"ಡಿ.ಕೆ ಶಿವಕುಮಾರ್ಗೆ ಬಿಜೆಪಿ ಪಕ್ಷದ ಉಸಾಬರಿ ಏಕೆ?''
ಬೆಂಗಳೂರು, ಜೂನ್ 7: ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಸ್ವಪಕ್ಷದಲ್ಲೇ ಭಿನ್ನಮತ ಭುಗಿಲೆದ್ದಿದ್ದಾಯಿತು, ಅದಕ್ಕೆ ಖುದ್ದು ಸಿಎಂ ಬಿ.ಎಸ್ ಯಡಿಯೂರಪ್ಪನವರೇ ಸ್ಪಷ್ಟೀಕರಣ ನೀಡಿದ್ದು ಆಯಿತು.
ಭಾನುವಾರ ಮಾಧ್ಯಮಗಳೊಂದಿಗೆ ಸಿಎಂ ಯಡಿಯೂರಪ್ಪ ಮಾತನಾಡುವ ವೇಳೆ, ""ಬಿಜೆಪಿ ಹೈಕಮಾಂಡ್ ಹಾಗೂ ವರಿಷ್ಠರ ವಿಶ್ವಾಸ ಇರುವವರಿಗೆ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತೇನೆ'' ಎಂದು ಹೇಳುವ ಮೂಲಕ ರಾಜಕೀಯ ವಿರೋಧಿಗಳಿಗೆ ಖಾರಾಬಾತ್, ಬಿಜೆಪಿ ವರಿಷ್ಠರಿಗೆ ಕೇಸರಿಬಾತ್ ನೀಡಿದ್ದರು.
ಬಿಜೆಪಿ ನೋಂದಣಿ ಮಾಡಿಸುವುದು ಸೂಕ್ತ
ಆದರೂ, ಸಿಎಂ ಬದಲಾವಣೆ ವಿಚಾರ ಹೇಳಿಕೆಗಳು ರಾಜ್ಯದಲ್ಲಿ ಅಲ್ಲಲ್ಲಿ ಕೇಳಿಬರುತ್ತಲೇ ಇವೆ. ಸೋಮವಾರ ಬೆಂಗಳೂರಿನಲ್ಲಿ ಸಚಿವ ಸಿ.ಪಿ ಯೋಗೇಶ್ವರ್ ಮಹತ್ವದ ಹೇಳಿಕೆ ನೀಡುವುದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರಿಗೂ ಟಾಂಗ್ ನೀಡಿದ್ದಾರೆ.
ಸಚಿವ ಸಿ.ಪಿ ಯೋಗೇಶ್ವರ್ ಮಾತನಾಡಿ, ""ನಮ್ಮ ಪಕ್ಷದ ಯಾವುದೇ ಶಾಸಕರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಮ್ಮ ಭಾರತೀಯ ಜನತಾ ಪಕ್ಷದ ಸಾಮಾನ್ಯ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳುವುದು ಸೂಕ್ತವೆಂದು'' ಸವಾಲೆಸಿದಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರಿದ್ದರು
ಡಿ.ಕೆ ಶಿವಕುಮಾರ್ ನನ್ನ ರಾಜಕೀಯ ವಿರೋಧಿ, ಸಿಡಿ ಸಂಸ್ಕೃತಿ ಅವರಿಗೆ ಚೆನ್ನಾಗಿ ಗೊತ್ತು. ನಮ್ಮ ರಾಮನಗರ ಜಿಲ್ಲೆಯ ಎಲ್.ಎನ್ ಮೂರ್ತಿ ಎನ್ನುವವರು, ಡಿಕೆಶಿ ಯಾರು, ಯಾರಿಗೆ ಸಿಡಿ ತೋರಿಸುತ್ತಿದ್ದರು ಎಂದು ಬರೆದಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರು ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಡಿಕೆಶಿಯವರತ್ತ ಬೆರಳು ತೋರಿಸಿದರು.
ಡಿಕೆಶಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ
ಮಾತು ಮುಂದುವರೆಸಿದ ಸಚಿವ ಸಿ.ಪಿ ಯೋಗೇಶ್ವರ್, ನಾನು ಜೆಎಸ್ಎಸ್ ಮಠಕ್ಕೆ ಹಾಗೂ ಆದಿ ಚುಂಚನಗಿರಿ ಮಠಕ್ಕೆ ಹೋಗುತ್ತಲೇ ಇರುತ್ತೇನೆ. ನಾನು ಹೋಗಿ ಬಂದ ತಕ್ಷಣ ಅವರು ಹೋಗುತ್ತಾರೆ, ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಡಿಕೆಶಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದರು.
ಸರ್ಕಾರ ರಚನೆಯಾಗುವುದಕ್ಕೆ ನನ್ನದೂ ಅಳಿಲು ಸೇವೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೆ ನನ್ನದೂ ಅಳಿಲು ಸೇವೆ ಇದೆ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ಅವರ ಸಖ್ಯ ಕಿತ್ತುಹಾಕಿ ಬಿಜೆಪಿ ಸರ್ಕಾರ ತಂದಿದ್ದೇವೆ. ನಮ್ಮ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇನ್ನು ಎರಡು ವರ್ಷ ಮುಂದುವರಿಯಬೇಕು ಎಂಬುದು ನನ್ನ ಇಚ್ಛೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ನನ್ನ ನೋವನ್ನು ಎಲ್ಲಿ ಹೇಳಿಕೊಳ್ಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಸಚಿವ ಆರ್.ಅಶೋಕ್ ಸೇರಿದಂತೆ ಎಲ್ಲರೂ ನನ್ನ ಸ್ನೇಹಿತರು, ಅವರು ಏನು ಬೇಕಾದರೂ ಹೇಳಬಹುದು. ಆದರೆ, ಡಿ.ಕೆ ಶಿವಕುಮಾರ್ಗೆ ಏಕೆ ನಮ್ಮ ಪಕ್ಷದ ಉಸಾಬರಿ ಬೇಕು? ಎಂದು ಖಾರವಾಗಿ ಪ್ರಶ್ನಿಸಿದರು.