ಕೊಳದ ಮಠದ ಮೇಲೆ ಭೂ ಕಬಳಿಕೆ ಆರೋಪ
ಗೇಣಿ ಕಾಯ್ದೆಯ ಅಡಿಯಲ್ಲಿ ಸರ್ಕಾರ ಎಂ.ಮುನಿಸ್ವಾಮಿ ಅವರಿಗೆ ಹೊಸೂರು ರಸ್ತೆಯ ಲಾಲ್ ಬಾಗ್ ಬಳಿ ಎರಡು ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿದೆ. ಈ ಜಾಗದಲ್ಲಿ ಮುನಿಸ್ವಾಮಿ ಅವರು ನರ್ಸರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೊಳದ ಮಠದ ಶಾಂತವೀರ ಸ್ವಾಮೀಜಿಗಳು, ತಿಮ್ಮೇಗೌಡ ಎಂಬುವವರು ಮುನಿಸ್ವಾಮಿ ಅವರನ್ನು ನರ್ಸರಿ ಬಿಟ್ಟು ತೆರಳುವಂತೆ ಎಚ್ಚರಿಸಿದ್ದಾರೆ.
ಕೊಳದ ಮಠ ಶಾಂತವೀರ ಸ್ವಾಮೀಜಿ ಹಾಗೂ ಲಿಕ್ಕರ್ ದೊರೆ ತಿಮ್ಮೇಗೌಡರ ಬಳಿ ನೂರಾರು ಎಕರೆ ಜಮೀನು ಇದ್ದರೂ, ದಲಿತನೊಬ್ಬನ ಮೇಲೆ ದೌರ್ಜನ್ಯ ಎಸಗಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಪುಟ್ಟಸ್ವಾಮಿ ಆರೋಪಿಸಿದ್ದಾರೆ.
ಕೊಳದ ಮಠ: ಈಗಿನ ಲಾಲ್ ಬಾಗ್ ಅಥವಾ ಅಂದಿನ ಅಣ್ಣೆಪುರ ಕೊಳದ ಮಠ ಸಂಸ್ಥಾನದ ಅಧೀನದ ಭೂಮಿಯಾಗಿತ್ತು. ಕಿದ್ವಾಯಿ ಆಸ್ಪತ್ರೆ, ಡಬ್ಬಲ್ ರೋಡ್ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣ, ಕ್ರಿಶ್ಚಿಯನ್ ಸಂಸ್ಥೆಗಳ ಕಚೇರಿ ಸ್ಥಳಗಳಿಗೂ ಕೊಳದ ಮಠ ಭೂಮಿಯನ್ನು ದಾನ ಮಾಡಿದ ಉದಾಹರಣೆಗಳಿವೆ.
ಜಾತಿ, ಮತ ಪಂಥಗಳ ಬೇಧವಿಲ್ಲದೆ ಭೂಮಿ ದಾನ ಮಾಡುತ್ತಾ ಸಾಮಾಜಿಕ ಸಾಮರಸ್ಯ ಬೆಳೆಸುತ್ತಿರುವ ಕೊಳದ ಮಠದ ವಿರುದ್ಧ ಬಂದಿರುವ ಆರೋಪಗಳನ್ನು ಭಕ್ತರು ಸಾರಾಸಗಟಾಗಿ ವಿರೋಧಿಸಿದ್ದಾರೆ.
ಈ ಹಿಂದೆ ಬಿಡದಿಯ ನಿತ್ಯಾನಂದ ಧ್ಯಾನಪೀಠದ ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿ ಸಿಕ್ಕ ಮೇಲೂ ಕೆಲ ಸ್ವಾಮೀಜಿಗಳು ಹಿಂದೂ ಧರ್ಮಪ್ರತಿಪಾದಕ, ಸ್ವಾಮಿ ನಿತ್ಯಾನಂದನನ್ನು ಬಂಧಿಸಬೇಡಿ ಎಂದು ಕೂಗು ಎಬ್ಬಿಸಿದ್ದರು.
ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸಹಿಸದ ಕೆಲವರು ಈ ರೀತಿ ಅಪಪ್ರಚಾರ ಮಾಡಿ, ಹಿಂದೂಧರ್ಮ ಪ್ರತಿಪಾದಕರನ್ನು ನಾಶ ಮಾಡಲು ಹುನ್ನಾರ ಮಾಡುತ್ತಿದ್ದಾರೆ ಎಂದು ಹೇಳಿದವರಲ್ಲಿ ಕೊಳದ ಮಠದ ಶಾಂತವೀರ ಸ್ವಾಮೀಜಿಗಳು ಪ್ರಮುಖರು ಎಂಬುದನ್ನು ಇಲ್ಲಿ ಸ್ಮರಿಸಬಹುದು.