ಬೆಂಗಳೂರಿನಲ್ಲಿ ಲಘು ಸ್ಫೋಟ: ಶಾಸಕ ಹ್ಯಾರಿಸ್ ಗೆ ಗಾಯ
Recommended Video
ಬೆಂಗಳೂರು, ಜನವರಿ 22: ನಗರದ ವಿವೇಕನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಲಘು ಸ್ಫೋಟ ಸಂಭವಿಸಿ ಶಾಸಕ ಹ್ಯಾರಿಸ್ ಗೆ ಗಾಯವಾಗಿದೆ.
ವಿವೇಕನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಲಘು ಸ್ಫೋಟವೊಂದು ಸಂಭವಿಸಿದ ಪರಿಣಾಮ ಹ್ಯಾರಿಸ್ ಅವರಿಗೆ ಗಾಯವಾಗಿದೆ. ಅವರ ಜೊತೆಗೆ ಇನ್ನೂ ನಾಲ್ಕು ಮಂದಿಗೆ ಗಾಯವಾಗಿದೆ.
ಹ್ಯಾರಿಸ್ ಅವರನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹ್ಯಾರಿಸ್ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಹ್ಯಾರಿಸ್ ಅವರ ತೊಡೆ ಮತ್ತು ಕಿವಿ ಭಾಗಕ್ಕೆ ಗಾಯಗಳಾಗಿವೆ ಎಂದು ಹ್ಯಾರಿಸ್ ಪುತ್ರ ನಲಪಾಡ್ ಹೇಳಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಲಘು ಪ್ರಮಾಣದ ಸ್ಫೋಟವಾಗಿದ್ದು, ಕಚ್ಚಾ ಬಾಂಬ್ ಎಂಬ ಅನುಮಾನವನ್ನು ಹ್ಯಾರಿಸ್ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ನಲಪಾಡ್
ಮಾಧ್ಯಮಗಳ ಜೊತೆ ಮಾತನಾಡಿದ ಪುತ್ರ ನಲಪಾಡ್, 'ಒಂದು ಹಸಿರು ಬಣ್ಣದ ಪ್ಲಾಸ್ಟಿಕ್ ನಲ್ಲಿ ಸುತ್ತಿದ ದುಂಡನೆಯ ವಸ್ತುವನ್ನು ಹ್ಯಾರಿಸ್ ಅವರು ಕೂತಿದ್ದ ಚೇರ್ ಕಡೆಗೆ ಎಸೆಯಲಾಯಿತು, ಅದು ಹ್ಯಾರಿಸ್ ಪಕ್ಕ ಕೂತಿದ್ದ ಮೋಹನ್ ಅವರ ಕೈಗೆ ತಗುಲಿ ಕೆಳಗೆ ಬಿದ್ದು ಸ್ಫೋಟವಯಿತು' ಎಂದು ಹೇಳಿದ್ದಾರೆ.
ಹೊನ್ನಾರಪೇಟೆ ಕಾರ್ಪೊರೇಟರ್ ಮೇಲೆ ಆರೋಪ
ಘಟನೆಯಲ್ಲಿ ಹ್ಯಾರಿಸ್ ಜೊತೆಗೆ ಮೋಹನ್, ಚಿಟ್ಟಿಬಾಬು ಮತ್ತು ಸಂಪತ್ ಎಂಬುವರಿಗೂ ಗಾಯವಾಗಿದೆ. ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಕೆಲವು ಮಹಿಳೆಯರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ಹೊನ್ನಾರಪೇಟೆ ವಾರ್ಡ್ ಕಾರ್ಪೊರೇಟರ್ ಶಿವಕುಮಾರ್ ಈ ಕೃತ್ಯದ ಹಿಂದೆ ಇದ್ದಾರೆಂದು ಹ್ಯಾರಿಸ್ ಪರ ಬೆಂಬಲಿಗರು ಆರೋಪಿಸಿದ್ದಾರೆ.
'ನನಗೂ ಹ್ಯಾರಿಸ್ಗೂ ವೈಯಕ್ತಿಕ ದ್ವೇಷವಿಲ್ಲ'
ಆದರೆ ಘಟನೆ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಶಿವಕುಮಾರ್, 'ನನಗೂ ಶಾಸಕ ಹ್ಯಾರಿಸ್ಗೂ ವೈಯಕ್ತಿಕ ದ್ವೇಷ ಇಲ್ಲ, ನಾನು ಹ್ಯಾರಿಸ್ ಅನ್ನು ಭೇಟಿ ಮಾಡುತ್ತೇನೆ, ಘಟನೆ ಬಗ್ಗೆ ತನಿಖೆ ಆಗಲಿ' ಎಂದಿದ್ದಾರೆ.
ಉಕ್ಕಿನ ಸಣ್ಣ ಗುಂಡುಗಳು ದೊರೆತಿವೆ
ಸ್ಥಳಕ್ಕೆ ಪೊಲೀಸರು ಮತ್ತು ಎಫ್ಎಸ್ಎಲ್ ತಂಡ ಆಗಮಿಸಿದ್ದು, ಸ್ಫೋಟ ನಡೆದ ಜಾಗದಲ್ಲಿ ತನಿಖೆ ನಡೆಸಿದ್ದಾರೆ. ಕೆಲವು ಉಕ್ಕಿನ ಬಾಲ್ಸ್ಗಳನ್ನು ಸಂಗ್ರಹಿಸಿದ್ದಾರೆ. ಅದರ ಜೊತೆ ಸ್ಫೋಟಕದಂತೆ ಕಾಣುವ ಪುಡಿಯನ್ನು ಎಫ್ಎಸ್ಎಲ್ ತಂಡ ಸಂಗ್ರಹಿಸಿದ್ದಾರೆ.ಶ್ವಾನ ದಳ ಸಹ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ.