ಪೌಷ್ಟಿಕಾಂಶಯುಕ್ತ ಹಾಲು ವಿತರಣೆ ರಾಜ್ಯದೆಲ್ಲೆಡೆ ವಿಸ್ತರಣೆ: ಸುರೇಶ್ ಕುಮಾರ್
ಬೆಂಗಳೂರು ಸೆ. 12: "ಅದಮ್ಯ ಚೇತನ ಹಾಗೂ ಮುದ್ದೇನಹಳ್ಳಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಪೌಷ್ಠಿಕಾಂಶಯುಕ್ತ ಹಾಲು ವಿತರಣೆಯನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಮಧ್ಯಾಹ್ನದ ಬಿಸಿಯೂಟವನ್ನು ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಬಗ್ಗೆ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಅವರ ಪ್ರಸ್ಥಾಪದ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ಅದಮ್ಯ ಚೇತನ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಅದಮ್ಯ ಚೇತನ ಮಧ್ಯಾಹ್ನದ ಬಿಸಿಯೂಟ ಪಡೆಯುವ ಸರಕಾರಿ ಹಾಗೂ ಅನುದಾನಿತ ಮಕ್ಕಳಿಗೆ ಸಾಯಿಶ್ಯೂರ್ ಪೌಷ್ಟಿಕಾಂಶಯುಕ್ತ ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ನಾನು ಶಿಕ್ಷಣ ಸಚಿವನಾಗಿ ಅಲ್ಲ, ಅನಂತಕುಮಾರ್ ಅವರ ಒಬ್ಬ ಕುಟುಂಬ ಸದಸ್ಯನಾಗಿ ಬಂದಿದ್ದೇನೆ. ಅನಂತಕುಮಾರ್ ಮತ್ತು ನಾನು 1986 ರಿಂದ ಒಟ್ಟಿಗೆ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ. ನಮ್ಮ ಕರ್ನಾಟಕದ ನಿಜವಾದ ಸಾಧಕಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಕರೆಗೆ ಓಗೊಟ್ಟು ಈ ದಿನ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ.
ಇಲ್ಲಿ ಎರಡು ಅಂತಃಕರಣ ಇರುವ ಸಂಸ್ಥೆಗಳು ಜೊತೆಗೂಡಿವೆ. ಇದಕ್ಕೆ ಸರಿಯಾಗಿ 16 ದಿನಗಳ ಹಿಂದೆ ಸತ್ಯ ಸಾಯಿ ಶಿಕ್ಷಣ ಸಂಸ್ತೆಗೆ ಹೋದಾಗ ಸಾಯಿ ಶ್ಯೂರ್ ಬಗ್ಗೆ ನನ್ನ ಗೆಳೆಯರು ಹಲವು ಮಾಹಿತಿಗಳನ್ನು ನೀಡಿದರು. ಮಕ್ಕಳ ಆರೋಗ್ಯಕ್ಕೋಸ್ಕರ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅದಮ್ಯ ಚೇತನದ ಪ್ರೇರಣ ಶಕ್ತಿ ಡಾ ತೇಜಸ್ವಿನಿ
ಕ್ಯಾಷ್ ಕೌಂಟರ್ ಇಲ್ಲದೆ ಎಲ್ಲಾ ರೀತಿಯ ಚಿಕಿತ್ಸೆಮಾಡುವ ಒಂದೇ 1 ಆಸ್ಪತ್ರೆ ಎಂದರೆ ಅದು ವೈಟ್ ಫೀಲ್ಡ್ ನಲ್ಲಿರುವ ಶ್ರೀ ಸತ್ಯ ಸಾಯಿ ಆಸ್ಪತ್ರೆ. ಮಕ್ಕಳಿಗೆ ಪೌಷ್ಠಿಕಾಂಶ ಕೊಡಬೇಕು ಎನ್ನುವ ಈ ಅಂತಃಕರಣದ ಕಾರ್ಯಕ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅದಮ್ಯ ಚೇತನದ ಪ್ರೇರಣ ಶಕ್ತಿ ಎಂದರೆ ಡಾ ತೇಜಸ್ವಿನಿ ಅನಂತಕುಮಾರ್. ಬಹಳಷ್ಟು ಉತ್ಸಾಹದಿಂದ ಕಸರಹಿತ ಅಡುಗೆ ಮನೆಯ ನಿರ್ಮಾಣ ಮಾಡಿದ್ದಾರೆ. ಯಾವುದನ್ನೂ ಹಾಳು ಮಾಡದೆ ಅತ್ಯುತ್ತಮ ಹಾಗೂ ಪ್ರೀತಿಯಿಂದ ಮಾಡಿದ ಆಹಾರವನ್ನು ಬಡಿಸುತ್ತಿದ್ದಾರೆ.
ಇಂದು ಅದಮ್ಯ ಚೇತನ ಮಧ್ಯಾಹ್ನದ ಊಟದ ಕಾರ್ಯಕ್ರಮಕ್ಕೆ ಒಂದು ಸ್ವರೂಪ ನೀಡಿದೆ. ಕೇವಲ ಊಟ ವಲ್ಲ, ಪ್ರೀತಿಯಿಂದ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡುವ ಉತ್ತಮ ಕಾರ್ಯಮಾಡುತ್ತಿದ್ದಾರೆ. ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಜೊತೆಗೂಡಿ ಪೌಷ್ಟಿಕಾಂಶ ನೀಡುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿದರು. ಬಹಳ ಜನ ಕಷ್ಟಪಟ್ಟು ಹಾಲು ಕುಡಿಯುತ್ತಾರೆ. ಒಂದು ಸ್ವಾದಿಷ್ಟ ಅಂಶವನ್ನು ಸೇರಿಸಿ ಪೌಷ್ಟಿಕವಾದ ಹಾಲನ್ನು ನೀಡಲು ಮುಂದಾಗಿರುವುದು ಬಹಳ ಸಂತಸದ ವಿಷಯ.
ಪಿಯುಸಿ ಮಕ್ಕಳಿಗೆ ಮಧ್ಯಾಹ್ನದ ಊಟ
ತೇಜಸ್ವಿನಿ ಅನಂತಕುಮಾರ್ ಅವರು ಪಿಯುಸಿ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ನಿಟ್ಟಿನಲ್ಲಿ ವ್ಯಕ್ತಪಡಿಸಿರುವ ಪ್ರಸ್ತಾಪಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಈ ನಿಟ್ಟಿನಲ್ಲಿ ಸರಕಾರ ಸಕಾರಾತ್ಮಕವಾಗಿ ಚಿಂತಿಸುತ್ತಿದ್ದು, ಆರ್ಥಿಕ ವಾಗಿ ಆಗುವ ಖರ್ಚುವೆಚ್ಚದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಇದನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದರು. ಇದರಿಂದಾಗುವ ಆರ್ಥಿಕ ಹೊರೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಕ್ಕಳಲ್ಲಿ ಪೌಷ್ಟೀಕಾಂಶದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಮಧ್ಯಾಹ್ನದ ಊಟದ ಜೊತೆಯಲ್ಲಿ ಹಾಲಿನೊಂದಿಗೆ ಪೌಷ್ಟಿಕಾಂಶ ಇರುವ ಸಾಯಿ ಶ್ಯೂರ್ ಪುಡಿಯನ್ನು ಸೇರಿಸಿ ಮಕ್ಕಳಿಗೆ ನೀಡುವ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಕೈಜೋಡಿಸಿದೆ. ಕರ್ನಾಟಕ ಸರಕಾರ ಕೂಡಾ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲಿ ಹರಡಲು, ಎಲ್ಲಾ ಮಕ್ಕಳು ಇದರ ಲಾಭ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಅದಮ್ಯ ಚೇತನ - ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಜೊತೆಗೂಡಿ ಗುಲ್ಬರ್ಗಾ ಜಿಲ್ಲೆಯ 10 ಸಾವಿರ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದಾರೆ. ಇದು ಕೂಡಾ ಒಳ್ಳೆಯ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಡಾ ತೇಜಸ್ವಿನಿ ಅನಂತಕುಮಾರ್ ಮಾತನಾಡಿ
ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗುವ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಅನ್ನ - ಅಕ್ಷರ - ಆರೋಗ್ಯ ಈ ಧ್ಯೇಯವಾಕ್ಯದ ಅಡಿಯಲ್ಲಿ ನಡೆಯುತ್ತಿರುವ ನಮ್ಮ ಸಂಸ್ಥೆಯ ಮೂಲಕ ಉತ್ತಮ ಸೇವೆಯನ್ನು ನೀಡುವುದು ನಮ್ಮ ಗುರಿಯಾಗಿದೆ. ಕ್ಷೀರ ಭಾಗ್ಯದ ಹಾಲನ್ನು ಬಳಸಿಕೊಂಡು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ತಯಾರಿಸಲಾಗಿರುವ ಬಾದಾಮ್ ಮಿಶ್ರಿತ ಪೌಷ್ಟಿಕಾಂಶಯುಕ್ತ ಪೌಡರನ್ನು ಮಿಶ್ರ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಮಕ್ಕಳಿಗೂ ಈ ಪೌಷ್ಟಿಕಾಂಶಯುಕ್ತ ಹಾಲಿನ ವಿತರಣೆಗೆ ಮಂತ್ರಿಗಳು ಮುಂದಾಗಿರುವುದು ಸಂತಸದ ವಿಷಯವಾಗಿದೆ.
ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಯೋಜನೆ
ಮುಂಬರುವ ದಿನಗಳಲ್ಲಿ ಮಧ್ಯಾಹ್ನದ ಊಟದ ಜೊತೆಯಲ್ಲಿಯೇ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ನಿಟ್ಟಿನಲ್ಲಿ ಈಗಾಗಲೇ ಅದಮ್ಯ ಚೇತನ ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಲಬುರ್ಗಿ ಜಿಲ್ಲೆಯ ೧೦ ಸಾವಿರ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಜೊತೆಗೂಡಿ ಉಪಹಾರ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಅನ್ನಪೂರ್ಣ ಟ್ರಸ್ಟಿನ ಟ್ರಸ್ಟಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಅದಮ್ಯ ಚೇತನ - ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಜೊತೆಗೂಡಿ ಗುಲ್ಬರ್ಗಾ ಜಿಲ್ಲೆಯ 10 ಸಾವಿರ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದಾರೆ.