ಬೆಂಗಳೂರಿನ ಈ 10 ಜಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಿಎಂ ಸೂಚನೆ
ಬೆಂಗಳೂರು, ಜೂನ್ 26: ಬೆಂಗಳೂರಿನಲ್ಲಿರುವ ಅಡೆತಡೆಗಳನ್ನು ನಿವಾರಿಸಿ, ಸಿವಿಲ್ ಕಾಮಗಾರಿಯನ್ನು ಚುರುಕುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಸಿಗ್ನಲ್ ಸಿಂಕ್ರೊನೈಸೇಶನ್ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಹೆಬ್ಬಾಳ, ಮಹದೇವಪುರ ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಸೆಂಟ್ ಜಾನ್ಸ್ ಆಸ್ಪತ್ರೆ, ಭಟ್ಟರಹಳ್ಳಿ ಜಂಕ್ಷನ್, ವೈಟ್ಫೀಲ್ಡ್ ರಸ್ತೆ ಗಳು ಸೇರಿದಂತೆ 10 ಪ್ರಮುಖ ಪ್ರದೇಶಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಿಸುವುದರ ಜತೆ ಟ್ರಾಫಿಕ್ ಸಿಗ್ನಲ್ ಗಳನ್ನು ಸಿಂಕ್ರೋನೈಜ್ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ಕೆಲಸದ ಮೇಲುಸ್ತುವಾರಿಯನ್ನು ಖುದ್ದು ಡಿಸಿಪಿ ಗಳೇ ವಹಿಸಿಕೊಳ್ಳಬೇಕೆಂದು ಅವರು ಸೂಚಿಸಿದರು. ಬೆಂಗಳೂರು ನಗರದ ಸಂಚಾರ ಸುವ್ಯವಸ್ಥೆ ಕುರಿತು ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ (BWSSB) ಹಾಗೂ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸಭೆ ನಡೆಸಿದರು.
ಬೆಂಗಳೂರು ಟ್ರಾಫಿಕ್ ಸಮಸ್ಯೆ; ಮೋದಿ ಕೊಟ್ಟ ಗಡುವು ಏನು?
ಸಂಚಾರ ದಟ್ಟಣೆ ನಿವಾರಣೆಗೆ, ನಗರಾಭಿವೃದ್ಧಿ ಮತ್ತು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರು, ಬಿಎಂಆರ್ ಸಿಎಲ್, ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ಒಟ್ಟಾಗಿ ಪರಿಹಾರ ಕ್ರಮಗಳನ್ನು ರೂಪಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಳೆಯಾದಾಗ ನೀರುನುಗ್ಗಿ ಸಂಚಾರ ದಟ್ಟಣೆಯಾಗುತ್ತಿರುವ 50 ಸ್ಥಳಗಳನ್ನು ತಕ್ಷಣ ದುರಸ್ತಿ ಮಾಡಲು ಸೂಚಿಸಿದರು.
ಅತ್ತಿಬೆಲೆ ಹೆದ್ದಾರಿ ಟೋಲ್ ದರ ಜುಲೈ 1ರಿಂದ ಏರಿಕೆ: ಹೊಸ ದರದ ವಿವರ
16 ಸಾವಿರ ಹೊಸ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚನೆ
ನಿರ್ಭಯಾ ಯೋಜನೆಯಲ್ಲಿ ಅಳವಡಿಸುವ ಕ್ಯಾಮರಾಗಳಲ್ಲಿ ಟ್ರಾಫಿಕ್ ಸಿಗ್ನಲ್ಗಳಲ್ಲಿ ಆದ್ಯತೆ ಮೇರೆಗೆ ಕ್ಯಾಮರಾ ಅಳವಡಿಸುವಂತೆ ತಿಳಿಸಿದ್ದಾರೆ. 2021ರ ಅಕ್ಟೋಬರ್ನಲ್ಲಿ, ಕರ್ನಾಟಕ ಸರ್ಕಾರವು ಬೆಂಗಳೂರಿನಾದ್ಯಂತ 16000 ಕಣ್ಗಾವಲು ಕ್ಯಾಮೆರಾಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದ್ದು, ನಗರದಲ್ಲಿ ಮಹಿಳೆಯರಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಒಕ್ಕೂಟದಿಂದ 667 ಕೋಟಿ ರುಪಾಯಿಗಳನ್ನು ನಿಗದಿಪಡಿಸಲಾಗಿದೆ.
ಪ್ರತಿ ಸಿಸಿಟಿವಿಯು ಸುರಕ್ಷತಾ ದೀಪಗಳು, ಪ್ಯಾನಿಕ್ ಬಟನ್ಗಳನ್ನು ಹೊಂದಿರುತ್ತದೆ ಮತ್ತು ಒತ್ತಿದಾಗ ಜೋರಾಗಿ ಸೈರನ್ ಶಬ್ದ ಮಾಡುತ್ತದೆ ಎಂದು ಸರ್ಕಾರ ಆ ಸಮಯದಲ್ಲಿ ಘೋಷಿಸಿತ್ತು.
ಸಿಗ್ನಲ್ ಸಿಂಕ್ರೋನೈಸೇಷನ್ ಕಾಮಗಾರಿ ಪ್ರಾರಂಭಿಸಲು ಸೂಚನೆ
ಸಿಬಿಡಿ, ಹೈಡೆನ್ಸಿಟಿ ಕಾರಿಡಾರ್ ನಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಸಿಗ್ನಲ್ ಗಳ ಸಿಂಕ್ರೊನೈಸೇಷನ್ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲು ಸಿಎಂ ಬೊಮ್ಮಾಯಿ ಸೂಚಿಸಿದರು.
ಸಂಚಾರ ಪೊಲೀಸರ ಸಂಖ್ಯೆ ಹೆಚ್ಚಿಸಿ. ವಾಹನ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ ನೀಡಿ ಎಂದು ಡಿಜಿಪಿ ಪ್ರವೀಣ್ ಸೂದ್ಗೆ ಸೂಚಿಸಿದ್ದಾರೆ. ಬಿಡಬ್ಲ್ಯುಎಸ್ಎಸ್ಬಿ, ಬಿಎಂಆರ್ ಸಿಎಲ್ (BMRCL) ನವರು ಕಾಮಗಾರಿಗಾಗಿ ಅಗೆದ ರಸ್ತೆ ಹಾಗೆಯೇ ಇವೆ. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಆ ರಸ್ತೆಗಳ ದುರಸ್ತಿ ನಡೆಸುವಂತೆ ಆದೇಶ ನೀಡಿದ್ದಾರೆ.
ಭಾರಿ ವಾಹನಗಳ ಸಂಚಾರ ನಿಯಂತ್ರಣಕ್ಕೆ ಕ್ರಮ
ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚಿಸಿದರು.
ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಮತ್ತು ಹೈಡೆನ್ಸಿಟಿ ರಸ್ತೆಗಳ ಒತ್ತುವರಿ, ಅಡೆತಡೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ. ನಗರ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ. ಈ ಕುರಿತು ಕೈಗೊಂಡ ಕ್ರಮಗಳ ಕುರಿತು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ, ತಾವೇ ಖುದ್ದು ವಲಯವಾರು ಸಭೆ ನಡೆಸುವುದಾಗಿ ತಿಳಿಸಿದರು.
ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು ಮುಂದು
ನ್ಯಾವಿಗೇಷನ್, ಟ್ರಾಫಿಕ್ ಮತ್ತು ಮ್ಯಾಪ್ ಉತ್ಪನ್ನಗಳ ನೆದರ್ಲ್ಯಾಂಡ್ಸ್ ಮೂಲದ ಜಾಗತಿಕ ಪೂರೈಕೆದಾರ ಟಾಮ್ಟಾಮ್ನ ವಾರ್ಷಿಕ ಸಂಚಾರ ಸೂಚ್ಯಂಕದ ಒಂಬತ್ತನೇ ಆವೃತ್ತಿಯ ಪ್ರಕಾರ, ಬೆಂಗಳೂರು 2019 ರಲ್ಲಿ 57 ದೇಶಗಳಲ್ಲಿ 415 ನಗರಗಳನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
"ದಕ್ಷಿಣ ಭಾರತದ ನಗರದ ಚಾಲಕರು ಸರಾಸರಿ ಶೇಕಡಾ 71 ಹೆಚ್ಚುವರಿ ಪ್ರಯಾಣದ ಸಮಯವನ್ನು ಟ್ರಾಫಿಕ್ನಲ್ಲಿ ಕಳೆಯುವುದರೊಂದಿದೆ ಬೆಂಗಳೂರು ಈ ವರ್ಷ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ" ಎಂದು ಟಾಮ್ಟಾಮ್ ತನ್ನ ವರದಿಯಲ್ಲಿ ತಿಳಿಸಿದೆ.