ಜಲ್ಲಿ ಕ್ರಷರ್ಗಳಿಗೆ ಕೆಂಪು ಹಾಸು: ಹೊಟ್ಟೆಪಾಡಿಗೆ ಕಲ್ಲು ಕುಡುಕುತ್ತಿದ್ದವರಿಗೆ ಗೇಟ್ಪಾಸ್!
ಬೆಂಗಳೂರು, ಜು. 19: ಹೊಟ್ಟೆಪಾಡಿಗಾಗಿ ಸಾಂಪ್ರದಾಯಿಕ ಕಲ್ಲು ಕುಟುಕುವ ಕೆಲಸ ಮಾಡುತ್ತಿರುವ ಬೋವಿ ಸಮುದಾಯದ 50 ಕುಟುಂಬುಗಳನ್ನು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಒಕ್ಕಲೆಬ್ಬಿಸಿದ್ದಾರೆ. ಖಾಲಿಯಾದ ಜಾಗವನ್ನು ಜಲ್ಲಿ ಕ್ರಷರ್ ದಣಿಗಳಿಗೆ ಧಾರೆ ಎರೆದು ಕೊಟ್ಟಿರುವ ಆರೋಪ ಕೇಳಿ ಬಂದಿದೆ.
ಜಲ್ಲಿ ಕ್ರಷರ್ ಮಾಲೀಕರ ಪ್ರಭಾವಕ್ಕೆ ಒಳಗಾಗಿ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ದುರುದ್ದೇಶ ಪೂರ್ವಕವಾಗಿ ನಮ್ಮನ್ನು ಖಾಲಿ ಮಾಡಿಸಲಾಗುತ್ತಿದೆ. ದಶಕಗಳಿಂದ ಜೀವನೋಪಾಯಕ್ಕಾಗಿ ಕಲ್ಲು ಕುಟುಕುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಜಲ್ಲಿ ಕ್ರಷರ್ ಮಾಲೀಕರ ಅಮಿಷೆಗಳಿಗೆ ಆಸೆ ಪಟ್ಟು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಸುಮಾರು ಐವತ್ತು ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಲು ಕುಟುಕರ ಭೋವಿ ಸಹಕಾರ ಸಂಘದ ಕಾರ್ಯದರ್ಶಿ ಮಂಜುನಾಥ್ ಅರೋಪಿಸಿದ್ದಾರೆ.
ರಾಜ್ಯದಲ್ಲಿ ಜಲ್ಲಿ ಕ್ರಷರ್ ಗಳು ಪರಿಸರ ನಿಯಮ ಗಾಳಿಗೆ ತೂರಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದರೂ ಗಣಿ ಅಧಿಕಾರಿಗಳು ಚಕಾರ ಎತ್ತುವುದಿಲ್ಲ. ಜೀವನೋಪಾಯಕ್ಕಾಗಿ ದಿನಕ್ಕೆ ಹತ್ತು ಸೈಜು ಕಲ್ಲು ತಯಾರಿಸಿ ಮಾರಾಟ ಮಾಡಿ ಬದುಕು ನಡೆಸುವ ಕಲ್ಲು ಕುಟುಕರನ್ನು ಒಕ್ಕಲೆಬ್ಬಿಸಿರುವುದು ಗಣಿ ಇಲಾಖೆ ಅಧಿಕಾರಿಗಳ ಕರ್ತವ್ಯ ನಿಷ್ಠೆಗೆ ಹಿಡಿದ ಕನ್ನಡಿಯಂತಿದೆ.
ಬೋವಿ ಸಮುದಾಯದ ಬದುಕಿಗೆ ಕೊಳ್ಳಿ ಇಟ್ಟ ಭೂ ವಿಜ್ಞಾನ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಂದಾಣ ಹೊಬಳಿಯ ಮೀಸಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 75ರಲ್ಲಿರುವ ಸುಮಾರು 28 ಕ್ಕಿಂತಲೂ ಹೆಚ್ಚು ಎಕರೆ ಸರ್ಕಾರಿ ಕಲ್ಲು ಬಂಡೆಯಿದೆ. ದಶಕಗಳಿಂದಲೂ ಮೀಸಗಾನಹಳ್ಳಿ ಸುತ್ತಮುತ್ತಲಿನ ಭೋವಿ ಸಮುದಾಯದ ಜನ ಕಲ್ಲು ಕುಟುಕು ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡು ಬರುತ್ತಿದ್ದಾರೆ.
ಜೀವನೋಪಾಯಕ್ಕಾಗಿ ಸಾಂಪ್ರದಾಯಿಕ ಪದ್ಧತಿಯಲ್ಲಿ (ಯಾವುದೇ ಸ್ಫೋಟಕ ಬಳಸದೇ ಬೆಂಕಿ ಹಾಕಿ ಕಲ್ಲು ತೆಗೆಯುವುದು ) ಕಲ್ಲು ಕುಟುಕುವ ಕೆಲಸ ಮಾಡುವರು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯುವ ಅಗತ್ಯವಿಲ್ಲ. ಪರವಾನಗಿ ಪಡೆಯುವ ಬಗ್ಗೆ ಸರ್ಕಾರ ಈವರೆಗೂ ಯಾವುದೇ ಆದೇಶ ಕೂಡ ಮಾಡಿಲ್ಲ. ಹೀಗಾಗಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಮೀಸಗಾನಹಳ್ಳಿಯ ಬಂಡೆಯಲ್ಲಿ ಕಲ್ಲು ಕುಟುಕುವ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಾಂಪ್ರದಾಯಿಕ ಕಲ್ಲು ಕುಟುಕರ ಮೇಲೆ ದಾಳಿ ಮಾಡಿ ಖಾಲಿ ಮಾಡಿಸಿದ್ದಾರೆ. ಕಲ್ಲು ಕುಟುಕುವ ಕೆಲಸ ಮಾಡಿದ್ರೆ ಕೇಸು ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಹೆದರಿಸಿದ್ದಾರೆ. ಮೂರು ದಿನದ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಹಾರೆ ಸೆನಿಕೆ ಉಪಕರಣಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಮೂರು ದಿನದಿಂದ ಕೆಲಸ ಮಾಡದೇ ಮನೆಯಲ್ಲಿದ್ದೇವೆ ಎಂದು ಕಲ್ಲು ಕುಟುಕ ಕೆಲಸ ಮಾಡುವ ವೆಂಕಟೇಶ್ ತಮ್ಮ ನೋವು ತೋಡಿಕೊಂಡರು.
ಸಾಂಪ್ರದಾಯಕ ಕಲ್ಲು ಕುಟುಕರಿಗೆ ಗೇಟ್ ಪಾಸ್:
ಸಾಂಪ್ರದಾಯಿಕ ಕಲ್ಲು ಕುಟುಕರನ್ನು ಖಾಲಿ ಮಾಡಿಸಿದ್ದಾರೆ. ಅದೇ ಜಾಗವನ್ನು ಲೀಸ್ ಆಧಾರದ ಮೇಲೆ ಏಳು ಮಂದಿಗೆ ಮಂಜೂರು ಮಾಡಿದ್ದಾರೆ. ಆಂಜನೇಯ ಎಂಟರ್ ಪ್ರೈಸಸ್ ವತಿಯಿಂದ ನಿಯಮ ಉಲ್ಲಂಘನೆ ಮಾಡಿ 30 ಅಡಿ ಆಳಕ್ಕೆ ಕಲ್ಲು ಕೊರೆದು ಪ್ರಪಾತ ಸೃಷ್ಟಿಸಿದ್ದಾರೆ. ಅವರನ್ನು ಯಾವ ಗಣಿ ಅಧಿಕಾರಿಯೂ ಪ್ರಶ್ನೆ ಮಾಡಿಲ್ಲ. ಮುನೇಗೌಡ, ಶ್ರೀನಿವಾಸ ಎಂಬುವರಿಗೆ ಹತ್ತು ಎಕರೆಗಿಂತಲೂ ಹೆಚ್ಚು ಎಕರೆ ಲೀಸ್ ಆಧಾರದ ಮೇಲೆ ಮಂಜೂರು ಮಾಡಿದ್ದಾರೆ. ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಈ ಬಗ್ಗೆ ಸಾಕಷ್ಟು ಮನವಿ ನೀಡಿದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಕಲ್ಲು ಕುಟುಕ ಸಮುದಾಯ ತಮ್ಮ ಅಳಲು ತೋಡಿಕೊಂಡಿದೆ.
ಕಲ್ಲು ಗಣಿಗಾರಿಕೆ ಲೀಸ್ಗಳಿವೆಯಂತೆ!
"ಮೀಸಗಾನಹಳ್ಳಿಯ ಕಲ್ಲು ಬಂಡೆಯ ಗಣಿ ಬಗ್ಗೆ ಈಗಾಗಲೇ ಹಲವರು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಲಯದ ನಿರ್ದೇಶನ ಹಿನ್ನೆಲೆಯಲ್ಲಿ ಮೀಸಗಾನಹಳ್ಳಿಯ ಸರ್ಕಾರಿ ಕಲ್ಲು ಬಂಡೆ ಬಗ್ಗೆ ಕಂದಾಯ ಇಲಾಖೆ ಅರಣ್ಯ ಇಲಾಖೆ ಜಂಟಿ ಸರ್ವೆ ದಿನಾಂಕ ನಿಗದಿಯಾಗಿದೆ. ಕೆಲವರಿಗೆ ಕಲ್ಲು ಕ್ರಷರ್ ಗೆ ಜಮೀನು ಲೀಸ್ ಕೊಡಲಾಗಿದೆ. ಐದು ವರ್ಷದ ಬಳಿಕ ಅವರು ಲೀಸ್ ನವೀಕರಣ ಮಾಡಿಲ್ಲ. ಈಗ ಮಾಡಿದ್ದಲ್ಲಿ ಅವರನ್ನು ಪರಿಗಣಿಸಿ ಉಳಿದ ಜಮೀನನ್ನು ಸಾಂಪ್ರದಾಯಕ ಕಲ್ಲು ಕುಟುಕರಿಗೆ ನೀಡಲು ಕ್ರಮ ಜರುಗಿಸಲಾಗುವುದು," ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಲತಾ ಕುಲಕರ್ಣಿ ಅವರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಕೋರ್ಟ್ ಮೊರೆ:
"ದಶಕಗಳಿಂದ ಜೀವನೋಪಾಯಕ್ಕಾಗಿ ಕಲ್ಲು ಕುಟಕುವ ಕೆಲಸ ಮಾಡುತ್ತಿರುವ ಭೋವಿ ಸಮುದಾಯದ ಜನ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಕುರಿತು ತೀರ್ಪು ನೀಡಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಪೀಠ, ಅರ್ಜಿದಾರರ ಮನವಿ ಆಲಿಸಿ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹೈಕೋರ್ಟ್ ಅದೇಶದ ನಡುವೆಯೂ ಅಲ್ಲಿ ಕೆಲಸ ಮಾಡುವರನ್ನು ಮೂರು ದಿನದ ಹಿಂದೆ ಓಡಿಸಲಾಗಿದೆ. ದಶಕಗಳಿಂದ ಜೀವನೋಪಾಯಕ್ಕಾಗಿ ಕಲ್ಲು ಕುಟುಕುತ್ತಿದ್ದವರನ್ನು ಹೊರ ಹಾಕುವ ಗಣಿ ಅಧಿಕಾರಿಗಳು ಓಡಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ಕೊಟ್ಟಿರುವ ಆದೇಶ ಉಲ್ಲಂಘನೆ ಮಾಡಿ ಮೂರು ದಿನದ ಹಿಂದೆ ಓಡಿಸಿರುವುದು ಕಾನೂನು ಬಾಹಿರ. ಜೀವನೋಪಾಯಕ್ಕೆ ಕಲ್ಲು ಕುಟುಕುವರು ಪರವಾನಗಿ ಪಡೆಯಬೇಕು ಎಂಬ ಕಾನೂನೇ ಇಲ್ಲ. ಬದುಕಿಗಾಗಿ ಕಲ್ಲು ಕುಟುಕುವರನ್ನು ಓಡಿಸಿರುವುದು ಸರಿಯಾದ ಕ್ರಮವಲ್ಲ," ಎಂದು ಈ ಪ್ರಕರಣದಲ್ಲಿ ಅರ್ಜಿದಾರರ ಪರ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಶಂಕರಪ್ಪ ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.