ಎಲ್ಲೂ ಹೋಗಲ್ಲ, ನಾವು ಎಲ್ಲೂ ಹೋಗಲ್ಲ, ಕಾಂಗ್ರೆಸ್ಸೆ ನಮಗೆಲ್ಲಾ, ಆಹಾ!
ಬೆಂಗಳೂರು, ಸೆಪ್ಟೆಂಬರ್ 20: ತಮ್ಮನ್ನು ಯಾವ ಬಿಜೆಪಿ ನಾಯಕರೂ ಸಂಪರ್ಕಿಸಿಲ್ಲ. ತಾವು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ಹೇಳಿಕೆ ನೀಡಿರುವ ಅವರು, ಮಾಧ್ಯಮಗಳಲ್ಲಿ ಶಾಸಕರು ಹಾಗೂ ಸಚಿವರು ಮುಂಬೈಗೆ ತೆರಳುತ್ತಿದ್ದಾರೆ ಎಂಬುದಾಗಿ ಬಿತ್ತರಗೊಳ್ಳುತ್ತಿರುವ ವರದಿಗಳು ಸತ್ಯಕ್ಕೆ ದೂರವಾದವು ಎಂದಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ: ಮುಂಬೈನತ್ತ ಬಂಡಾಯ ಶಾಸಕರು?
'ಬಳ್ಳಾರಿ ಜಿಲ್ಲೆಯ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಆನಂದ್ಸಿಂಗ್, ಗಣೇಶ್, ನಾಗೇಂದ್ರ, ತುಕಾರಾಂ ಹೀಗೆ ಯಾರಿಗಾದರೂ ಸಚಿವ ಸ್ಥಾನ ಕೊಡಲಿ. ಯಾರಿಗೆ ಕೊಡಬೇಕೆಂಬುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ಈ ಬಗ್ಗೆ ನಮ್ಮ ತಕರಾರೇನೂ ಇಲ್ಲ. ಏನೇ ಆದರೂ ನಾವು ಪಕ್ಷ ಬಿಟ್ಟು ಹೋಗುವುದಿಲ್ಲ'ಎಂದು ಶಾಸಕ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, 'ನಾನು ಬೆಂಗಳೂರಿನಲ್ಲೇ ಇದ್ದೇನೆ. ಗಣೇಶೋತ್ಸವ ಕಾರ್ಯಕ್ರಮದಲ್ಲಿ ತೆರಳಲು ಇಂದು ಬೆಳಗಾವಿಗೆ ಹೊರಟಿದ್ದೇನೆ.
ಬಿಜೆಪಿಯಿಂದ ಡಿಸಿಎಂ ಆಫರ್, ಜಾರಕಿಹೊಳಿ ಸಿಡಿಸಿದ ಹೊಸ ಬಾಂಬ್!
ನಮ್ಮಲ್ಲಿರುವ ಭಿನ್ನಾಭಿಪ್ರಾಯ ಸರಿ ಹೋಗಿದೆ. ನಾವು ಅಥವಾ ನನ್ನ ಸಹೋದರ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ನಾವ್ಯಾರೂ ಮುಂಬೈಗೆ ಹೋಗಿಲ್ಲ. ಹೋಗುವುದೂ ಇಲ್ಲ'ಎಂದು ಹೇಳಿದ್ದಾರೆ.