ಮಾಂಸ ಮಾರುವವನ ಮಗಳಿಗೆ ಆರು ಚಿನ್ನದ ಪದಕ!
ಬೆಂಗಳೂರು, ಮೇ.21: ತಂದೆ ಓದಿದ್ದು ಏಳನೇ ತರಗತಿ, ತಾಯಿ ಕಲಿತದ್ದು ಎರಡನೇ ತರಗತಿ . ಸಹೋದರರು ಹತ್ತನೇ ತರಗತಿ ಓದಿಲ್ಲ, ಆದರೆ ಮಗಳು ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕ ಗಳಿಸಿದ್ದಾಳೆ.
ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದಲ್ಲಿ ಆರು ಚಿನ್ನದ ಪದಕ ಮತ್ತು ಮೂರು ನಗದು ಬಹುಮಾನ ಪಡೆದ ನೂರ್ಜಾನ್ ಅವರ ಸಾಧನೆಯ ಕಥೆಯಿದು.[ಎಸ್ಎಸ್ಎಲ್ಸಿ ಟಾಪರ್ ನಿತ್ಯಾ ಸುರಭಿ ಸಂದರ್ಶನ]
ವಿದ್ಯಾರ್ಥಿ ವೇತನದ ಮೂಲಕವೇ ಎಂಎಸ್ಸಿ ಮುಗಿಸಿದ ಇವರು ಬಾಲ್ಯದಲ್ಲಿ ಉನ್ನತ ಶಿಕ್ಷಣದ ಕನಸನ್ನೇ ಕಂಡಿರಲಿಲ್ಲ. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಇವರು ಬಾಗೇಪಲ್ಲಿ ನ್ಯಾಷನಲ್ ಕಾಲೇಜ್ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದಾರೆ. ಬಿಎಸ್ಸಿಯಲ್ಲಿ ಶೇ.85 ಅಂಕಗಳಿಸಿದ ಇವರಿಗೆ ಜಿಂದಾಲ್ ಮತ್ತು ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು.
ತಂದೆ ಬಾಗೇಪಲ್ಲಿಯ ಸಹೋದರನ ಮಾಂಸದ ಅಂಗಡಿಯಲ್ಲಿ ದುಡಿಯುತ್ತಿದ್ದಾರೆ. ತಂದೆಯ ಆದಾಯ ಕುಟುಂಬದ ನಿರ್ವಹಣೆಗೆ ಮಾತ್ರ ಸಾಕಾಗುತ್ತದೆ. ಹೀಗಾಗಿ ನನ್ನ ಅದೃಷ್ಟಕ್ಕೆ ಪರೀಕ್ಷೆಯಲ್ಲಿ ಉತ್ತಮ ಅಂಕ ಬಂತು. ಇದರಿಂದಾಗಿ ಸ್ಕಾಲರ್ಶಿಪ್ ಸಿಕ್ಕಿ ಚಿನ್ನದ ಪದಕ ಸಿಕ್ಕಿತು ಎಂದು ಹೇಳಿತ್ತಾರೆ ನೂರ್ಜಾನ್.[ಕನ್ನಡ ಮಾಧ್ಯಮಕ್ಕೆ ಕೀರ್ತಿ ತಂದ ಕುಡ್ಲ ಹುಡ್ಗಿ]
ತಂದೆ ರಫಿಕ್ ಮಗಳಿಗೆ ಮದುವೆ ಆಗುವಂತೆ ಒತ್ತಾಯ ಮಾಡುವುದಿಲ್ಲವಂತೆ . ಪಿಎಚ್ಡಿ ಮಾಡಲು ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ. ವಿದೇಶಿ ಕಂಪೆನಿಯ ಕೈ ಕೆಳಗೆ ದುಡಿಯುವುದಕ್ಕಿಂತ ಪಿಎಚ್ಡಿ ಮಾಡಿ ಉತ್ತಮ ಉಪನ್ಯಾಸಕಿ ಆಗುವ ಕನಸನ್ನು ನೂರ್ಜಾನ್ ಇಟ್ಟುಕೊಂಡಿದ್ದಾರೆ.