ಓದಿನ ಜತೆಗೆ ಉದ್ಯೋಗ ಕೌಶಲ್ಯ ಬೆಳೆಸಿಕೊಳ್ಳಿ : ಡಾ. ಸಿ.ಎನ್. ಅಶ್ವತ್ಥ್ ನಾರಾಯಣ
ಬೆಂಗಳೂರು ಸೆ. 14: ನಗರದ ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಗೆ ಸೇರಿದ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕ್ಷೇತ್ರದ ಶಾಸಕ, ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಸನ್ಮಾನಿಸಿದರು.
ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಲ್ಲೇಶ್ವರಂನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅಮಿತ್ ಪ್ರಕಾಶ್, ಖುಷಿ ಕುಮಾರಿ, ಚಂದನ, ಅಕ್ಷತಾ, ಚೇತನ್ ವಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ವಿದ್ಯಾರ್ಥಿಗಳ ಮುಂದಿನ ವ್ಯಾಸಂಗ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಂದಿನ ದಿನಗಳಲ್ಲಿ ನಮ್ಮ ದೇಶ ಜ್ಞಾನಾಧಾರಿತವಾದ ಸಮಾಜವಾಗಲಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಉದ್ಯೋಗ ಆಧಾರಿತ ಕೌಶಲ್ಯ ಕೋರ್ಸ್ ಗಳಿಗೆ ಆದ್ಯತೆ ನೀಡಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದ್ದು, ದೇಶದಲ್ಲಿ ಕರ್ನಾಟಕ ಪ್ರಥಮವಾಗಿ ಜಾರಿ ಮಾಡುತ್ತಿದೆ. ವಿದ್ಯಾರ್ಥಿಗಳು ಕೇವಲ ಪುಸ್ತಕ ಓದಿಗೆ ಸೀಮಿತವಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕೌಶಲ್ಯ ಆಧಾರಿತ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅಶ್ವತ್ಥ್ ನಾರಾಯಣ ಕಿವಿಮಾತು ಹೇಳಿದರು.
ಮಲ್ಲೇಶ್ವರಂ ವಿಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿ ಕೀರ್ತಿ ತಂದಿದ್ದಾರೆ. ಅಂಕ ಗಳಿಸುವುದೇ ಓದಿನ ಉದ್ದೇಶವಾಗಬಾರದು. ಜ್ಞಾನ ಸಂಪಾದನೆ ಮಾಡಬೇಕು. ಮುಂದಿನ ದಿನಗಳಲ್ಲಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಲಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸಜ್ಜುಗೊಳ್ಳಬೇಕು. ಜ್ಞಾನದ ಜತೆಗೆ ಉದ್ಯೋಗ ಕೌಶಲ್ಯವನ್ನು ಕೂಡ ಬೆಳಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ನುಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಜಗ್ಗೇಶ, ಬಿಇಒ ಉಮಾದೇವಿ ಸೇರಿದಂತೆ ಇತರರು ಇದ್ದರು.
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಡಿ ಗ್ರೂಫ್ ನೌಕರರಿಗೆ ಕಿಟ್ ವಿತರಣೆ:
ಆಹಾರ ಕಿಟ್ ವಿತರಣೆ: ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸದಾ ಕಾಲ ಜೀವವನ್ನು ಒತ್ತೆ ಇಟ್ಟೇ ಕೆಲಸ ಮಾಡುತ್ತಾರೆ. ಒಂದಿಲ್ಲೊಂದು ಸೋಂಕು-ಕಾಯಿಲೆಗಳ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಾರೆ. ಅದರಲ್ಲೂ ಗ್ರೂಪ್ ಡಿ ಸಿಬ್ಬಂದಿ ಹೆಚ್ಚು ಅಪಾಯದಲ್ಲಿ ಕೆಲಸ ಮಾಡುತ್ತಾರೆಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಶನಿವಾರ ಆಕ್ಸಾ ಹಾಗೂ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ವತಿಯಿಂದ ಗ್ರೂಪ್ ಡಿ ಸಿಬ್ಬಂದಿಗೆ ಆಹಾರ್ ಕಿಟ್ ಗಳನ್ನು ವಿತರಣೆ ಮಾಡಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ಮಾಡುವ, ರೋಗಿಗಳ ಹಾಸಿಗೆಗಳ ಬಟ್ಟೆಗಳನ್ನು ಬದಲಿಸುವ, ನೆಲ ಗುಡಿಸುವ, ಒರೆಸುವ ಸಿಬ್ಬಂದಿಯ ಬಗ್ಗೆ ಎಲ್ಲರೂ ಗೌರವಭಾವದಿಂದ ವರ್ತಿಸಬೇಕು. ಅವರ ಕರ್ತವ್ಯಪ್ರಜ್ಞೆಯಿಂದಲೇ ಇಡೀ ಆಸ್ಪತ್ರೆ ಸ್ವಚ್ಛವಾಗಿರುತ್ತದೆ ಎಂದು ಡಾ. ಸಿ. ಎನ್. ಅಶ್ವತ್ ನಾರಾಯಣ ಸಲಹೆ ನೀಡಿದರು.
ಸರಕಾರವೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ವೈದ್ಯರು, ನರ್ಸ್ ಗಳು, ಅರೆ ವೈದ್ಯ ಸಿಬ್ಬಂದಿ, ಗ್ರೂಪ್ ಡಿ ನೌಕರರ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ. ಭತ್ಯಗಳನ್ನೂ ಹೆಚ್ಚಿಸಲಾಗಿದೆ. ಕೋವಿಡ್ ವಾರಿಯರ್ ಗಳಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಇವರೆಲ್ಲರಿಗೂ ಸರಕಾರ ಬೆನ್ನೆಲುಬಾಗಿ ನಿಂತಿದೆ ಎಂದರು. ಒಟ್ಟು 130 ಸಿಬ್ಬಂದಿ ಕಿಟ್ಗಳನ್ನು ವಿತರಣೆ ಮಾಡಲಾಯಿತು. ಆಕ್ಸಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶ್ರೀಕೃಷ್ಣ, ರಾಜ್ಯ ಸರಕಾರದ ಸಿಎಸ್ ಆರ್ ಸಂಯೋಜಕ ಕೆ.ವಿ. ಮಹೇಶ್, ಕೆ.ಸಿ ಜನರಲ್ ಆಸ್ಪತ್ರೆಯ ಅಧೀಕ್ಷಕ ಡಾ.ವೆಂಕಟೇಶಯ್ಯ, ಹಿರಿಯ ವೈದ್ಯರು, ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.