ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮಾಡಿದ ಸಿಟಿ ರವಿ
ಬೆಂಗಳೂರು, ನವೆಂಬರ್ 17: ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಸಕ್ಕರೆ ಇಲಾಖಾ ಸಚಿವರಾದ ಸಿ.ಟಿ.ರವಿರವರು ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಕನ್ನಡ ಭವನ ನಯನ ರಂಗಮಂದಿರದಲ್ಲಿ ಉದ್ಘಾಟಿಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಯುವ ಬರಹಗಾರರು ಸಮಾಜಮುಖಿಯಾದ ಸಾಹಿತ್ಯ ಸೃಷ್ಠಿಗೆ ಒತ್ತು ನೀಡುವ ಮೂಲಕ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಗುರು ಭಾಗವತದ ಕನ್ನಡ ಅವತರಣಿಕೆ, ವಿಶೇಷ ಡೈರಿ ಲೋಕಾರ್ಪಣೆ
ರಜತ ಮಹೋತ್ಸವದ ಹೊಸ್ತಿಲಲ್ಲಿ ಇರುವ ಕನ್ನಡ ಪುಸ್ತಕ ಪ್ರಾಧಿಕಾರದಿಂದ 2018ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಆಯ್ಕೆಯಾದ 53 ಉದಯೋನ್ಮುಖ ಯುವ ಬರಹಗಾರರು ಬರೆದಿರುವ ಕಥೆ, ಕವನ, ಪ್ರಬಂಧ ಸಂಕಲನ ಇತ್ಯಾದಿ ನಾನಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಹಿರಿಯ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಬಿಡುಗಡೆ ಮಾಡಿ, ಮಾತನಾಡುತ್ತಾ ಪುಸ್ತಕೋದ್ಯಮ ಇಂದು ಕಷ್ಟದ ಸ್ಥಿತಿಯಲ್ಲಿದೆ.
ಓದುಗರ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಅಂತೆಯೇ ಸಾಹಿತ್ಯವನ್ನು ಕೊಂಡಾಡುವವರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ವಿಷಾದಿಸಿದರು. ಸಾಹಿತ್ಯ ಸೃಷ್ಟಿಸುವ ಲೇಖಕ ಅಂರ್ತಮುಖಿಯಾಗದೆ, ಅಧ್ಯಯನ ಮಾಡದೆ, ಬದುಕನ್ನು ಅನುಭವಿಸದೆ ಬರೆಯುವುದು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಮ್.ಎನ್.ನಂದೀಶ್ ಹಂಚೆ ರವರು ಪ್ರಕಾಶಕರು, ಬೆರಳಚ್ಚುಗಾರರು ಮತ್ತು ಕರಡಚ್ಚು ತಿದ್ದುವವರಿಗೂ ಸಹ ಸರ್ಕಾರ ಮಾಸಾಶನ ಮಂಜೂರು ಮಾಡಬೇಕು. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರಾಧಿಕಾರದ ಪುಸ್ತಕಗಳನ್ನು ಕೊಂಡುಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ಎಲ್ಲಾ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಾಗಿ ಒಂದು ಮಳಿಗೆಯನ್ನು ಕಾಯ್ದಿರಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ಗ್ರಂಥಾಲಯಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಬಿಡುಗಡೆಗೊಂಡ ಎಲ್ಲ ಲೇಖಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಸಾಹಿತಿ ಚಿದಾನಂದ ಸಾಲಿ, ಪ್ರಾಧಿಕಾರದ ಸದಸ್ಯ ಪ್ರಕಾಶ್ ಕಂಬತ್ತಳ್ಳಿ, ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಸಹಾಯಕ ನಿರ್ದೇಶಕಿ ಸೌಭಾಗ್ಯ ಉಪಸ್ಥಿತರಿದ್ದರು.