ಆರು ಸಚಿವರು ಕೋರ್ಟ್ ಮೊರೆ: ಸಚಿವ ಸಿ.ಪಿ. ಯೋಗೇಶ್ವರ್ ಸ್ಫೋಟಕ ಹೇಳಿಕೆ!
ಬೆಂಗಳೂರು, ಮಾ. 06: ರಮೇಶ್ ಜಾರಕಿಹೊಳಿ 'ಸಿಡಿ' ಪುರಾಣ ಬಿಜೆಪಿಯಲ್ಲಿ ಮತ್ತೊಂದು ಹಂತಕ್ಕೆ ಬಂದು ನಿಂತಿದೆ. ಅವರೊಬ್ಬರೇ 'ಸಿಡಿ' ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ಮೀರಿ ಸಿಎಂ ಯಡಿಯೂರಪ್ಪ ಸಂಪುಟದ ಅರ್ಧಕ್ಕೂ ಹೆಚ್ಚು ಸಚಿವರು ಇದೀಗ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಾರೆ.
ಈ ಬೆಳವಣಿಗೆಯಿಂದ ಇದೀಗ ಬಿಜೆಪಿ ಹೈಕಮಾಂಡ್ ಕೂಡ ಮುಜುಗುರಕ್ಕೀಡಾಗಿದೆ. ಹೀಗಾಗಿ ಕೋರ್ಟ್ಗೆ ಹೋಗುತ್ತಿರುವ ಸಚಿವರಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಪರೋಕ್ಷ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಹೀಗೆ ಕೋರ್ಟ್ಗೆ ಹೋಗುವುದು ಅವರ ವೈಯಕ್ತಿಕ ವಿಚಾರ. ಆದರೆ ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ಕೋರ್ಟ್ಗೆ ಹೋಗಿ ಸಮಸ್ಯೆಯನ್ನು ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ.
ಅದರ ಜೊತೆಗೆ ಹೊಸ ಬೆಳವಣಿಗೆಗಳು ಬಿಜೆಪಿಯಲ್ಲಿ ಆಗುತ್ತಿವೆ. 'ಸಿಡಿ' ಸ್ಫೋಟದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಸಿ.ಪಿ. ಯೋಗೇಶ್ವರ್ ಅವರು ಮತ್ತೊಂದು ಸ್ಪೋಟಕ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಕಾಡುತ್ತಿದೆ ಮುಂಬೈ ಹೋಟೆಲ್ ಗುಮ್ಮ
ಮೈತ್ರಿ ಸರ್ಕಾರದ ಪತನದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರ ಪಿಎ (ಈಗ ರಾಜಕೀಯ ಕಾರ್ಯದರ್ಶಿ) ಹಾಗೂ ರಾಜ್ಯದ ಮಾಜಿ ಸಚಿವ(ಈಗ ಸಚಿವರು)ರು ರೆಬೆಲ್ ಶಾಸಕರನ್ನು ಮುಂಬೈ ಪಂಚತಾರಾ ಹೋಟೆಲ್ಗೆ ಕರೆದೊಯ್ದಿದ್ದರು. ಆಗ ಸುಮಾರು 15 ರಿಂದ 16 ದಿನಗಳ ಕಾಲ ಮುಂಬೈನಲ್ಲಿ ಈಗ ಕೋರ್ಟ್ ಮೊರೆ ಹೋಗಿರುವವರು ವಾಸ್ತವ್ಯ ಮಾಡಿದ್ದರು. ಎಲ್ಲರೂ ಒಮ್ಮೆಲೆ ಕೋರ್ಟ್ ಮೊರೆ ಹೋಗಿರುವುದು ಇಡೀ ರಾಜ್ಯದ ಜನರಲ್ಲಿ ಸಂಶಯ ಮೂಡಿಸಿದೆ. ಹೀಗಾಗಿ ಮುಂಬೈ ಹೋಟೆಲ್ ಗುಮ್ಮೆ ಏನಾದ್ರು ಈ ಸಚಿವರನ್ನು ಕಾಡುತ್ತಿದೆಯಾ ಎಂಬ ವಿಶ್ಲೇಷಣೆಗಳು ನಡೆದಿವೆ.
ಸಂಧಾನಕ್ಕೆ ಹೋಗಿದ್ದವರಿಗೆ ಇರಲಿಲ್ಲ ಎಂಟ್ರಿ!
ಮುಂಬೈ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದವನ್ನು ಸಂಧಾನ ಮಾಡಿ ಕರೆತರಲು ತೆರಳಿದ್ದ ಡಿ.ಕೆ. ಶಿವಕುಮಾರ್, ಶಿವಲಿಂಗೇಗೌಡ, ಜಿ.ಟಿ. ದೇವೇಗೌಡ ಅವರನ್ನು ಕೂಡ ಹೋಟೆಲ್ ಒಳಗೆ ಬಿಡದಂತೆ ತಡೆಯಲಾಗಿತ್ತು. ಹೀಗಾಗಿ ಅಷ್ಟೊಂದು ಭದ್ರತೆಯಲ್ಲಿದ್ದವರಿಗೆ ಏಕಾಏಕಿ ಈಗ ಅಭದ್ರತೆ ಕಾಡುತ್ತಿರುವುದು ಯಾಕೆ? ಅವರ ಅಭದ್ರತೆಗೆ ಕಾರಣಯಾರು? ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
'ಸಿಡಿ' ಹಿಂದಿರುವವರು ಇವರೇ!
ಮಾಜಿ ಸಚಿವ ರಮೇಶ್ ಜಾರಕಿಹೋಳಿ ವಿರುದ್ಧ ಸಿಡಿ ಪ್ರಕರಣದ ಹಿಂದೆ ಕನಕಪುರ ಮತ್ತು ಬೆಳಗಾವಿ ಕಡೆಯವರು ಇದ್ದಾರೆ ಎಂದು ಸಿಡಿ ಬಿಡುಗಡೆ ಕುರಿತು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕನಕಪುರ ಹಾಗೂ ಬೆಳಗಾವಿಯವರೇ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಬರಲು ಕಾರಣ. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಡ್ಯಂತ್ರ ಇದೆ. ಮುಂದಿನ ದಿನಗಳಲ್ಲಿ ಅವರು ಅನುಭವಿಸ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅವರನ್ನೇ ಕೇಳಿ ಯಾಕೆ ಹೋಗಿದ್ದಾರೆಂದು!
ಆದರೆ, ಆರು ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಅವರು ಕೋರ್ಟ್ಗೆ ಹೋಗಿದ್ಯಾಕೆ ಎಂದು ನನಗೇ ಗೊತ್ತಿಲ್ಲ. ನೀವು ಆ ಸಚಿವರನ್ನೇ ನೀವು ಕೇಳಬೇಕು, ಈ ವಿಚಾರ ನಂಗ್ಯಾಕೇ ಕೇಳ್ತೀರಾ? ಅವರ ವೈಯಕ್ತಿಕ ವಿಷಯಗಳ ರಕ್ಷಣೆಗೆ ಕೋರ್ಟ್ಗೆ ಮೊರೆ ಹೊಗಿದ್ದಾರೆ. ಆ ಬಗ್ಗೆ ಯಾರು ಕೋರ್ಟ್ ಮೊರೆ ಹೋಗಿದ್ದಾರೋ ಅವರನ್ನೇ ಕೇಳಿ. ಈ ವಿವಾದದಲ್ಲಿ ನನ್ನನ್ನು ಎಳೆಯಬೇಡಿ ಎಂದು ಬೆಂಗಳೂರಿನ ಅರಣ್ಯಭವನದಲ್ಲಿ ಸಿ.ಪಿ. ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.