ಬಿಜೆಪಿ ವಾಟ್ಸಪ್ ಗ್ರೂಪ್ನಿಂದ ಸಂಸದ ತೇಜಸ್ವಿಸೂರ್ಯ ಎಕ್ಸಿಟ್ ಆಗಿದ್ದೇಕೆ?
ಬೆಂಗಳೂರು, ಜ. 18: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ಉದ್ಘಾಟನೆಗೆ ಭದ್ರತಾ ದೃಷ್ಟಿಯಿಂದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
LIVE: ಹುಬ್ಬಳ್ಳಿಯಲ್ಲಿ ಅಮಿತ್ ಶಾ ವಿರುದ್ಧ ಪ್ರತಿಭಟನೆ
ಆದರೆ ರಾಜ್ಯ ಬಿಜೆಪಿ ಘಟಕದಿಂದ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಕಳುಹಿಸಲಾಗಿತ್ತು. ಈ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆಯೆ ತೇಜಸ್ವಿ ಸೂರ್ಯ ಅವರು ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ವಾಟ್ಸಪ್ ಗ್ರೂಪ್ನಿಂದ ಎಕ್ಸಿಟ್ ಆಗಿದ್ದಾರೆ.
ತೇಜಸ್ವಿ ಸೂರ್ಯ ಅವರ "Team Teajsvi for Media"
ಮಾದ್ಯಮ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕವೇ ಬಿಜೆಪಿ ಹೈಕಮಾಂಡ್ ಕಣ್ಣಿಗೆ ಬಿದ್ದು ಆಮೇಲೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಕೊಂಡು ಗೆದ್ದಿದ್ದ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಭದ್ರತಾ ದೃಷ್ಟಿಯಿಂದ ಈಗ ಮಾಧ್ಯಮಗಳು ಬೇಡವಾಗಿವೆಯಾ?. ಹೌದು ಎನ್ನುತ್ತಿವೆ ಅವರ ನಡೆಗಳು. ಇಂದು ನಡೆದ ಬೆಂಗಳೂರು ದಕ್ಷಿಣ ಲೋಕಸಭಾ ಕಚೇರಿ ಉದ್ಘಾಟನೆಗೆ ಭದ್ರತಾ ದೃಷ್ಟಿಯಿಂದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿತ್ತು. ಈ ಕುರಿತು ಸಂಸದ ತೇಜಸ್ವಿ ಸೂರ್ಯ ಅಧಿಕೃತ ವಾಟ್ಸಪ್ ಗ್ರೂಪ್ 'Team Tejasvi for Media' ಗ್ರೂಪ್ ಮಾಹಿತಿ ಕೊಡಲಾಗಿತ್ತು.
ಜಯನಗರದಲ್ಲಿ ನಡೆದ ಸಂಸದರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಧ್ಯಮಗಳಿಗೆ ಮೊದಲು ಆಹ್ವಾನವನ್ನು ಕೊಡಲಾಗಿತ್ತು. ಬಳಿಕ ಮಾಧ್ಯಮಗಳಿಗೆ ಪ್ರವೇಶವಿಲ್ಲ ಎಂಬ ಮಾಹಿತಿಯನ್ನು ತೇಜಸ್ವಿ ಸೂರ್ಯ ಅವರ ಮಾಧ್ಯಮ ವಿಭಾಗ ಕೊಟ್ಟಿತ್ತು. ಇದರಿಂದ ಗೊಂದಲ ಉಂಟಾಗಿತ್ತು.
ಕಚೇರಿ ಉದ್ಘಾಟನೆಗೆ ಅಧಿಕೃತ ಆಹ್ವಾನ ಕೊಟ್ಟಿದ್ದ ಬಿಜೆಪಿ
ಈ ಮಧ್ಯೆ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದಿಂದಲೂ ಮಾಧ್ಯಮಗಳಿಗೆ ಅಧಿಕೃತ ಆಹ್ವಾನ ಕೊಡಲಾಗಿತ್ತು. ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಸಹ ಸಂಚಾಲಕ ರಾಘವೇಂದ್ರ ಅವರು ಇಂದಿನ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಅಧಿಕೃತ ವಾಟ್ಸಪ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ವರದಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರ ನೂತನ ಕಚೇರಿ ಉದ್ಘಾಟನೆಯನ್ನು ಕೇಂದ್ರಗೃಹ ಸಚಿವ ಅಮಿತ್ ಶಾ ಅವರು ನೆರವೇರಿಸಲಿದ್ದಾರೆ. ಮಾಧ್ಯಮ ವರದಿಗಾರರು ಮತ್ತು ಛಾಯಾಗ್ರಾಹಕರನ್ನು ಕಳುಹಿಸಿ ಸೂಕ್ತ ಪ್ರಚಾರ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು.
ಕ್ಷಮಿಸಿ ಎಂದ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗ
ಸಂಸದ ತೇಜಸ್ವಿ ಸೂರ್ಯ ಅವರ ಮಾಧ್ಯಮ ವಿಭಾಗ, ಮೊದಲು ಆಹ್ವಾನಿಸಿ, ನಂತರ ಮಾಧ್ಯಮ ಪ್ರವೇಶ ನಿಷೇಧಿಸಲಾಗಿದೆ ಎಂದು ಮಾಹಿತಿ ಕೊಟ್ಟಿತ್ತು. ಆದರೆ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಕೊಡಲಾಗಿತ್ತು. ಗೊಂದಲಕ್ಕೀಡಾದ ಮಾಧ್ಯಮ ಪ್ರತಿನಿಧಿಗಳು ರಾಜ್ಯ ಬಿಜೆಪಿ ಮಾಧ್ಯಮ ಗ್ರೂಪ್ನಲ್ಲಿ, 'ರಾಜ್ಯ ಕಚೇರಿಯಿಂದ ಆಹ್ವಾನ ಈಗ ಕಳುಹಿಸಿದ್ದೀರಿ. ಸಂಸದರ ಕಚೇರಿಯಿಂದ ಭದ್ರತಾ ದೃಷ್ಟಿಯಿಂದ ಮಾಧ್ಯಮಕ್ಕೆ ಪ್ರವೇಶ ಇಲ್ಲ ಅಂತಾ ಕಳುಹಿಸಿದ್ದಾರೆ. ಯಾರನ್ನು ನಂಬಬೇಕು? ಸಂಸದರ ಕಚೇರಿಯಿಂದ ಹಾಕಿರೋದು ಅಧಿಕೃತವೋ ರಾಜ್ಯ ಬಿಜೆಪಿ ಕಚೇರಿಯಿಂದ ಹಾಕಿರೋದು ಅಧಿಕೃತವೋ?' ಎಂದು ಸ್ಪಷ್ಟನೆ ಕೇಳಿದ್ದರು.
ಸ್ಪಷ್ಟನೆ ಕೊಟ್ಟ ರಾಜ್ಯ ಬಿಜೆಪಿ ಮಾಧ್ಯಮ ಘಟಕ ತನ್ನ ಮಾಹಿತಿಯನ್ನು ಹಿಂದಕ್ಕೆ ಪಡೆದುಕೊಂಡಿತು. 'ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಉದ್ಘಾಟನೆಗೆ ಸಂಬಂಧಿಸಿದಂತೆ ಸಂಸದರದ ಕಚೇರಿಯಿಂದ ಕಳುಹಿಸಲಾಗಿರುವ ಮಾಹಿತಿಯೇ ಅಧಿಕೃತವಾಗಿದ್ದು, ಬಿಜೆಪಿ ಕಾರ್ಯಾಲಯದಿಂದ ಕಳುಹಿಸಲಾಗಿದ್ದ ಆಹ್ವಾನವನ್ನು ಹಿಂಪಡೆಯಲಾಗುತ್ತಿದೆ ಗೊಂದಲಕ್ಕೆ ಕ್ಷಮಿಸಿ' ಎಂದು ಸ್ಪಷ್ಟನೆ ಕೊಟ್ಟಿತು.
ಮಾಧ್ಯಮ ಪ್ರತಿನಿಧಿಗಳಿಂದ ತರಾಟೆ; ತೇಜಸ್ವಿ ಸೂರ್ಯ ಎಕ್ಸಿಟ್!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸುವ ಕಾರ್ಯಕ್ರಮದ ಬಗ್ಗೆ ಗೊಂದಲ ಉಂಟಾದಾಗ ಸಹಜವಾಗಿಯೆ ಮಾಧ್ಯಮ ಪ್ರತಿನಿಧಿಗಳು ಗ್ರೂಪ್ನಲ್ಲಿ ತರಾಟೆಗೆ ತೆಗೆದುಕೊಂಡರು. ಸೂಕ್ತ ಮಾಹಿತಿಯನ್ನು ಕೊಡುವುದಕ್ಕೆ ಆಗ್ರಹ ಮಾಡಿದ್ದರು. ಇದರಿಂದ ಮುಜುಗರ ಉಂಟಾಯ್ತೊ? ಅಥವಾ ಬೇರೆ ಏನಾಯ್ತೊ ಗೊತ್ತಿಲ್ಲ. ಏಕಾಏಕಿ ರಾಜ್ಯ ಬಿಜೆಪಿ ಅಧಿಕೃತ ವಾಟ್ಸಪ್ ಗ್ರೂಪ್ನಿಂದ ಸಂಸದ ತೇಜಸ್ವಿ ಸೂರ್ಯ ಅವರು ಎಕ್ಸಿಟ್ ಆದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಂಡನೆ
ಭದ್ರತೆಯ ವಿಚಾರ ಮಧ್ಯಮದವರಿಗೂ ಅರಿವಿರುತ್ತದೆ. ಆದರೆ ಕರೆದು ಅಪಮಾನ ಮಾಡುವುದು ಸರಯಲ್ಲ. ಕರೆದಂಗೂ ಇರಬೇಕು, ಬರದಂಗೂ ಆಗಬೇಕು ಎಂಬಂತೆ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ವರ್ತನೆ ಮಾಡಬಾರದು. ಮೊದಲೇ ಗೊಂದಲ ಉಂಟಾಗದಂತೆ ತೀರ್ಮಾನ ಕೈಗೊಳ್ಳಬೇಕು. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಬಂದಾಗ ಆಗದಂತಹ ಭದ್ರತಾ ವ್ಯತ್ಯಾಸ ಇಂಥ ಕಾರ್ಯಕ್ರಮಗಳಲ್ಲಿ ಆಗುತ್ತವೆಯಾ? ಒಟ್ಟಾರೆ ಮಾಧ್ಯಮಗಳಿಗೆ ಸೂಕ್ತ ಮಾಹಿತಿಯನ್ನು ಕೊಡುವುದು ಅವರ ಜವಾಬ್ದಾರಿ. ಈ ಬಗ್ಗೆ ಮುಂದೆ ಸಂಸದರಾದ ತೇಜಸ್ವಿ ಸೂರ್ಯ ಅವರು ಎಚ್ಚರಿಕೆ ವಹಿಸಲಿ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ್ ತಮ್ಮ ಅಭಿಪ್ರಾಯವನ್ನು 'ಒನ್ ಇಂಡಿಯಾ' ಜೊತೆಗೆ ಹಂಚಿಕೊಂಡರು.
ಇದೀಗ ಸೂರ್ಯಗೆ ಬೇಡವಾದ ಮಾಧ್ಯಮ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ದಿ. ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವ್ರನ್ನ ಹಿಂದಿಕ್ಕಿ ರಾತ್ರಿಬೆಳಗಾಗುವುದರಲ್ಲಿ ಬಿಜೆಪಿ ಟಿಕೆಟ್ ಪಡೆದಿದ್ದರು ಸಂಸದ ತೇಜಸ್ವಿಸೂರ್ಯ ಬಹುತೇಕ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕವೇ ಪ್ರವರ್ಧಮಾನಕ್ಕೆ ಬಂದವರು.
ಆದರೆ ಸಂಸದರಾದ ಬಳಿಕ ಮಾಧ್ಯಮಗಳಿಂದ ತೇಜಸ್ವಿ ಸೂರ್ಯ ಅವರು ದೂರವಾಗಿದ್ದಾರೆ. ಮಾದ್ಯಮ ನಿಷೇಧ ಗೊಂದಲಕ್ಕೆ ಸಂಬಂಧಿಸಿದಂತೆ ಅವರ ಪ್ರತಿಕ್ರಿಯೆಗೆ 'ಒನ್ ಇಂಡಿಯಾ' ದೂರವಾಣಿ ಮೂಲಕ ಸಂಪರ್ಕಕ್ಕೆ ಪ್ರಯತ್ನಿದರೂ ಕರೆಯನ್ನು ಅವರು ಸ್ವೀಕರಿಸಲಿಲ್ಲ.