ಮೆಟ್ರೋ ರೈಲುಗಳಲ್ಲಿ ಜನಜಾತ್ರೆ: ಜನಸಂದಣಿ ನಿಯಂತ್ರಿಸಲು ಸಿಬ್ಬಂದಿ ಹರಸಾಹಸ
ಬೆಂಗಳೂರು, ಆಗಸ್ಟ್ 15: ಸಾಮಾನ್ಯವಾಗಿ ಸತತ ರಜೆ ಸಿಕ್ಕರೆ ಬೆಂಗಳೂರಿಗರು ಪ್ರವಾಸ ಹೊರಟು ನಿಲ್ಲುತ್ತಾರೆ. ಆಗ ಬೆಂಗಳೂರು ಖಾಲಿ ಖಾಲಿ ಎನಿಸುತ್ತದೆ. ಬಹುತೇಕ ಮಾಲ್, ಬಸ್, ಮೆಟ್ರೋ ರೈಲುಗಳಲ್ಲಿ ಓಡಾಡುವರ ಸಂಖ್ಯೆ ವಿರಳವಾಗಿರುತ್ತದೆ.
ಆದರೆ ಈ ಬಾರಿ ಮಾತ್ರ ಬೆಂಗಳೂರಿನಲ್ಲಿ ರಜೆ ದಿನವೂ ಜನರ ಓಡಾಟ ಭರ್ಜರಿಯಾಗಿದೆ. ಅದರಲ್ಲೂ ಬೆಂಗಳೂರಿನ ಮೆಟ್ರೋಗಳು ಸ್ವಾತಂತ್ಯ್ರ ದಿನದಂದು ತುಂಬಿ ತುಳುಕುತ್ತಿದ್ದವು. ಮೆಟ್ರೋ ರೈಲುಗಳು ಭರ್ತಿಯಾಗಿ ಬರುತ್ತಿದ್ದ ಕಾರಣ ಹಲವು ಪ್ರಯಾಣಿಕರು ನಿಲ್ದಾಣದಲ್ಲೇ ಮತ್ತೊಂದು ರೈಲಿಗಾಗಿ ಕಾಯುವಂತ ಸ್ಥಿತಿ ನಿರ್ಮಾಣವಾಗಿತ್ತು.
ಅದರಲ್ಲೂ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಂತೂ ಜನ ಜಾತ್ರೆಯಂತೆ ಸೇರಿದ್ದರು. ಹಲವು ಮೆಟ್ರೋ ರೈಲಿಗೆ ಹತ್ತಲು ಕೂಡ ಜಾಗವಿಲ್ಲದೆ, ಇನ್ನೊಂದು ರೈಲಿಗಾಗಿ ಕಾಯುವಂತಾಯಿತು. ಜನರ ತಳ್ಳಾಟವನ್ನು ನಿಯಂತ್ರಿಸಲು ಮೆಟ್ರೋ ನಿಲ್ದಾಣದ ಸಿಬ್ಬಂದಿ ಪರದಾಡುವಂತಾಯಿತು.
ಕಾಂಗ್ರೆಸ್ನ ಸಮಾವೇಶಕ್ಕೆ ಪಾಲ್ಗೊಳ್ಳಲು ಮತ್ತು ಸ್ವಾತಂತ್ಯ್ರದ ಸಂಭ್ರಮದ ಪ್ರಯುಕ್ತ ಲಾಲ್ಬಾಗ್ನಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ನ್ಯಾಷನಲ್ ಕಾಲೇಜ್ ಮತ್ತು ಲಾಲ್ಬಾಗ್ ಮೆಟ್ರೋ ನಿಲ್ದಾಣದ ಕಡೆ ಪ್ರಯಾಣ ಮಾಡಿದರು. ಲಾಲ್ಬಾಗ್ ಫಲಪುಷ್ಪಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಆಗಮಿಸಿದರು.
ಜನರನ್ನು ಸೆಳೆಯುತ್ತಿರುವ ಪುನೀತ್, ರಾಜ್ಕುಮಾರ್
ಆಗಸ್ಟ್ 5ರಿಂದ ಆರಂಭವಾಗಿರುವ ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಆಗಸ್ಟ್ 15ರಂದು ತೆರೆ ಬೀಳಲಿದೆ. ಹೀಗಾಗಿ ಅಂತಿಮ ದಿನದಂದು ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಜನ ಸಾಗರದಂತೆ ಹರಿದುಬಂದಿದ್ದರು. ಅದರಲ್ಲೂ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ವರನಟ ಡಾ. ರಾಜ್ಕುಮಾರ್ ಅವರ ಕುರಿತಾದ ಮಾಹಿತಿಗಳು, ಅವರ ಸಾಧನೆಗೆ ಸಂದ ಗೌರವ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ಸ್ವಂತ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಮೂಲಕ ಆಗಮಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದರು. ಬಿಎಂಆರ್ಸಿಎಲ್ ಕೂಡ ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ವಿಶೇಷ ಟಿಕೆಟ್ ವಿತರಣೆ ಮಾಡಿತ್ತು.
ಮತ್ತೊಂದೆಡೆ ಕಾಂಗ್ರೆಸ್ನ ಸ್ವಾತಂತ್ಯ್ರದ ನಡಿಗೆ ಪಾದಯಾತ್ರೆಯಲ್ಲಿ ಭಾಗವಹಿಸಲು ಸಾವಿರಾರು ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದು ಕೂಡ ಮೆಟ್ರೋದಲ್ಲಿ ಜನಸಂದಣಿ ಹೆಚ್ಚಾಗಲು ಕಾರಣವಾಯಿತು. ಸೋಮವಾರ ರಜೆ ಇದ್ದ ಕಾರಣ ನಾಗಸಂದ್ರದ ಐಕಿಯಾ ಮಳಿಗೆಗೆ ಭೇಟಿ ನೀಡಲು ಸಾವಿರಾರು ಮಂದಿ ನಾಗಸಂದ್ರ ಮೆಟ್ರೋ ನಿಲ್ದಾಣದ ಕಡೆಗೆ ತೆರಳಿದರು.
ಜುಲೈ ತಿಂಗಳಿನಲ್ಲಿ ಮೆಟ್ರೋ ರೈಲಿನಲ್ಲಿ ಪ್ರತಿದಿನ ಸರಾಸರಿ 4.7 ಲಕ್ಷ ಪ್ರಯಾಣ ಮಾಡುತ್ತಿದ್ದಾರೆ ಎಂದು ಬಿಎಂಆರ್ ಸಿಎಲ್ ತಿಳಿಸಿತ್ತು. ಕೋವಿಡ್ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ಮೆಟ್ರೋ ಲಾಭದ ಹಳಿಗೆ ಮರಳಿತ್ತು. ಮೊದಲೆಲ್ಲ ವೀಕೆಂಡ್ಗಳಲ್ಲಿ ಮೆಟ್ರೋಗೆ ಪ್ರಯಾಣದ ಕೊರತೆ ಕಾಡುತ್ತಿತ್ತು. ಆದರೆ ಈಗ ವೀಕೆಂಡ್ ಮತ್ತು ರಜಾದಿನಗಳಲ್ಲೂ ಕೂಡ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.