.ರಾಜ್ಯ ಭೂ ಸಾರಿಗೆ ನಿರ್ದೇಶನಾಲಯದ ಪ್ರಸ್ತಾವನೆಯಂತೆ ಯೋಜನೆಗೆ ರಾಜ್ಯ ಸರ್ಕಾರ 2013ರಲ್ಲೇ ಅನುಮೋದನೆ ನೀಡಲಾಗಿದೆ.ಆದರೆ, ಯೋಜನೆ ಮಂಜೂರಾತಿ ಮಾಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯ
ಸಬ್ ಅರ್ಬನ್ ರೈಲು ಯೋಜನೆಗೆ ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ. ಇರುವ ನಿಲ್ದಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಲೋಕಲ್ ಟ್ರೈನ್ ಸಂಚಾರ ಆರಂಭವಾದರೆ ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಾಗರಿಕರೊಬ್ಬರು ಹಾಲಿ ಸಂಚರಿಸುತ್ತಿರುವ 32 ಲೋಕಲ್ ಟ್ರೈನ್ ಗಳ ಸಂಖ್ಯೆಯನ್ನು 68ಕ್ಕೇರಿಸಿದರೆ ಸಾಕು. ರೈಲ್ವೆ ಟರ್ಮಿನಲ್ ನಿರ್ಮಾಣ ಸದ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ಯೋಜನೆಗೆ ಚಾಲನೆ ನೀಡಬಹುದು.