ಸಾರಿಗೆ ಮುಷ್ಕರ; ಡಿಸಿಎಂ ನೇತೃತ್ವದಲ್ಲಿ ಸಭೆ ಆರಂಭ!
ಬೆಂಗಳೂರು, ಡಿ. 13: ರಾಜ್ಯಾದ್ಯಂತ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಮಹತ್ವದ ಸಭೆ ಆರಂಭವಾಗಿದೆ. ಸಭೆಯಲ್ಲಿ ಸಾರಿಗೆ ಸಂಸ್ಥೆಯ ಐದು ಯೂನಿಯನ್ಗಳ ಮುಖಂಡರು ಭಾಗಿಯಾಗಿದ್ದಾರೆ.
ಎಐಟಿಸಿ, ಇನ್ ಟೆಕ್, ಸಿಐಟಿಸಿ, ಮಹಾಮಂಡಳ ಹಾಗೂ ಬಿಎಂಎಸ್ ಯೂನಿಯನ್ಗಳ ಮುಖಂಡರೊಂದಿಗೆ ಸಾರಿಗೆ ಸಚಿವರು ಮಾತುಕತೆ ನಡೆಸಿದ್ದಾರೆ. ಜೊತೆಗೆ ಕೆಎಸ್ಆರ್ಟಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಹಾಗೂ ವಾಯವ್ಯ ಸಾರಿಗೆ ನಿಗಮಗಳ ಅಧಿಕಾರಿಗಳೂ ಸಭೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ಸಿಬ್ಬಂದಿಯ ಪ್ರತಿನಿಧಿಗಳು ಸಂಧಾನ ಸಭೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಈ ಸಭೆಯ ಬಳಿಕ ಸಿಬ್ಬಂದಿ ಮುಷ್ಕರ ಹಿಂದಕ್ಕೆ ಪಡೆಯುವುದು ಅನುಮಾನ.
ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದು ಅಸಾಧ್ಯ: ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ!
ಜೊತೆಗೆ ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಸಾರಿಗೆ ಸಿಬ್ಬಂದಿ ಬೇಡಿಕೆಯನ್ನು ಆರಂಭದಲ್ಲಿಯೇ ಲಕ್ಷ್ಮಣ ಸವದಿ ಅವರು ತಳ್ಳಿ ಹಾಕಿದ್ದಾರೆ. ಆ ಬೇಡಿಕೆ ಈಡೆರಿಸುವುದು ಸಾಧ್ಯವಿಲ್ಲ ಎಂದು ಲಕ್ಷ್ಮಣ ಸವದಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಭೆಯ ಆರಂಭಕ್ಕೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕುರಿತು ಮಹತ್ವದ ಆರೋಪ ಮಾಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿದ್ದಾರೆ. ಆ ಅಡಿಯೋ ಸಿಕ್ಕ ಬಳಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
Recommended Video
ಸಾರಿಗೆ ಸಚಿವರ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟಿರುವ ಕೋಡಿಹಳ್ಳಿ, ನಿಮ್ಮಲ್ಲಿ ನಾನು ಕಾಂಗ್ರಸ್ ನಾಯಕರೊಂದಿಗೆ ಮಾತನಾಡಿರುವ ಅಡಿಯೊ ಇದ್ದರೆ ಬಿಡುಗಡೆ ಮಾಡಿ. ಏನೇನೊ ಮಾತಾಡಿ ಮುಷ್ಕರದ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದಿದ್ದಾರೆ.