ಜಾರ್ಜ್ ಕ್ಷೇತ್ರ: ಆರೇ ತಿಂಗಳಲ್ಲಿ ಪಾರ್ಕ್ ನಿರ್ಮಾಣ ಕಾರ್ಯ ಪೂರ್ಣ
ಬೆಂಗಳೂರು, ಫೆಬ್ರವರಿ 27 : ನಗರದ ಹಲವೆಡೆ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯದಿದ್ದರೂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರ ಕ್ಷೇತ್ರದಲ್ಲಿ ಕೇವಲ ಆರೇ ತಿಂಗಳಿನಲ್ಲಿ ಪಾರ್ಕ್ ನಿರ್ಮಾಣಗೊಂಡು ಅಭಿವೃದ್ಧಿಗೊಂಡಿದೆ.
ಮೂರು ಎಕರೆ ವಿಸ್ತೀರ್ಣದ ಪಾರ್ಕ್ ಇದಾಗಿದ್ದು, ನಗರದ ಕಲ್ಯಾಣನಗರದಲ್ಲಿ ದೊಡ್ಡ ವಿಸ್ತೀರ್ಣದ ಉದ್ಯಾನದವನ್ನು ದಾಖಲೆಯ ಅವಧಿಯಲ್ಲಿ ನಿರ್ಮಿಸಲಾಗಿದೆ. ಬಿಡಿಎಗೆ ಸೇರಿದ ಈ ಜಾಗದಲ್ಲಿ ಪ್ರಾಧಿಕಾರವೇ ಮುತುವರ್ಜಿ ವಹಿಸಿ ಒಂದು ಕೋಟಿ ರೂ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಪಡಿಸಿದೆ. ಸಚಿವ ಜಾರ್ಜ್ ಅವರು ಇದನ್ನು ಉದ್ಘಾಟಿಸಿದ್ದಾರೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ತಮ್ಮ ಕ್ಷೇತ್ರದಲ್ಲಿನ ನಾನಾ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜತೆಗೆ ತ್ವರಿತಗತಿಯಲ್ಲಿ ಲೋಕಾರ್ಪಣೆಗೂ ಸಚಿವರು ಗಮನಹರಿಸಿದ್ದಾರೆ ರಾತ್ರೋ ರಾತ್ರಿ ಉದ್ಘಾಟನೆಗೆ ಸಮಯ ನಿಗದಿ ಮಾಡಿ ಟೇಪ್ ಕಟ್ ಮಾಡಿ ನಾಗರಿಕರು ಅಚ್ಚರಿಗೆ ಒಳಗಾಗುವಂತೆ ಮಾಡಿದ್ದಾರೆ.
ಉದ್ಯಾನದಲ್ಲಿ ಹತ್ತು ಪ್ರತಿಮೆಗಳ ಮೂಲಕ ನೀರಿನ ಉಪಯೋಗ ಹಾಗೂ ಪೋಲು ಬಗ್ಗೆ ತಿಳಿವಳಿಕೆ ಮೂಡಿಸುವ ಯತ್ನ ಮಾಡಲಾಗಿದೆ. ಸಧ್ಯದಲ್ಲೇ ಜಲ ಸಂರಕ್ಷಣೆ ಕುರಿತಾದ ಮಾಹಿತಿ ಫಲಕವನ್ನೂ ಅಳವಡಿಸಲಾಗುತ್ತದೆ.