ಅಪರೂಪದ ಮರಗಳ ಕುರಿತು ಆಸಕ್ತಿ ಇದ್ದರೆ ಲಾಲ್ ಬಾಗ್ಗೆ ಬನ್ನಿ!
ಬೆಂಗಳೂರು, ಮೇ 29: ಲಾಲ್ಬಾಗ್ನಲ್ಲಿ ಪುಟ್ಟ ಅರಣ್ಯ ಸೃಷ್ಟಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಈ ಮರಗಳಲ್ಲಿದ್ದ ಪಕ್ಷಿಗಳು ಆಶ್ರಯ ಸಿಗದೆ ಊರನ್ನೇ ಬಿಟ್ಟು ವಲಸೆ ಹೋಗಿವೆ. ಇವುಗಳನ್ನು ಮತ್ತೆ ನಗರಗಳತ್ತ ಕರೆ ತರಲು ಚಿಂತನೆ ನಡೆಸಿದೆ.
ಲಾಲ್ಬಾಗ್ಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೂತೋಟದ ನಡುವೆ ಅರಣ್ಯದಲ್ಲಿ ಸಂಚರಿಸುವ ಅನುಭವವನ್ನು ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಕಾಡಿನಲ್ಲಿ ಬೆಳೆಯುವ ಅಪರೂಪದ ಮರಗಳನ್ನು ನಗರವಾಸಿಗಳಿಗೆ ಪರಿಚಯಿಸಲು ಮುಂದಾಗಿದೆ. ಇದಕ್ಕಾಗಿ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಅಪರೂಪದ ಸಸಿಗಳು ಹಾಗೂ ಕಾಡಿನಲ್ಲಿ ಬೆಳೆಯುವ ಹಣ್ಣಿನ ಮರಗಳಸಸಿಗಳನ್ನು ಸಂಗ್ರಹಿಸಲಾಗಿದ್ದು, ಜೂ.10ರಿಂದ ನೆಡುವ ಕಾರ್ಯ ಆರಂಭವಾಗಲಿದೆ.
ಅಳಿವಿನಂಚಿನಲ್ಲಿರುವ ಅಪರೂಪದ ಸಸಿಗಳನ್ನು ಲಾಲ್ಬಾಗ್ನಲ್ಲಿ ನೆಡಲಾಗುತ್ತಿದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಬಳಕೆ ಮಾಡಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಅಲ್ಲದೆ, ಅವುಗಳ ಸಂತತಿಯನ್ನು ಉಳಿಸಿ ಬೆಳೆಸುವ ಮೂಲ ಕೇಂದ್ರವನ್ನಾಗಿಸಲಾಗುತ್ತಿದೆ. ಜತೆಗೆ ಅತ್ಯಂತ ಬೆಲೆ ಬಾಳುವ ಸಸಿಗಳ ಬೀಜೋತ್ಪಾದನೆಯ ಸಂಗ್ರಹ ಕೇಂದ್ರವನ್ನು ತೆರೆಯಲಾಗುತ್ತಿದೆ. ಅಗತ್ಯವಿರುವ ರೈತರಿಗೆ ವಿತರಣೆಗೂ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
ಲಾಲ್ಬಾಗ್ಗೆ ಇನ್ನುಮುಂದೆ ಪರ್ಫ್ಯೂಮ್ ಹಾಕಿಕೊಂಡು ಹೋಗುವಂತಿಲ್ಲ!
200 ಜಾತಿಯ ತಿಳಿಗಳ ಸಂಗ್ರಹ: ಪಶ್ಚಿಮಘಟ್ಟಗಳ ವ್ಯಾಪ್ತಿಯ ಹೊನ್ನಾವರ, ಕಾರವಾರ, ಕೊಡಗು, ಚಿಕ್ಕಮಗಳೂರು, ಬಿಳಿಗಿರಿ ರಂಗನಬೆಟ್ಟ, ದಾಂಡೇಲಿ ಹಾಗೂ ಹಳಿಯಾಳ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಗಿಡಗಳ ತಳಿಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಗಿಡ ನೆಡುವ ಕಾರ್ಯ ಆರಂಭವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.