ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕ್ವಾರೆಂಟೈನ್ ಅವಧಿ ಅಂತ್ಯ
ಬೆಂಗಳೂರು, ಮೇ.06: ನೊವೆಲ್ ಕೊರೊನಾ ವೈರಸ್ ಸೋಂಕು ತಗಲಿರುವ ಶಂಕೆ ನಿವಾರಣೆಗೆ ಸ್ವಯಂಕೃತವಾಗಿ ನಾನೇ ಕ್ವಾರೆಂಟೈನ್ ನಲ್ಲಿದ್ದು, ಇಂದಿಗೆ ನನ್ನ ಕ್ವಾರೆಂಟೈನ್ ಅವಧಿ ಇಂದಿಗೆ ಮುಗಿದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ನಾನು ಬುಧವಾರ ಮತ್ತೆ ಕೊರೊನಾ ವೈರಸ್ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದೇನೆ. ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆ ನಾಳೆಯಿಂದ ಪೂರ್ಣವಾಗಿ ಮುನ್ನೆಚ್ಚರಿಕೆ ವಹಿಸಿ, ಎಂದಿನಂತೆ ನಿಯತವಾಗಿ ಕಾರ್ಯ ನಿರ್ವಹಿಸಲಿದ್ದೇನೆ. ಎಲ್ಲ ಹಿತೈಷಿಗಳ ಹಾರೈಕೆ, ಹಿರಿಯರ ಆಶೀರ್ವಾದಗಳಿಗೆ ಧನ್ಯವಾದಗಳು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾದಿಂದ ಕಕ್ಕಾಬಿಕ್ಕಿಯಾದ ಕರುನಾಡಿನ ಕಂಪ್ಲೀಟ್ ಕಹಾನಿ!
ಕರ್ನಾಟಕದಲ್ಲಿ ಲ್ಯಾಬ್ ಗಳ ಕೊರತೆ ಮನಗಂಡು ರಾಜ್ಯ ಸರ್ಕಾರವು ಹೊಸದಾಗಿ 60 ವೈದ್ಯಕೀಯ ಪ್ರಯೋಗಾಲಯಗಳನ್ನು ತೆರೆಯಲು ತೀರ್ಮಾನಿಸಿದೆ. ಇದರ ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತದೆ ಎಂದು ಮಂಗಳವಾರವಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದರು.
ಮಂಡ್ಯದಲ್ಲಿ ಕೊವಿಡ್-19 ಪ್ರಯೋಗಾಲಯ:
ಮಂಡ್ಯದ ಜನರಿಗೆ ನೀಡಿದ ಭರವಸೆಯಂತೆ ಈಗ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ #COVID19 ಪರೀಕ್ಷಾ ಪ್ರಯೋಗಾಲಯ ಸಿದ್ಧಗೊಂಡಿದೆ. ಕೊರೋನಾ ನಿಯಂತ್ರಣಕ್ಕೆ ಪರೀಕ್ಷೆ ಅತ್ಯಂತ ಮಹತ್ವಪೂರ್ಣವಾಗಿದ್ದು, ರಾಜ್ಯದ ಒಟ್ಟು ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಗೆ 29 ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಖಾಸಗಿ ವೈದ್ಯಕೀಯ, ESIS ವೈದ್ಯಕೀಯ ಕಾಲೇಜುಗಳಲ್ಲಿ ಕೊವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಕೊರೊನಾ ಪರೀಕ್ಷೆಗೆ RT-PCR ಲ್ಯಾಬ್ ಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಮುಂದಿನ ಒಂದೇ ತಿಂಗಳಿನಲ್ಲಿ ರಾಜ್ಯದಲ್ಲಿ ಒಟ್ಟು 60 ಹೊಸ ಲ್ಯಾಬ್ ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.