ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕಿಳಿಸಿದ ನಾಯಕರ ಪಟ್ಟಿಯನ್ನೇ ನೀಡಿದ್ದೇನೆ; ಸಚಿವ ಸುಧಾಕರ್
ಬೆಂಗಳೂರು, ಸೆ. 26: "ಕಾಂಗ್ರೆಸ್ ಪ್ರಬಲ ಸಮುದಾಯದ ವಿರುದ್ಧ ನಿಂತಿದೆ ಎಂಬುದು ಇತಿಹಾಸದಿಂದಲೇ ತಿಳಿದುಬರುತ್ತದೆ. ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕಿಳಿಸಿದ ನಾಯಕರ ಪಟ್ಟಿಯನ್ನೇ ನಾನು ನೀಡಿದ್ದೇನೆ. ಇದರ ಬಗ್ಗೆ ಕಾಂಗ್ರೆಸ್ ಮೊದಲು ಉತ್ತರ ನೀಡಲಿ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸವಾಲೆಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, "ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಷ್ಟು ನಾನು ಬುದ್ಧಿವಂತನಲ್ಲ. ಆದರೆ, ಇತಿಹಾಸವನ್ನು ನಾನು ಕೂಡ ಅಧ್ಯಯನ ಮಾಡಿದ್ದು, ವಿಚಾರ ಮಾಡಿಯೇ ಮಾತನಾಡುತ್ತೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಮ್ಮು ಕಾಶ್ಮೀರದಲ್ಲಿ ಶಾಂತಿಯುತವಾಗಿ ಚುನಾವಣೆ ಮಾಡಿಸಿದ್ದರು. ಈಶಾನ್ಯ ರಾಜ್ಯಗಳಿಗೆ ಅಂದಿನ ಕಾಲದಲ್ಲೇ ಒಂದೇ ಬಾರಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ಅಂತಹವರನ್ನೇ ಪ್ರಧಾನಿ ಸ್ಥಾನದಿಂದ ಕಾಂಗ್ರೆಸ್ನವರು ಕೆಳಕ್ಕಿಳಿಸಿದರು" ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ 108ಆಂಬ್ಯುಲೆನ್ಸ್ ವತ್ಯಯ: ಪರ್ಯಾಯ ವ್ಯವಸ್ಥೆಗೆ ಕ್ರಮ, ಆತಂಕ ಬೇಡ ಎಂದ: ಸಚಿವ ಸುಧಾಕರ್
"ಆದರೆ, ಕಾಂಗ್ರೆಸ್ ಈವರೆಗೆ ಇದಕ್ಕೆ ಉತ್ತರ ನೀಡಿಲ್ಲ. ಪಿ.ವಿ. ನರಸಿಂಹರಾವ್, ರಾಜಶೇಖರಮೂರ್ತಿ, ಎಸ್.ನಿಜಲಿಂಗಪ್ಪ, ಎಸ್.ಎಂ.ಕೃಷ್ಣ ಮೊದಲಾದ ನಾಯಕರಿಗೆ ಕಾಂಗ್ರೆಸ್ ಏನು ಮಾಡಿದೆ ಎಂಬ ಪಟ್ಟಿಯೇ ಇದೆ. ನಾನು ಹೇಳಿರುವುದಕ್ಕೆ ಕಾಂಗ್ರೆಸ್ ಮೊದಲು ಉತ್ತರ ನೀಡಲಿ" ಎಂದು ಸವಾಲು ಹಾಕಿದ್ದಾರೆ.
ಯಾವುದೇ ಜಾತಿಯನ್ನು ಬಿಜೆಪಿ ಟಾರ್ಗೆಟ್ ಮಾಡಲ್ಲ
"ಬಿಜೆಪಿಯು ಎಲ್ಲರಿಗೂ ಸ್ಥಾನಮಾನ ನೀಡಿದೆ. ಜಗದೀಶ ಶೆಟ್ಟರ್ ಅವರಿಗೂ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಬಸವರಾಜ ಬೊಮ್ಮಾಯಿ ಅವರಿಗೂ ಉತ್ತಮ ಸ್ಥಾನ ನೀಡಲಾಗಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಪ್ರಬಲ ಸಮುದಾಯದ ವಿರುದ್ಧ ನಿಂತಿದೆ ಎಂಬುದು ಇತಿಹಾಸದಿಂದಲೇ ತಿಳಿದುಬರುತ್ತದೆ. ಬಿಜೆಪಿಯಲ್ಲಿ ಜಾತಿ ನೋಡಿ ಮಣೆ ಹಾಕುವುದಿಲ್ಲ. ಯಾವುದೇ ಜಾತಿಯನ್ನು ಟಾರ್ಗೆಟ್ ಕೂಡ ಮಾಡುವುದಿಲ್ಲ" ಎಂದಿದ್ದಾರೆ.
ಕಾಂಗ್ರೆಸ್ ಸದಾ ಪ್ರಬಲ ಸಮುದಾಯದ ವಿರುದ್ಧ ನಿಂತಿದೆ
"ಭ್ರಷ್ಟಾಚಾರಕ್ಕೂ ಜಾತಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸತ್ಯ. ಆದರೆ, ಪ್ರಬಲ ಸಮುದಾಯದ ಸಿಎಂ ಇದ್ದಾಗ, ಅವರನ್ನು ವಿಶೇಷವಾಗಿ ಟಾರ್ಗೆಟ್ ಮಾಡುವುದು ಕಾಂಗ್ರೆಸ್ನ ಸಂಪ್ರದಾಯ ಎಂದು ಹೇಳಿದ್ದೇನೆ. ಕಾಂಗ್ರೆಸ್ ಸದಾ ಪ್ರಬಲ ಸಮುದಾಯದ ವಿರುದ್ಧ ನಿಂತಿದೆ" ಎಂದು ಆರೋಪಿಸಿದ್ದಾರೆ.
"ಯಾವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೇಳಬೇಕು. ಬಸವರಾಜ ಬೊಮ್ಮಾಯಿ ಅವರು ಸಮರ್ಥ ಆಡಳಿತ ನೀಡುತ್ತಿರುವುದರಿಂದಲೇ ತಮಗೆ ಉಳಿಗಾಲ ಇಲ್ಲ ಎಂಬುದು ಕಾಂಗ್ರೆಸ್ಗೆ ಅರ್ಥವಾಗಿದೆ" ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿ ಕಾರಿದ ಸಚಿವ ಡಾ.ಕೆ.ಸುಧಾಕರ್
"ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾದಾಗ ಕೆಲವೇ ಗಂಟೆಗಳಲ್ಲಿ ಸಮಸ್ಯೆ ಸರಿಪಡಿಸಲಾಗಿದೆ. ಇಂತಹ ತ್ವರಿತ ಕಾರ್ಯವನ್ನು ʼತಳ್ಳುವ ಸರ್ಕಾರʼ ಮಾಡುತ್ತದೆಯೇ ಅಥವಾ ʼಸರ್ವಶಕ್ತ ಕ್ರಿಯಾಶೀಲ ಸರ್ಕಾರʼ ಮಾಡುತ್ತದೆಯೇ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರೇ ವಿಚಾರ ಮಾಡಬೇಕು" ಎಂದು ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.
"ಕೆಲವೇ ಗಂಟೆಗಳ ಕಾಲ ಆಂಬ್ಯುಲೆನ್ಸ್ ಸೇವೆಗೆ ಅಡಚಣೆ ಉಂಟಾಗಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆಯಿಂದಲೇ ಸೇವೆ ಪುನರಾರಂಭವಾಗಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಲು ಸುಮಾರು 8 ಲಕ್ಷ ರೂ. ವೆಚ್ಚದ ಮದರ್ಬೋರ್ಡ್ ಖರೀದಿಗೆ ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮ್ಯಾನ್ಯುವಲ್ ಕಾಲ್ಸೆಂಟರ್ಗೂ ಬ್ಯಾಕ್ಅಪ್ ಇರಿಸಲಾಗಿದೆ" ಎಂದು ಮಾಹಿತಿ ನೀಡಿದರು.
ದೇವೇಗೌಡರನ್ನು ನೋಡಿದರೆ ನನಗೆ ಭಕ್ತಿಯ ಭಾವ ಮೂಡಿಬರುತ್ತದೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಸಚಿವ ಡಾ.ಕೆ.ಸುಧಾಕರ್ ಸೋಮವಾರ ಭೇಟಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, "ಹುಟ್ಟು ಹೋರಾಟಗಾರ, ಹಿರಿಯ ಚೇತನ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿ ಮಾತನಾಡಿಸಿದೆ. ಅವರನ್ನು ನೋಡಿದರೆ ನನಗೆ ಭಕ್ತಿಯ ಭಾವ ಮೂಡಿಬರುತ್ತದೆ" ಎಂದಿದ್ದಾರೆ.
"ಮೊಣಕಾಲಿನ ತೊಂದರೆ ಬಿಟ್ಟರೆ, ಅವರು ಬಹಳ ಆರೋಗ್ಯವಂತರಾಗಿದ್ದಾರೆ. ಜೊತೆಗೆ ಅವರ ಮಾನಸಿಕ ಶಕ್ತಿಯೂ ಗಟ್ಟಿಯಾಗಿದೆ. ಅವರಿಗೆ ಉತ್ತಮ ಆರೋಗ್ಯ ದೊರೆತು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಲಿ ಎಂದು ಆಶಿಸುತ್ತೇನೆ. ಮಾಜಿ ಪ್ರಧಾನಿಗಳ ಪೈಕಿ ಸಕ್ರಿಯರಾಗಿ ಜನಸೇವೆಯಲ್ಲಿ ತೊಡಗಿರುವವರೇ ದೇವೇಗೌಡರು. ಆದ್ದರಿಂದಲೇ ಅವರು ಮಹಾಚೇತನ" ಎಂದು ಹೊಗಳಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಂಜೆ ಹಾಗೂ ಬೆಳಗ್ಗೆ ನಾನು ಅವರ ಆರೋಗ್ಯದ ಕುರಿತು ಅಪ್ಡೇಟ್ ಪಡೆಯುತ್ತಿದ್ದೇನೆ. ಅವರು ಬೇಗ ಗುಣಮುಖರಾಗಿ ರಾಜ್ಯದ ಸೇವೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.